ಕೇಜ್ರಿವಾಲ್ ಕೇಸು ಬಡಿದಾಡಲು ದೆಹಲಿ ಸರಕಾರದ ಕಾಸು!
ದೆಹಲಿ ಮಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಕೇಂದ್ರ ಸಚಿವ ಅರುಣ್ ಜೇಟ್ಲಿ. ಈ ಪ್ರಕರಣದಲ್ಲಿ ಕೇಜ್ರಿವಾಲ್ ಪರ ರಾಮ್ ಜೇಠ್ಮಲಾನಿ ವಾದ ಮಂಡಿಸುತ್ತಿದ್ದಾರೆ. ಅವರ ಶುಲ್ಕ ದೆಹಲಿ ಸರಕಾರ ಪಾವತಿಸಬೇಕಂತೆ
ನವದೆಹಲಿ, ಏಪ್ರಿಲ್ 4: ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿರುವುದು ನಿಮಗೆ ಗೊತ್ತಿರುತ್ತದೆ. ಆ ಪ್ರಕರಣದಲ್ಲಿ ಕೇಜ್ರಿವಾಲ್ ಪರವಾಗಿ ರಾಮ್ ಜೇಠ್ಮಲಾನಿ ವಕೀಲರು. ಇದೀಗ ವಕೀಲರ ಶುಲ್ಕವನ್ನು ದೆಹಲಿ ಸರಕಾರ ಪಾವತಿಸಬೇಕು ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಪತ್ರ ಬರೆದಿದ್ದಾರೆ. ಅದಕ್ಕೆ ನೀಡಿರುವ ಕಾರಣ ಆದರೂ ಏನು ಗೊತ್ತಾ?
ಅರವಿಂದ್ ಕೇಜ್ರಿವಾಲ್ ದೆಹಲಿ ಮುಖ್ಯಮಂತ್ರಿಯಂತೆ. ಅವರ ವಿರುದ್ಧವೇ ದಾವೆ ಹೂಡಿರುವುದರಿಂದ ವಕೀಲರ ಶುಲ್ಕವನ್ನು ಸರಕಾರವೇ ಭರಿಸಬೇಕಂತೆ. ಡಿಡಿಸಿಎ ಪ್ರಕರಣದ ವಿಚಾರದಲ್ಲಿ ಕೇಜ್ರಿವಾಲ್ ಹೇಳಿಕೆ ವಿರುದ್ಧವಾಗಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ 10 ಕೋಟಿ ರುಪಾಯಿ ಪರಿಹಾರ ಕೇಳಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.[ಕೇಜ್ರಿವಾಲ್ ಗೆ ಹಿನ್ನಡೆ: ಜೇಟ್ಲಿ ಮೊಕದ್ದಮೆ ತಡೆಗೆ ಸುಪ್ರೀಂ ನಕಾರ]
ಮನೀಶ್ ಸಿಸೋಡಿಯಾ ಬರೆದ ಪತ್ರದಲ್ಲಿ, ಅದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅಧಿಕೃತ ಹೇಳಿಕೆ. ಆದ್ದರಿಂದ ಅವರಿಗೆ ಒಳ್ಳೆ ವಕೀಲರನ್ನು ಒದಗಿಸುವುದು ಕರ್ತವ್ಯ. ಜೇಠ್ಮಲಾನಿ 1 ಕೋಟಿ ರುಪಾಯಿ ಬಿಲ್ ಹಾಗೂ ಪ್ರತಿ ಬಾರಿ ಕೋರ್ಟ್ ಗೆ ಹಾಜರಾಗಲು ತಲಾ 22 ಲಕ್ಷ ರುಪಾಯಿ ಪಡೆಯುತ್ತಾರೆ. ಇದೀಗ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಈ ಬಗ್ಗೆ ಕಾನೂನು ಸಲಹೆ ಪಡೆಯಲು ಮುಂದಾಗಿದ್ದಾರೆ.