'ಪಶುವೈದ್ಯೆ' ಕೊಂದ ಪಾಪಿಗಳಾಯ್ತು, 'ನಿರ್ಭಯಾ' ನೀಚರಿಗೆಂದು ಶಿಕ್ಷೆ?
ದೆಹಲಿ, ಡಿಸೆಂಬರ್.06: ತೆಲಂಗಾಣದಲ್ಲಿ ಪಶುವೈದ್ಯೆ ಮೇಲೆ ಕ್ರೌರ್ಯ ಮೆರೆದ ದುಷ್ಟ ಕಾಮುಕರು ದುರಂತ ಅಂತ್ಯ ಕಂಡಿದ್ದಾರೆ. ಅತ್ಯಾಚಾರ ಎಸಗಿ ಯುವತಿಗೆ ಬೆಂಕಿ ಹಚ್ಚಿದ್ದ ಆರೋಪಿಗಳು ಇಂದು ಬೆಳಕು ಮೂಡುವುದರಲ್ಲೇ ಪೊಲೀಸ್ ಎನ್ ಕೌಂಟರ್ ನಲ್ಲಿ ಪ್ರಾಣ ಬಿಟ್ಟಿದ್ದಾರೆ.
ಪಶುವೈದ್ಯೆ ಮೇಲೆ ಅತ್ಯಾಚಾರ ನಡೆಸಿದವರ ವಿರುದ್ಧ ಪೊಲೀಸರು ನಡೆಸಿದ ಎನ್ ಕೌಂಟರ್ ಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮಗಳನ್ನು ಕ್ರೂರವಾಗಿ ಕೊಂದ ಹಂತಕರ ಸಾವು ಹೆತ್ತವರಲ್ಲೂ ಖುಷಿ ತಂದಿದೆ. ತೆಲಂಗಾಣ ಅಷ್ಟೇ ಅಲ್ಲದೇ ದೇಶಾದ್ಯಂತ ಸಂಭ್ರಮ ಆಚರಿಸಲಾಗುತ್ತಿದೆ.
ಒಂದು ಕಡೆ ಪಶುವೈದ್ಯೆಯ ಪೋಷಕರು ಮಗಳ ಸಾವಿಗೆ ನ್ಯಾಯ ಸಿಕ್ಕ ಖುಷಿಯಲ್ಲಿದ್ದಾರೆ. ತೆಲಂಗಾಣ ಪೊಲೀಸರ ಕಾರ್ಯವೈಖರಿಗೆ ದೆಹಲಿ ನಿರ್ಭಯಾ ತಾಯಿ ಆಶಾದೇವಿ ಕೂಡಾ ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ, ತಮ್ಮ ಮಗಳಿಗೆ ಇಂದಿಗೂ ನ್ಯಾಯ ಸಿಕ್ಕಿಲ್ಲ ಎಂಬ ನೋವು ನನ್ನನ್ನು ಕಾಡುತ್ತಲೇ ಇದೆ. ನನ್ನ ಮಗಳ ಸಾವಿಗೆ ನ್ಯಾಯ ಸಿಗುವುದು ಯಾವಾಗ ಎಂದು ಪ್ರಶ್ನೆ ಮಾಡಿದ್ದಾರೆ.

ನಿರ್ಭಯಾ ಸಾವಿಗೆ ಇನ್ನೂ ಸಿಕ್ಕಿಲ್ಲ ನ್ಯಾಯ
ಪಶುವೈದ್ಯೆ ಸಾವಿಗೆ ಏಳೇ ದಿನಗಳಲ್ಲಿ ನ್ಯಾಯ ಸಿಕ್ಕಿದೆ. ಸೆಪ್ಟೆಂಬರ್.27ರಂದು ಪಶುವೈದ್ಯೆ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದರು. ಅದಾಗಿ ಒಂದೇ ವಾರದಲ್ಲಿ ಅಂದರೆ ಡಿಸೆಂಬರ್.06ರಂದು ಪೊಲೀಸ್ ಎನ್ ಕೌಂಟರ್ ನಲ್ಲಿ ಆರೋಪಿಗಳನ್ನು ಪೊಲೀಸ್ ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿದೆ. ಆದರೆ, ದೆಹಲಿಯಲ್ಲಿ ನಡೆದ ನನ್ನ ಮಗಳ ಸಾವಿಗೆ ಇಂದಿಗೂ ನ್ಯಾಯ ಸಿಕ್ಕೇ ಇಲ್ಲ ಎಂದು ನಿರ್ಭಯಾ ತಾಯಿ ಆಶಾ ದೇವಿ ಬೇಸರ ವ್ಯಕ್ತಪಡಿಸಿದ್ದಾರೆ.

2012ರಿಂದಲೂ ನ್ಯಾಯಕ್ಕಾಗಿ ಅಲೆದಾಟ
ತೆಲಂಗಾಣದಲ್ಲಿ ನಡೆದ ಪಶುವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆಗೆ ಏಳು ದಿನಗಳಲ್ಲೇ ನ್ಯಾಯ ಸಿಕ್ಕಿದೆ. ಆದರೆ, ದೆಹಲಿಯಲ್ಲಿ ನನ್ನ ಮಗಳ ಮೇಲೆ ಕ್ರೌರ್ಯ ಮೆರೆದ ಕಾಮುಕರು ಇಂದಿಗೂ ಜೈಲಿನಲ್ಲಿ ಆರಾಮವಾಗಿದ್ದಾರೆ. 2012 ರಿಂದ 2019ರ ಈವರೆಗೆ ಅಂದರೆ ಕಳೆದ ಏಳು ವರ್ಷಗಳಿಂದ ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಹೋರಾಟ ಮಾಡುತ್ತಲೇ ಇದ್ದೇನೆ ಎಂದು ಆಶಾದೇವಿ ಹೇಳಿದರು.

ದೆಹಲಿ ಪೊಲೀಸರೇ ಅವರನ್ನು ನೋಡಿ ಕಲಿಯಿರಿ
ಹೌದು, ದೆಹಲಿ ಪೊಲೀಸರ ವಿರುದ್ಧ ನಿರ್ಭಯಾ ತಾಯಿ ಆಶಾ ದೇವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತೆಲಂಗಾಣದಲ್ಲಿ ಪೊಲೀಸರ ಕಾರ್ಯವೈಖರಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿರುವ ಅವರು, ದೆಹಲಿ ಪೊಲೀಸರು ಅವರನ್ನು ನೋಡಿ ಕಲಿಯಬೇಕು ಎಂದು ಸಲಹೆ ನೀಡಿದ್ದಾರೆ. ಇದರ ಜೊತೆಗೆ ಪಶುವೈದ್ಯೆಗೆ ಪೊಲೀಸರಿಂದ ನ್ಯಾಯ ಸಿಕ್ಕಿದ್ದಕ್ಕೆ ತುಂಬಾ ಸಂತೋಶವಾಗಿದೆ ಎಂದು ಆಶಾ ದೇವಿ ಹೇಳಿದ್ದಾರೆ.

ನಾಲ್ವರು ಆರೋಪಿಗಳ ಮೇಲೆ ಪೊಲೀಸ್ ಎನ್ ಕೌಂಟರ್
ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳನ್ನು ಡಿಸೆಂಬರ್.05ರ ಗುರುವಾರ ವಿಚಾರಣೆ ನಡೆಸಲೆಂದು ಪೊಲೀಸರು ವಶಕ್ಕೆ ಪಡೆದಿದ್ದರು. ಪ್ರಕರಣದ ತನಿಖೆ ನಡೆಸುತ್ತಿದ್ದ ವಿಶ್ವನಾಥ್ ಸಜ್ಜನರ್ ನೇತೃತ್ವದ ಅಧಿಕಾರಿಗಳ ತಂಡ ವಿಚಾರಣೆ ಬಳಿಕ ಆರೋಪಿ ಮೊಹಮ್ಮದ್ ಆರಿಫ್, ಜೊಲ್ಲಾ ನವೀನ್, ಜೊಲ್ಲಾ ಶಿವ ಮತ್ತು ಚಿಂತಕುಂಟಾ ಚನ್ನಕೇಶವುಲುವನ್ನು ಸ್ಥಳ ಪರಿಶೀಲನೆಗೆ ಕರೆದುಕೊಂಡು ಹೋಗಿತ್ತು. ಈ ವೇಳೆ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ಆರೋಪಿಗಳು ಪರಾರಿಯಾಗಲು ಯತ್ನಿಸಿದರು. ಬೆಳಗ್ಗೆ 3.30ರ ವೇಳೆಗೆ ಹೈದರಾಬಾದ್ ಹೊರವಲಯದ ಚಟಾನ್ ಪಲ್ಲಿ ಬ್ರಿಡ್ಜ್ ಬಳಿ ಪೊಲೀಸರು ನಡೆಸಿದ ಎನ್ ಕೌಂಟರ್ನಲ್ಲಿ ನಾಲ್ವರು ಆರೋಪಿಗಳು ಬಲಿಯಾಗಿದ್ದಾರೆ.












Click it and Unblock the Notifications