ಸದ್ಯದಲ್ಲೇ ರೈಲಿನಲ್ಲಿ ಅಪಘಾತ ತಡೆಯುವ ಯಂತ್ರ ಅಳವಡಿಕೆ
ನವದೆಹಲಿ, ಸೆ, 01 : ರೈಲುಗಳ ಸಂಚಾರ ಹೆಚ್ಚಾದಂತೆ ರೈಲು ಅಪಘಾತಗಳ ಸಂಖ್ಯೆಯಲ್ಲಿಯೂ ಅಧಿಕವಾಗುತ್ತಲೇ ಸಾಗಿದೆ. ಇದರಿಂದ ಸಾವಿರಾರು ಅಮಾಯಕರು ಜೀವ ಕಳೆದುಕೊಂಡಿದ್ದು, ಇನ್ನೂ ಹಲವರ ಬದುಕು ದುಸ್ತರವಾಗಿ ಪರಿಣಮಿಸಿದೆ.
ರೈಲು ಅವಘಡ ತಡೆಗಟ್ಟುವುದೇ ಇದಕ್ಕಿರುವ ಏಕೈಕ ಮಾರ್ಗ ಎಂದು ಪರಿಗಣಿಸಿದ ರೈಲ್ವೆ ಇಲಾಖೆ ರೈಲು ಅಪಘಾತ ನಿಯಂತ್ರಣ ಯಂತ್ರವನ್ನು ಅಳವಡಿಸುವ ಕುರಿತು ಚಿಂತನೆ ನಡೆಸಿದೆ ಎಂದು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ತಿಳಿಸಿದ್ದಾರೆ.[ರೈಲ್ವೆ ಟಿಕೆಟ್ ಕನ್ ಫರ್ಮ್ ಆಗಿಲ್ಲವೇ? ಚಿಂತೆ ಬಿಡಿ]

ಅಪಘಾತ ತಡೆಗಟ್ಟುವ ಈ ಯಂತ್ರವು ರೈಲ್ವೆ ಟ್ರ್ಯಾಕ್, ಬ್ರಿಡ್ಜ್, ಇನ್ನಿತರ ಸ್ಥಳಗಳಲ್ಲಿ ಎದುರಾಗುವ ಅಪಾಯದ ಮುನ್ಸೂಚನೆಯನ್ನು ಇದು ನೀಡಲಿದ್ದು, ಇದರಿಂದ ಪ್ರಯಾಣಿಕರು ಅಪಾಯದಿಂದ ಪಾರಾಗುವ ಎಲ್ಲಾ ಸಾಧ್ಯತೆಗಳಿವೆ ಎಂದು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ತಿಳಿಸಿದರು.
ರೈಲಿನ ವೇಗದಲ್ಲಿಯೂ ಕೊಂಚ ಸುಧಾರಣೆಯಾಗಲಿದ್ದು, ಪ್ರಯಾಣಿಕರಿಗೆ ಎದುರಾಗುವ ತೊಂದರೆ ತಪ್ಪಿಸಿ, ಪ್ರಯಾಣಿಕರ ಸೇವಾ ಸೌಲಭ್ಯ ಉತ್ತಮಗೊಳ್ಳಿಸುತ್ತಾ ಚಿಂತನೆ ನಡೆಸಲಾಗಿದೆ. ಇದರಿಂದ ಪ್ರಯಾಣಿಕರು ಸದಾ ಆತಂಕದಿಂದ ಪ್ರಯಾಣ ಬೆಳೆಸುವುದು ಕಡಿಮೆಯಾಗಲಿದೆ.
ರೈಲುಗಳಿಗೆ ಈ ಯಂತ್ರ ಅಳವಡಿಸಲು, ರೈಲ್ವೆ ಟ್ರ್ಯಾಕ್ ದುರಸ್ತಿ, ಸಿಂಗ್ನಲ್ ಅಳವಡಿಕೆಗೆ 8.5 ಲಕ್ಷ ಕೋಟಿ ಬಂಡವಾಳ ಹೂಡಲಾಗಿದ್ದು, ಎಲ್ಐಸಿ, ವರ್ಡ್ ಬ್ಯಾಂಕ್ ಇನ್ನಿತರ ಏಜೆನ್ಸಿಗಳು ಸಹಾಯ ಹಸ್ತ ನೀಡಲು ಮುಂದಾಗಿದೆ ಎಂದು ಸುರೇಶ್ ಪ್ರಭು ಹೇಳಿದ್ದಾರೆ.[ಐವರನ್ನು ಬಲಿಪಡೆದ ರೈಲು ದುರಂತದ ಚಿತ್ರಗಳು]
ಈ ಯೋಜನೆ ಕುರಿತಾಗಿ ಈಗಾಗಲೇ ರೈಲ್ವೆ ಇಲಾಖೆಯ ಮುಖ್ಯಸ್ಥರಿಗೆ ತಿಳಿಸಲಾಗಿದ್ದು, ಈ ಪ್ರಕ್ರಿಯೆಗೆ ಅಗತ್ಯವಾದ ರಾಷ್ಟ್ರದ ಐದು ಪ್ರತಿಷ್ಠಿತ ಕಂಪನಿಗಳು ಹಾಗೂ ತಂತ್ರಜ್ಞಾನದ ಬಗ್ಗೆ ಮಾತುಕತೆ ನಡೆಸಲಾಗಿದೆ ಎಂದು ಹೇಳಿದರು.












Click it and Unblock the Notifications