'ನ್ಯಾಯಮೂರ್ತಿ ಲಭ್ಯರಿಲ್ಲ, ಮಂಗಳವಾರ ಅಯೋಧ್ಯಾ ಕೇಸು ನಡೆಯಲ್ಲ'
ನವದೆಹಲಿ, ಜನವರಿ 27: ಇದೇ ತಿಂಗಳ 29ನೇ ತಾರೀಕಿನ ಮಂಗಳವಾರದಂದು ಅಯೋಧ್ಯಾ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೆ ಬರುವುದಿಲ್ಲ ಎಂದು ಹೆಚ್ಚುವರಿ ರಿಜಿಸ್ಟ್ರಾರ್ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ. ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಇದಾಗಿದ್ದು, ಒಬ್ಬರು ನ್ಯಾಯಮೂರ್ತಿ ಆ ದಿನ ಲಭ್ಯವಿರುವುದಿಲ್ಲ. ಆದ್ದರಿಂದ ಮಂಗಳವಾರ ವಿಚಾರಣೆ ನಡೆಯುವುದಿಲ್ಲ.
Ayodhya dispute: ಐವರು ನ್ಯಾಯಮೂರ್ತಿಗಳ ಪೀಠ ಹೊಸದಾಗಿ ರಚನೆ
ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಾಂವಿಧಾನಿಕ ಪೀಠದಲ್ಲಿ ಎಸ್.ಎ.ಬೋಬಡೆ ಕೂಡ ಒಬ್ಬರು. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಕಳೆದ ವಾರವಷ್ಟೇ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವನ್ನು ಪುನರ್ ರಚಿಸಿದ್ದರು. ರಾಜಕೀಯವಾಗಿ ತುಂಬ ಸೂಕ್ಷ್ಮವಾದ ಅಯೋಧ್ಯಾ ಪ್ರಕರಣದ ವಿಚಾರಣೆಗೆ ಇಬ್ಬರನ್ನು ನ್ಯಾಯಮೂರ್ತಿಗಳನ್ನು ಹೊಸದಾಗಿ ನೇಮಿಸಿದ್ದರು. ಮಂಗಳವಾರದಂದು ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳಬೇಕಿತ್ತು.
ಅಯೋಧ್ಯಾ ಪ್ರಕರಣದ ವಿಚಾರಣೆಯನ್ನು ನಿತ್ಯವೂ ನಡೆಸಬೇಕು, ಶೀಘ್ರ ತೀರ್ಪು ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳಬೇಕಿದೆ. ಜನವರಿ ಹನ್ನೊಂದರಂದು ಇದರ ವಿಚಾರಣೆ ಇತ್ತು. ಆಗ ನ್ಯಾಯಮೂರ್ತಿ ಯು.ಯು.ಲಲಿತ್ ತಾವಾಗಿಯೇ ಈ ಪ್ರಕರಣದಿಂದ ಹಿಂದೆ ಸರಿದಿದ್ದರು. ಈ ಹಿಂದೆ ಪ್ರಕರಣದಲ್ಲಿ ವಕೀಲನಾಗಿ ಕಾರ್ಯ ನಿರ್ವಹಿಸಿದ್ದೆ ಎಂಬ ಕಾರಣ ನೀಡಿದ್ದರು.
ಆ ನಂತರ ಕಳೆದ ಶುಕ್ರವಾರವಷ್ಟೇ ನ್ಯಾಯಮೂರ್ತಿಗಳಾದ ಅಬ್ದುಲ್ ನಜೀರ್ ಹಾಗೂ ಅಶೋಕ್ ಭೂಷಣ್ ಅವರನ್ನು ಐವರನ್ನು ಒಳಗೊಂಡ ಸಾಂವಿಧಾನಿಕ ಪೀಠಕ್ಕೆ ಸೇರ್ಪಡೆ ಮಾಡಲಾಗಿತ್ತು.