ದೆಹಲಿಯಲ್ಲಿರುವ ಕರ್ನಾಟಕ ಬಿಜೆಪಿ ಶಾಸಕರು ಗುಪ್ತ ಸ್ಥಳಕ್ಕೆ ಸ್ಥಳಾಂತರ?
ನವದೆಹಲಿ, ಜನವರಿ 14: ನವದೆಹಲಿಯಲ್ಲಿರುವ ಬಿಜೆಪಿಯ ಎಲ್ಲಾ ಶಾಸಕರನ್ನು ಗುಪ್ತ ಸ್ಥಳಕ್ಕೆ ಸ್ಥಳಾಂತರಿಸಲು ಬಿಜೆಪಿ ಮುಂದಾಗಿದೆ. ಮುಂಬೈ ಅಥವಾ ಹರಿಯಾಣದ ಯಾವುದಾದರೂ ರೆಸಾರ್ಟ್ಗೆ ಅವರನ್ನು ಸ್ಥಳಾಂತರಿಸಲಾಗುತ್ತದೆ ಎನ್ನಲಾಗುತ್ತಿದೆ.
ಕರ್ನಾಟಕ ಬಿಜೆಪಿಯ ಎಲ್ಲಾ ಶಾಸಕರು ದೆಹಲಿಯಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಲೆಂದು ಮೂರು ದಿನಗಳ ಮುಂಚೆ ತೆರಳಿದ್ದರು. ಆದರೆ ಇದೇ ಸಮಯದಲ್ಲಿ ಆಪರೇಷನ್ ಕಮಲ ಮೂಲಕ ಸರ್ಕಾರ ಪತನಗೊಳಿಸಲು ಸಹ ಬಿಜೆಪಿ ಮುಂದಾಗಿದ್ದು, ಮೊದಲು ತಮ್ಮ ಶಾಸಕರನ್ನು ಸಂರಕ್ಷಿಸುವ ದೃಷ್ಠಿಯಿಂದ ದೆಹಲಿಯಿಂದ ಶಾಸಕರನ್ನು ಬೇರೆಡೆಗೆ ಸ್ಥಳಾಂತರಿಸಲಾಗುತ್ತಿದೆ ಎನ್ನಲಾಗಿದೆ.
ಬಿಜೆಪಿಯ ಶಾಸಕರೊಂದಿಗೆ ಇಂದು ಸಂಜೆ ವೇಳೆಗೆ ಅಮಿತ್ ಶಾ ಸಭೆ ನಡೆಸಲಿದ್ದು, ಸಭೆಯ ನಂತರ ಎಲ್ಲಾ ಶಾಸಕರನ್ನು ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಲಾಗುತ್ತದೆ ಎಂಬ ಸುದ್ದಿ ದಟ್ಟವಾಗಿ ಹರಿದಾಡುತ್ತಿದೆ.

ಕೈ ಶಾಸಕರು ಮುಂಬೈನಲ್ಲಿ?
ಈಗಾಗಲೇ ಮೂವರು ಮಂದಿ ಕಾಂಗ್ರೆಸ್ ಶಾಸಕರು ಮುಂಬೈನ ಹೊಟೆಲ್ ಒಂದರಲ್ಲಿ ತಂಗಿದ್ದು, ಬಿಜೆಪಿ ಪಾಳಯದ ಜೊತೆ ಕೈಜೋಡಿಸಲು ತಯಾರಾಗಿದ್ದಾರೆ ಎನ್ನಲಾಗಿದೆ. ರಮೇಶ್ ಜಾರಕಿಹೊಳಿ ಸಹ ಇವರಲ್ಲೊಬ್ಬರಾಗಿದ್ದು, ಇನ್ನೂ ಕೆಲವು ಶಾಸಕರನ್ನು ಮುಂಬೈಗೆ ಕರೆಸಿಕೊಳ್ಳಲಾಗುತ್ತಿದೆ ಎಂಬ ಗುಮಾನಿ ಇದೆ.

ಬಿಜೆಪಿ ಶಾಸಕರ ಉಳಿಸಿಕೊಳ್ಳಲು ಕಸರತ್ತು
ಬಿಜೆಪಿಯು ಕಾಂಗ್ರೆಸ್-ಜೆಡಿಎಸ್ ಪಕ್ಷದ ಶಾಸಕರನ್ನು ಸೆಳೆಯುವ ಸಮಯದಲ್ಲಿ ತಮ್ಮ ಶಾಸಕರನ್ನು ಸಹ ಇತರ ಪಕ್ಷಗಳಿಂದ ಉಳಿಸಿಕೊಳ್ಳಲೆಂದು ಜಾಗೃತೆ ವಹಿಸಿದ್ದು, ಈಗಾಗಲೇ ದೆಹಲಿಯಲ್ಲಿ ಒಟ್ಟಾಗಿರುವ ಎಲ್ಲಾ ಶಾಸಕರನ್ನು ಅಲ್ಲಿಂದಲೇ ಹರಿಯಾಣಾದ ರೆಸಾರ್ಟ್ ಒಂದಕ್ಕೆ ಕರೆದುಕೊಂಡು ಹೋಗಲು ತಯಾರಿ ನಡೆದಿದೆ.

ಅಮಿತ್ ಶಾ ಸಭೆ ನಂತರ ಸ್ಥಳಾಂತರ
ಅಮಿತ್ ಶಾ ಅವರು ಇಂದು ಬಿಜೆಪಿ ಶಾಸಕರನ್ನು ಉದ್ದೇಶಿಸಿ ಸಭೆ ನಡೆಸಲಿದ್ದಾರೆ. ಸಭೆಯ ನಂತರ ಎಲ್ಲಾ ಶಾಸಕರು ಒಟ್ಟಿಗೆ ವಿಮಾನ ಹತ್ತಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಮುಖಂಡ ಯಡಿಯೂರಪ್ಪ ಒಬ್ಬರೇ ಬೆಂಗಳೂರಿಗೆ ಬರಲಿದ್ದಾರೆ. ಇಲ್ಲಿಗೆ ಬಂದು ಸರ್ಕಾರ ರಚನೆಯ ಮುಂದಿನ ಹಂತಗಳನ್ನು ಅವರು ನಿರ್ವಹಿಸಿದ್ದಾರೆ ಎನ್ನಲಾಗುತ್ತಿದೆ.

ಹರಿಯಾಣದಲ್ಲಿ ಬಿಜೆಪಿ ಸರ್ಕಾರ
ಹರಿಯಾಣದಲ್ಲಿ ಬಿಜೆಪಿ ಸರ್ಕಾರವಿದೆ. ಹಾಗಾಗಿ ಶಾಸಕರನ್ನು ಅಲ್ಲಿಗೆ ಶಿಫ್ಟ್ ಮಾಡಿದರೆ ಭದ್ರತೆಯ ಸಮಸ್ಯೆ ಬರುವುದಿಲ್ಲವೆಂಬ ಕಾರಣದಿಂದ ಹರಿಯಾಣವನ್ನು ಆರಿಸಿಕೊಳ್ಳಲಾಗಿದೆ. ಶಾಸಕರನ್ನು ಹರಿಯಾಣಕ್ಕೆ ಕರೆತರುವ ಬಗ್ಗೆ ಮೊದಲು ಮಾತು-ಕತೆ ನಡೆಸಲಾಗಿತ್ತು.












Click it and Unblock the Notifications