''ಜೆಎನ್ ಯು ಬಂದ್ ಮಾಡಿ, ಸುಭಾಷ್ ಚಂದ್ರ ಬೋಸ್ ಹೆಸರಿಡಿ"
ನವದೆಹಲಿ, ನವೆಂಬರ್ 27: ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ಹೆಸರನ್ನು ಬದಲಿಸಿ, ಪ್ರಧಾನಿ ನರೇಂದ್ರ ಮೋದಿ ಹೆಸರನ್ನು ಇಡಬೇಕು ಎಂದು ದೆಹಲಿಯ ಬಿಜೆಪಿ ಸಂಸದ, ಗಾಯಕ ಹನ್ಸ್ ರಾಜ್ ಹನ್ಸ್ ಕೋರಿಕೆ ಸಲ್ಲಿಸಿದ ಬಳಿಕ ಮತ್ತೊಮ್ಮೆ ಹೆಸರು ಬದಲಿಸುವ ಸುದ್ದಿ ಸದ್ದು ಮಾಡುತ್ತಿದೆ. ಈ ಬಾರಿ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ಜೆಎನ್ ಯು ಮರು ನಾಮಕರಣದ ಬಗ್ಗೆ ಮಾತನಾಡಿದ್ದಾರೆ.
ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯವನ್ನು ಎರಡು ವರ್ಷಗಳ ಬಂದ್ ಮಾಡಿ, ಸಮಾಜ ವಿರೋಧಿ ಶಕ್ತಿಗಳನ್ನು ಹತ್ತಿಕ್ಕಿ, ನಂತರ ಆರಂಭಿಸುವ ವಿವಿಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಹೆಸರಿಡಿ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ನೆಹರೂ ಹೆಸರಿನಲ್ಲಿ ಅನೇಕ ವಿದ್ಯಾಸಂಸ್ಥೆಗಳಿವೆ. ನೇತಾಜಿ ಹೆಸರು ಇಡುವುದರಿಂದ ವಿದ್ಯಾರ್ಥಿಗಳಲ್ಲಿ ಗುಣಾತ್ಮಕ ಭಾವನೆ ಬೆಳೆಯುತ್ತದೆ ಎಂದು ಸ್ವಾಮಿ ಹೇಳಿದ್ದಾರೆ.

ಹಾಸ್ಟೆಲ್ ಶುಲ್ಕ ಹೆಚ್ಚಳ ವಿರೋಧಿಸಿ ಹಲವು ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು, ಶುಲ್ಕ ಆದೇಶ ಹಿಂಪಡೆಯಲು ವಿವಿ ಸಂಪೂರ್ಣವಾಗಿ ಮುಂದಾಗಿಲ್ಲ.
ಬಡ ವಿದ್ಯಾರ್ಥಿಗಳ ನೆರವಿಗಾಗಿ ವಿಶೇಷ ಕಾಯ್ದೆ ಮಾಡಿ 1968ರಲ್ಲಿ ಸ್ಥಾಪನೆಯಾದ ಜೆಎನ್ ಯು ಮೂಲ ಉದ್ದೇಶವನ್ನೇ ಹಾಳುಗೆಡಲಾಗುತ್ತಿದೆ. ಶುಲ್ಕ ಹೆಚ್ಚಳ ಪ್ರತಿಭತನೆ ಒಂದು ವರ್ಗದ ವಿದ್ಯಾರ್ಥಿ ಸಂಘಟನೆಗೆ ಸೀಮಿತವಾಗಿಲ್ಲ. ಎಬಿವಿಪಿ, ಎನ್ ಎಸ್ ಯುಐ ಸೇರಿದಂತೆ 30ಕ್ಕೂ ಅಧಿಕ ಸಂಘಟನೆಗಳು ಪ್ರತಿಭಟನೆಗಿಳಿದಿವೆ.
ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯವು 12 ಕೋಟಿ ರು ಆದಾಯ ಕೊರತೆ ಎದುರಿಸುತ್ತಿದ್ದು, ಶುಲ್ಕ ಏರಿಕೆ ಅನಿವಾರ್ಯ ಎಂದು ಹೇಳಿದೆ. ಪ್ರತಿ ತಿಂಗಳಿಗೆ 10 ರು ನಿಂದ 300 ರು ಹಾಸ್ಟೆಲ್ ಶುಲ್ಕ ಏರಿಕೆ ವಿರುದ್ಧ ಮಾತ್ರ ವಿದ್ಯಾರ್ಥಿಗಳು ರೊಚ್ಚಿಗೆದ್ದಿಲ್ಲ. ಬದಲಿಗೆ ಇಡೀ ಶುಲ್ಕ ವ್ಯವಸ್ಥೆ ವಿರುದ್ಧವೇ ತಿರುಗಿ ಬಿದ್ದಿದ್ದಾರೆ.












Click it and Unblock the Notifications