ಅಭಿಮಾನದ ರಾಯಭಾರಿಯಾಗಿ ಪಾಕಿಸ್ತಾನಕ್ಕೆ: ನವಜೋತ್ ಸಿಂಗ್ ಸಿಧು
ನವದೆಹಲಿ, ಆಗಸ್ಟ್ 17: ಇಮ್ರಾನ್ ಖಾನ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್ ನಾಯಕ, ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಇಸ್ಲಾಮಾಬಾದ್ಗೆ ತೆರಳಿದ್ದಾರೆ.
ಗಡಿಯ ಆಚೆಗಿನ ಅಭಿಮಾನದ ರಾಯಭಾರಿಯಾಗಿ ಹೋಗುತ್ತಿರುವುದಾಗಿ ಸಿಧು ಹೇಳಿದ್ದಾರೆ.
'ಪಾಕಿಸ್ತಾನದಲ್ಲಿನ ಪ್ರಜಾಸತ್ತಾತ್ಮಕ ಬದಲಾವಣೆಗಳು ಮಹತ್ವದ್ದಾಗಿವೆ. ನನ್ನ ಉತ್ತಮ ಸ್ನೇಹಿತನಾದ ಇಮ್ರಾನ್ ಖಾನ್ ಆಹ್ವಾನ ನೀಡಿರುವುದಕ್ಕೆ ನಾನು ಅದೃಷ್ಟವಂತ ಎನಿಸುತ್ತಿದೆ. ಇದು ನನಗೆ ದೊರೆತ ಗೌರವ.

ನಾನು ಪಾಕಿಸ್ತಾನಕ್ಕೆ ಅಭಿಮಾನದ ರಾಯಭಾರಿಯಾಗಿ ಹೋಗುತ್ತಿದ್ದೇನೆ. ಎರಡು ದೇಶಗಳ ನಡುವಣ ಸಂಬಂಧ ಸುಧಾರಿಸಲಿದೆ ಎಂಬ ಆಶಯ ನನಗಿದೆ' ಎಂದು ಸಿಧು ತಿಳಿಸಿದ್ದಾರೆ.
ಇಮ್ರಾನ್ ಖಾನ್ ಪ್ರಮಾಣವಚನ
ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಇಮ್ರಾನ್ ಖಾನ್ ಶನಿವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಶುಕ್ರವಾರ ರಾಷ್ಟ್ರೀಯ ಅಸೆಂಬ್ಲಿಯ ನೂತನ ಸದಸ್ಯರು ಇಮ್ರಾನ್ ಖಾನ್ ಅವರನ್ನು ದೇಶದ 22ನೇ ಪ್ರಧಾನಿಯನ್ನಾಗಿ ಆಯ್ಕೆ ಮಾಡಿದರು.

ಇಮ್ರಾನ್ ಖಾನ್ ಹಾಗೂ ಅವರ ಮಿತ್ರಪಕ್ಷಗಳು 176 ಸೀಟುಗಳನ್ನು ಪಡೆದುಕೊಂಡರೆ, ವಿರೋಧ ಪಕ್ಷವಾದ ಪಾಕಿಸ್ತಾನ್ ಮುಸ್ಲಿಂ ಲೀಗ್- ನವಾಜ್ ಷೆಹಬಾಜ್ ಷರೀಫ್ ಪಕ್ಷವು 96 ಸೀಟಿಗಳನ್ನು ಗೆದ್ದುಕೊಂಡಿತು.
ನವಾಜ್ ಷರೀಫ್ ಅವರ ಪಕ್ಷದ ಸದಸ್ಯರ ವಿರೋಧದ ನಡುವೆಯೇ ಇಮ್ರಾನ್ ಅವರನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಿರುವುದಾಗಿ ಸ್ಪೀಕರ್ ಅಸದ್ ಖೈಸರ್ ಪ್ರಕಟಿಸಿದರು.
ಬಳಿಕ ಮಾತನಾಡಿದ ಇಮ್ರಾನ್ ಖಾನ್, ದೇಶವು 70 ವರ್ಷಗಳಿಂದ ಕಾಯುತ್ತಿರುವ ಬದಲಾವಣೆಯನ್ನು ತರುವುದಾಗಿ ಪ್ರತಿಜ್ಞೆ ಮಾಡಿದರು.
ದೇಶದ ಹಣವನ್ನು ಕದ್ದು ಹೊರದೇಶಗಳಲ್ಲಿ ಬಚ್ಚಿಟ್ಟವರನ್ನು ಎಲ್ಲದಕ್ಕೂ ಹೊಣೆಗಾರರನ್ನಾಗಿ ಮಾಡುತ್ತೇನೆ. ಇನ್ನೊಂದು ದೇಶದ ಮೇಲೆ ಅವಲಂಬಿತವಾಗದಂತೆ ನಮ್ಮದೇ ಆದಾಯವನ್ನು ಹೇಗೆ ಸೃಷ್ಟಿಸುವುದು ಎಂಬ ಬಗ್ಗೆ ಒಟ್ಟಾಗಿ ಕುಳಿತು ಚರ್ಚಿಸುತ್ತೇವೆ ಎಂದು ಹೇಳಿದರು.












Click it and Unblock the Notifications