Get Updates
Get notified of breaking news, exclusive insights, and must-see stories!

'ರಾಜಕೀಯಕ್ಕೆ ಬಂದಿದ್ದು ವ್ಯವಸ್ಥೆಯನ್ನು ಬದಲಿಸಲು'

ನವದೆಹಲಿ, ಡಿ. 9 : "ಇವರ್ಯಾಕೆ ದೆಹಲಿಯನ್ನು ಮತ್ತೊಂದು ಚುನಾವಣೆಗೆ ತಳ್ಳುತ್ತಿದ್ದಾರೆ. ಅವರಿಬ್ಬರೂ ಗಾಢ ಸ್ನೇಹಿತರು, ಗುಟ್ಟಾಗಿ ಭೇಟಿಯಾಗುತ್ತಾರೆ, ಒಟ್ಟಾಗಿಯೇ ಭ್ರಷ್ಟಾಚಾರವನ್ನೂ ನಡೆಸುತ್ತಾರೆ. ಅವರ್ಯಾಕೆ ಜೊತೆಯಾಗಿ ಸರಕಾರ ರಚಿಸಬಾರದು" ಎಂದು ದೆಹಲಿ ಚುನಾವಣೆಯಲ್ಲಿ 'ಹೀರೋ' ಆಗಿ ಹೊರಹೊಮ್ಮಿರುವ ಅರವಿಂದ್ ಕೇಜ್ರಿವಾಲ್ ಅವರು ಕಾಂಗ್ರೆಸ್ ಮತ್ತು ಬಿಜೆಪಿಗೆ ಸವಾಲು ಎಸೆದಿದ್ದಾರೆ.

ನಮಗೆ ಬಹುಮತ ದೊರೆತು ಸರಕಾರ ರಚಿಸುತ್ತೇವೆ ಎಂದುಕೊಂಡಿದ್ದೆವು. ಆದರೆ ಹಾಗಾಗಲಿಲ್ಲ. ಆಡಳಿತ ನಡೆಸಲು ನಮಗೆ ಸ್ಪಷ್ಟ ಜನಾದೇಶ ಸಿಕ್ಕಿಲ್ಲ. ಮತ್ತೆ ಚುನಾವಣೆಯಾಗಲಿ, ಜನರಿ ನಮಗೆ ಸ್ಪಷ್ಟ ಬಹುಮತ ದೊರಕಿಸಿ ಕೊಡಲಿ, ನಂತರ ಸರಕಾರ ರಚಿಸುತ್ತೇವೆ ಎಂದು ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರು ಸಿಎನ್ಎನ್-ಐಬಿಎನ್ ಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.

ಮತ್ತೊಂದು ಬಾರಿ ಚುನಾವಣೆ ನಡೆದು ತಮ್ಮ ಪಕ್ಷ ಸೋತರೂ ಚಿಂತೆಯಿಲ್ಲ, ಈಗ ಯಾವುದೇ ಪಕ್ಷದೊಡನೆ ನಾವು ಕೈಜೋಡಿಸುವುದಿಲ್ಲ. ಅಧಿಕಾರ ದಾಹದಿಂದೇನು ನಾವು ರಾಜಕೀಯಕ್ಕೆ ಇಳಿದಿಲ್ಲ. ಇಡೀ ರಾಜಕೀಯ ವ್ಯವಸ್ಥೆಯನ್ನು ಬದಲಾಯಿಸಲು ನಾನು ಇಲ್ಲಿಗೆ ಬಂದಿದ್ದೇನೆ ಎಂದು ಕೇಜ್ರಿವಾಲ್ ವಿಶ್ವಾಸದಿಂದ ನುಡಿದಿದ್ದಾರೆ. [ಬೇಡಿ ಸಲಹೆಗೆ ಕಿವಿಗೊಡುವರೆ ಕೇಜ್ರಿ]

I am here to change political process : Kejriwal

ಆದರೆ, ಕೇವಲ ಒಂದು ವರ್ಷದ ಹಿಂದಷ್ಟೇ ರಾಜಕೀಯಕ್ಕೆ ಇಳಿದಿರುವ ನನ್ನ ಮೇಲೆ ಜನರು ಇಟ್ಟಿರುವ ವಿಶ್ವಾಸ, ಜವಾಬ್ದಾರಿಯನ್ನು ನೆನೆಸಿಕೊಂಡರೆ ಹೆದರಿಕೆಯಾಗುತ್ತಿದೆ. ಈ ಚಳವಳಿ ನಡೆಸಲು ಹಿಂದೆ ರಿಕ್ಷಾವಾಲಾ ನನಗೆ ದುಡ್ಡು ಕೊಟ್ಟಿದ್ದ. ನನಗೆ ರಾಜಕೀಯದಲ್ಲಿ ಸೋಲುವ ಬಗ್ಗೆ ಹೆದರಿಕೆ ಇಲ್ಲವೇ ಇಲ್ಲ. ಆದರೆ, ಎಲ್ಲಿ ತಪ್ಪು ಮಾಡಿಬಿಡುತ್ತೇನೋ ಎಂಬ ಬಗ್ಗೆ ಭಾರೀ ಹೆದರಿಕೆ ಇದೆ ಎಂದು ಅವರು ವಿಮರ್ಶಿಸಿಕೊಂಡಿದ್ದಾರೆ.

ಪ್ರಾಮಾಣಿಕತೆಯಿಂದ ಚುನಾವಣೆಯನ್ನು ಹೇಗೆ ಎದುರಿಸಬೇಕು ಮತ್ತು ಗೆಲ್ಲಬೇಕು ಎಂಬುದನ್ನು ನಮ್ಮ ಪಕ್ಷ ಇಡೀ ದೇಶಕ್ಕೆ ತೋರಿಸಿಕೊಟ್ಟಿದೆ. ಸತ್ಯದ ಹಾದಿಯಿಂದ ನಾವು ಎಂದು ಬದಿಗೆ ಸರಿದಿಲ್ಲ. ಭ್ರಷ್ಟರ ವಿರುದ್ಧ ಸ್ಟಿಂಗ್ ಆಪರೇಷನ್ ಮಾಡಿ, ಪ್ರಶಾಂತ್ ಭೂಷಣ್ ತಯಾರಿಸಿದ ಸಿಡಿಗಳ ಮುಖಾಂತರ, ಯಾರಿಗೆ ಎಲ್ಲಿ ಹೆಚ್ಚು ನೋವಾಗುತ್ತದೆಯೋ ಅಲ್ಲಿಗೇ ಬರೋಬ್ಬರಿಯಾಗಿ ಹೊಡೆದಿದ್ದೇವೆ ಎಂದು ಪೊರಕೆಯನ್ನು ಪಕ್ಷದ ಲಾಂಛನ ಮಾಡಿಕೊಂಡಿರುವ ಕೇಜ್ರಿವಾಲ್ ಹೇಳಿದ್ದಾರೆ. [ಪೊರಕೆ ಬೆಲೆ ದಿಢೀರನೆ ಏರಿಕೆ]

ಸಾಮಾಜಿಕ ಚಳವಳಿಗಾರ ಅಣ್ಣಾ ಹಜಾರೆ ಅವರಿಂದ ಬೇರ್ಪಡೆಯಾಗಿದ ಬಗ್ಗೆ ಕೇಳಿದ ಪ್ರಶ್ನೆಗೆ, ಕೈ ಜೋಡಿಸಿದ ಅರವಿಂದ್ ಕೇಜ್ರಿವಾಲ್, "ದಯವಿಟ್ಟು ನಮ್ಮ ಆಶೀರ್ವದಿಸಿ ಅಣ್ಣಾಜೀ. ಇಲ್ಲಿ ನಾವೇನೇನು ಮಾಡುತ್ತಿದ್ದೇವೆಯೋ ಅದನ್ನೆಲ್ಲ ದೇಶಕ್ಕಾಗಿ ಮಾಡುತ್ತಿದ್ದೇವೆ, ನಮಗಾಗಿ ಏನನ್ನೂ ಮಾಡುತ್ತಿಲ್ಲ" ಎಂದು ವಿನಮ್ರವಾಗಿ ವಿನಂತಿಸಿಕೊಂಡರು. ಅಣ್ಣಾ ಹಜಾರೆ ಅವರು ಕೇಜ್ರಿವಾಲ್ ಅವರನ್ನು ಈಗಾಗಲೆ ಆಶೀರ್ವದಿಸಿದ್ದಾರೆ. [ಅರವಿಂದರನ್ನು ಆಶೀರ್ವದಿಸಿದ ಅಣ್ಣಾ]

ನಮ್ಮ ಪಕ್ಷದ ಯಾವ ಶಾಸಕನೂ ಬಿಜೆಪಿಯನ್ನು ಬೆಂಬಲಿಸುವುದಿಲ್ಲ ಅಥವಾ ಅವರೊಂದಿಗೆ ಹೋಗುವುದಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಬೇಸತ್ತಿದ್ದರಿಂದಲೇ ಜನರು ನಮಗೆ ಮತವನ್ನು ನೀಡಿದರು. ಎರಡೂ ಪಕ್ಷಗಳು ಲೋಕಪಾಲ ಮಸೂದೆಯನ್ನು ಮಂಡಿಸಲಿಲ್ಲ. ಹೀಗಿರುವಾಗ ಅವೆರಡು ಪಕ್ಷಗಳನ್ನು ನಾವು ಹೇಗೆ ಬೆಂಬಲಿಸಬೇಕು? ಎಂದು ಪ್ರಶ್ನಿಸಿದ ಅವರು, ನಾವು ಮತ್ತೆ ಚುನಾವಣೆ ಎದುರಿಸಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.

ಇದಕ್ಕೂ ಮೊದಲು, ಭಾರತೀಯ ಜನತಾ ಪಕ್ಷದೊಡನೆ ಆಮ್ ಆದ್ಮಿ ಪಕ್ಷ ಕೈಜೋಡಿಸಿ ದೆಹಲಿಯಲ್ಲಿ ಸರಕಾರ ರಚಿಸಬೇಕು. ಮತ್ತೊಂದು ಚುನಾವಣೆಯನ್ನು ದೆಹಲಿ ಜನರು ಎದುರಿಸುವಂತೆ ಆಗಬಾರದು. ಜನರು ಮತ ಹಾಕಿದ್ದು ಸರಕಾರ ರಚಿಸಲೆಂದೇ ಹೊರತು ಮತ್ತೊಂದು ಚುನಾವಣೆ ನೋಡಲೆಂದಲ್ಲ ಎಂದು ಮಾಜಿ ಪೊಲೀಸ್ ಅಧಿಕಾರಿ ಕಿರಣ್ ಬೇಡಿ ಅವರು ಅರವಿಂದ್ ಕೇಜ್ರಿವಾಲ್ ಅವರನ್ನು ಮನವಿ ಮಾಡಿಕೊಂಡಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+