ಕಾಂಗ್ರೆಸ್ ಧರಣಿ ಬಿಟ್ಟರೆ ಅಮಾನತು ಸಂಸದರನ್ನು ವಾಪಾಸ್ ಕರೆಸಿಕೊಳ್ಳುತ್ತೇವೆ: ಜೋಶಿ
ನವದೆಹಲಿ ಜುಲೈ 27: ಸಂಸತ್ತಿನಲ್ಲಿ ಸಕಾರಾತ್ಮಕ ಚರ್ಚೆಗೆ ನಾವು ಯಾವಾಗಲೂ ಸಿದ್ಧ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಕಲಾಪ ನಡೆಯವುದು ಅಗತ್ಯ ಇಲ್ಲ. ಹೀಗಾಗಿಯೇ ಕಾಂಗ್ರೆಸ್ ನಾಯಕರು ಕಲಾಪಕ್ಕೆ ಅಡ್ಡಿಪಡಿಸುತ್ತಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಬೇಸರ ವ್ಯಕ್ತಪಡಿಸಿದ್ದಾರೆ.
ಬುಧವಾರ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಕಾಂಗ್ರೆಸ್ ಒಂದು ಭರವಸೆ ನೀಡಲಿ, ಸದನದಲ್ಲಿ ಧರಣಿ ನಡೆಸದೇ ಚರ್ಚೆ ನಡೆಸ್ತೇವೆ ಎಂಬ ಭರವಸೆ ಕೈ ನಾಯಕರು ಹೇಳಲಿ. ಕೂಡಲೇ ಅಮಾನತ್ತುಗೊಂಡಿರುವ 19 ಸಂಸದರನ್ನು ವಾಪಸ್ ಸದನಕ್ಕೆ ಕರೆಸಿಕೊಳ್ಳಲು ಸಿದ್ಧರಿದ್ದೇವೆ. ಆದರೆ ನಂತರ ಪ್ರತಿಪಕ್ಷಗಳು ಮತ್ತೆ ಸದನದ ಕಲಾಪಗಳಿಗೆ ತೊಂದರೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
1ನೇ ಕ್ಲಾಸ್ ಪ್ರವೇಶಕ್ಕೆ 6 ವರ್ಷ ವಯಸ್ಸು: ಆದೇಶ ವಾಪಸ್ಗೆ ಕಾಂಗ್ರೆಸ್ ಆಗ್ರಹ
ನಮಗೆ ಕಾಂಗ್ರೆಸ್ ಪಕ್ಷದವರು ಸದನದಲ್ಲಿ ಕಲಾಪ ನಡೆಸಲು ಅಡ್ಡಿಪಡಿಸಲ್ಲ ಎಂಬ ವಿಶ್ವಾಸ ನೀಡಲಿ. ಸ್ಪೀಕರ್ ಅವರ ಅನುಮತಿ ಪಡೆದು ಅಮಾನತ್ತುಗೊಂಡಿರುವ 19 ಸಂಸದರನ್ನ ಮುಂಗಾರು ಅಧಿವೇಶನಕ್ಕೆ ನಾವು ವಾಪಸ್ ಕರೆಸಿಕೊಳ್ಳಲು ತಯಾರಿದ್ದೇವೆ ಎಂದು ಅವರು ಪನರುಚ್ಚರಿಸಿದರು.
ಬುಧವಾರ ಸಹ ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಸೋನಿಯಾ ಗಾಂಧಿ ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆ, ಜಿಎಸ್ಟಿ ದರ ಏರಿಕೆ ವಿಚಾರಗಳನ್ನ ಮುಂದಿಟ್ಟು ಪ್ರತಿಭಟನೆ ಮುಂದುವರಿಸಿದರು.
ಕಾಂಗ್ರೆಸ್ ಈ ನಡವಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಸಕಾರಾತ್ಮಕ ಚರ್ಚೆಗೆ ನಾವು ತಯಾರಿದ್ದೇವೆ. ಮುಂಗಾರು ಅಧಿವೇಶನ ಆರಂಭವಾದ ದಿನದಿಂದಲೂ ನಾವು ಇದನ್ನೇ ಹೇಳಿದ್ದೇವೆ. ಆಹಾರ ಪದಾರ್ಥಗಳ ಜಿ.ಎಸ್.ಟಿ ದರ ಏರಿಕೆ ಕುರಿತು ಚರ್ಚೆಗೆ ನಾವು ಸಿದ್ಧರಿದ್ದೇವೆ. ಚರ್ಚೆ ನಡೆಸುವ ಪ್ರಕ್ರಿಯೆ ಪ್ರಾರಂಭವಾಗಲಿ. ನಿರ್ಮಲಾ ಸೀತಾರಾಮನ್ ಅವರು ಕೋವಿಡ್ ನಿಂದ ಚೇತರಿಕೆ ಕಾಣುತ್ತಿದ್ದಾರೆ. ನಾಳೆಯೊಳಗೆ ಹಣಕಾಸು ಸಚಿವರು ಸದನದ ಕಲಾಪದಲ್ಲಿ ಪಾಲ್ಗೊಳ್ಳುವ ವಿಶ್ವಾಸವಿದೆ ಎಂದು ತಿಳಿಸಿದರು.
ಸೋನಿಯಾ ಗಾಂಧಿ ಕಾನೂನಿಗಿಂತ ದೊಡ್ಡವರಲ್ಲ
ಸೋನಿಯಾ ಗಾಂಧಿ ಅವರ ಇಡಿ ವಿಚಾರಣೆ ಕುರಿತು ಪ್ರತಿಕ್ರಿಯಿಸಿರುವ ಜೋಶಿ, ಅವರೇಕೆ ತನಿಖೆಯಿಂದ ತಪ್ಪಿಸಿಕೊಳ್ಳಲು ಬಯಸುತ್ತಿದ್ದಾರೆ?. ತನಿಖೆ ಪೂರ್ಣಗೊಂಡರೆ ಸತ್ಯ ಹೊರಬರುತ್ತದೆ. ಮಹಾರಾಣಿಯಾಗಲಿ ಅಥವಾ ಯುವರಾಜನಾಗಲಿ ಯಾರೂ ಪ್ರಜಾಪ್ರಭುತ್ವ ಮತ್ತು ಕಾನೂನಿಗಿಂತ ದೊಡ್ಡವರಲ್ಲ ಎಂದು ತಿರುಗೇಟು ನೀಡಿದರು. ಕಾಂಗ್ರೆಸ್ ಪಕ್ಷವು ತನ್ನನ್ನು ನ್ಯಾಯಾಂಗ ಮತ್ತು ಕಾನೂನಿಗಿಂತ ಮೇಲಿದೆ ಎಂದು ಪರಿಗಣಿಸುತ್ತದೆ. ಇದು ಸರಿಯಲ್ಲ, ಕಾಂಗ್ರೆಸ್ ಸದನದಲ್ಲಿ ಅನಗತ್ಯ ಧರಣಿ ನಡೆಸುವ ಮೂಲಕ ಸಮಯ ವ್ಯರ್ಥ ಮಾಡುತ್ತಿದೆ. ಇಡಿ ವಿಚಾರಣೆಯನ್ನು ಕಾಂಗ್ರೆಸ್ ನಾಯಕರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.