ಸಿಎಎ ಪ್ರತಿಭಟನೆ: ನಾಲ್ಕು ತಿಂಗಳ ಮಗು ಸತ್ತರೂ ಹೋರಾಟ ಬಿಡೊಲ್ಲ ಎಂದ ತಾಯಿ
ನವದೆಹಲಿ, ಫೆಬ್ರವರಿ 4: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೆಹಲಿಯ ಶಾಹಿನ್ ಬಾಗ್ನಲ್ಲಿ ಎರಡು ತಿಂಗಳಿನಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯೊಬ್ಬರು ತಮ್ಮ ನಾಲ್ಕು ತಿಂಗಳ ಮಗುವನ್ನು ಕಳೆದುಕೊಂಡಿದ್ದರೂ, ಕಾಯ್ದೆ ಹಿಂಪಡೆಯುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ.
ತಮ್ಮ ನಾಲ್ಕು ತಿಂಗಳ ಕೂಸು ಮೊಹಮ್ಮದ್ ಜಹಾನ್ನನ್ನು ಆತನ ತಾಯಿ ನಾಜಿಯಾ ಪ್ರತಿನಿತ್ಯವೂ ಶಾಹಿನ್ಬಾಗ್ಗೆ ಕರೆದುಕೊಂಡು ಹೋಗುತ್ತಿದ್ದರು. ಪುಟಾಣಿ ಜಹಾನ್ ಅಲ್ಲಿನ ಪ್ರಮುಖ ಆಕರ್ಷಣೆಯೂ ಆಗಿದ್ದ. ಆತನ ಕೆನ್ನೆಯ ಮೇಲೆ ತ್ರಿವರ್ಣ ಧ್ವಜವನ್ನು ಬರೆದು ಸಂಭ್ರಮಿಸುತ್ತಿದ್ದರು. ಆದರೆ ಈಗ ಆತನ ಗೈರು ಅಲ್ಲಿನ ಪ್ರತಿಭಟನಾಕಾರರಲ್ಲಿ ದುಃಖ ಮೂಡಿಸಿದೆ.
ಬಾಟ್ಲಾ ಹೌಸ್ ಪ್ರದೇಶದಲ್ಲಿ ಪ್ಲಾಸ್ಟಿಕ್ ಶೀಟ್ಗಳಿಂದ ಮಾಡಿರುವ ಪುಟ್ಟ ಗುಡಿಸಿಲಿನಲ್ಲಿ ವಾಸಿಸುತ್ತಿರುವ ಮೊಹಮ್ಮದ್ ಆರಿಫ್ ಮತ್ತು ನಾಜಿಯಾ ದಂಪತಿಗೆ ಐದು ವರ್ಷದ ಮಗಳು ಮತ್ತು ಒಂದು ವರ್ಷದ ಮಗ ಕೂಡ ಇದ್ದಾರೆ. ಪ್ರತಿದಿನವೂ ಶಾಹಿನ್ ಬಾಗ್ಗೆ ಎಳೆ ಮಗುವಿನೊಂದಿಗೆ ಹೋಗಿ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದ ನಾಜಿಯಾ, ಕೆಲವು ಗಂಟೆಗಳ ಬಳಿಕ ಮನೆಗೆ ವಾಪಸಾಗುತ್ತಿದ್ದರು.

ಪ್ರತಿಭಟನೆ ನಿಲ್ಲಿಸುವುದಿಲ್ಲ
ನಿತ್ಯವೂ ಪ್ರತಿಭಟನೆಗೆ ರಾತ್ರಿ ಕರೆದೊಯ್ಯುತ್ತಿದ್ದರಿಂದ ಅತಿಯಾದ ಚಳಿ ತಾಳಲಾರದೆ ಜಹಾನ್ನ ಆರೋಗ್ಯ ಹದಗೆಟ್ಟಿತ್ತು. ಹಾಗಿದ್ದರೂ ನಾಜಿಯಾ ಪ್ರತಿಭಟನೆಯಲ್ಲಿ ಭಾಗವಹಿಸುವುದನ್ನು ನಿಲ್ಲಿಸಿರಲಿಲ್ಲ. 'ಕೇಂದ್ರ ಸರ್ಕಾರ ಎನ್ಆರ್ಸಿಯನ್ನು ವಾಪಸ್ ಪಡೆದುಕೊಳ್ಳುವವರೆಗೂ ನಾನು ಪ್ರತಿಭಟನೆಯನ್ನು ಮುಂದುವರಿಸುತ್ತೇನೆ. ಎನ್ಆರ್ಸಿ ಹಿಂಪಡೆಯುವವರೆಗೂ ನಾವೆಲ್ಲರೂ ಪ್ರತಿಭಟನೆ ನಡೆಸುತ್ತಲೇ ಇರುತ್ತೇವೆ ಎಂದು ಮೋದಿಜಿ ಅವರಿಗೆ ಹೇಳಬಯಸಿದ್ದೇವೆ. ಇದು ನಮ್ಮ ಮಕ್ಕಳ ಭವಿಷ್ಯಕ್ಕಾಗಿ' ಎಂದು ನಾಜಿಯಾ ತಿಳಿಸಿದ್ದಾರೆ.

ಬಡತನದ ಕುಟುಂಬ
ಉತ್ತರ ಪ್ರದೇಶದ ಬರೇಲಿ ಮೂಲದವರಾದ ಈ ದಂಪತಿ ಅಲ್ಪ ಆದಾಯದ ನಡುವೆಯೂ ಪ್ರತಿಭಟನೆಯಲ್ಲಿ ಪ್ರತಿ ದಿನ ಭಾಗವಹಿಸುತ್ತಿದ್ದಾರೆ. ಕಸೂತಿ ಕೆಲಸಗಾರನಾಗಿರುವ ಆರಿಫ್, ಇ-ರಿಕ್ಷಾವನ್ನು ಕೂಡ ಓಡಿಸುತ್ತಾರೆ. ಪತ್ನಿ ನಾಜಿಯಾ ಕಸೂತಿ ಕಾರ್ಯಕ್ಕೆ ಸಹಾಯ ಮಾಡುತ್ತಾರೆ.

ಬೆಳಿಗ್ಗೆ ಎದ್ದಾಗ ಬದುಕಿರಲಿಲ್ಲ
'ಜ. 30ರ ರಾತ್ರಿ 1 ಗಂಟೆಗೆ ಶಾಹಿನ್ ಬಾಗ್ನಿಂದ ಮನೆಗೆ ಮರಳಿದೆ. ಉಳಿದ ಮಕ್ಕಳ ಜತೆಗೆ ಆತನನ್ನು ಮಲಗಿಸಿದ್ದೆ. ನಾನೂ ನಿದ್ದೆ ಹೋದೆ. ಬೆಳಿಗ್ಗೆ ಎದ್ದು ನೋಡಿದಾಗ ಆತನಲ್ಲಿ ಯಾವುದೇ ಚಲನೆ ಕಾಣಿಸಲಿಲ್ಲ. ಅವನು ನಿದ್ದೆಯಲ್ಲಿಯೇ ಸತ್ತುಹೋಗಿದ್ದ' ಎಂದು ನಾಜಿಯಾ ತಿಳಿಸಿದ್ದಾರೆ.

ಮಕ್ಕಳ ಭವಿಷ್ಯಕ್ಕೆ ವಿರುದ್ಧ
ಡಿ. 18ರಿಂದಲೂ ಪ್ರತಿದಿನ ಮಗನೊಂದಿಗೆ ಶಾಹಿನ್ ಬಾಗ್ಗೆ ತೆರಳುತ್ತಿದ್ದ ನಾಜಿಯಾ ಅವರು ತಮ್ಮ ಮಗ ಅತಿಯಾದ ಥಂಡಿಗೆ ಬಳಗಾಗಿ ಗಂಭೀರವಾಗಿರುವುದು ಅರಿವಾಗಿರಲಿಲ್ಲ. ಆದರೆ ಶಿಶುವಿನ ಮರಣ ಪ್ರಮಾಣಪತ್ರ ನೀಡಿರುವ ಆಸ್ಪತ್ರೆ ಕೂಡ ಸಾವಿಗೆ ನಿರ್ದಿಷ್ಟ ಕಾರಣ ಏನೆಂದು ತಿಳಿಸಿಲ್ಲ. ಸಿಎಎ ನಮ್ಮನ್ನು ಧರ್ಮದ ಹೆಸರಿನಲ್ಲಿ ವಿಭಜಿಸಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ಇದರಲ್ಲಿ ರಾಜಕೀಯವಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ನನ್ನ ಮಕ್ಕಳ ಭವಿಷ್ಯದ ವಿರುದ್ಧ ಇರುವುದನ್ನು ನಾನು ಪ್ರಶ್ನಿಸಲೇಬೇಕು ಎಂದು ನಾಜಿಯಾ ಹೇಳಿದರು.












Click it and Unblock the Notifications