ದಾವೂದ್ ಅಂತ್ಯಕ್ಕೆ ಭಾರತ, ಯುಎಇ ಮಾಸ್ಟರ್ ಪ್ಲಾನ್
ನವದೆಹಲಿ, ಮಾರ್ಚ್ 25: ಭೂಗತ ಪಾತಕಿ ದಾವೂದ್ ಇಬ್ರಾಹಿಂ ವಿರುದ್ಧ ತೆಗೆದುಕೊಂಡ ಕ್ರಮದಲ್ಲಿ, ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರ ಆತನ ಆಸ್ತಿ ಬಗ್ಗೆ ತನಿಖೆ ಕೈಗೊಂಡಿದೆ. ಅಲ್ಲಿನ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಪ್ರಕರಣದ ಅಡಿಯಲ್ಲಿ ದೂರನ್ನು ಸಹ ದಾಖಲಿಸಿದೆ. ಈ ಕ್ರಮಗಳನ್ನು ನೋಡಿದರೆ ಅಂತೂ ದಾವೂದ್ ಇಬ್ರಾಹಿಂ ಗೆ ರಾಹುಕಾಲ ಶುರುವಾಗಿರುವುದು ಕಂಡುಬಂದಿದೆ.
ದಾವೂದ್ ಇಬ್ರಾಹಿಂ ಗೆ ಸಂಬಂಧಿಸಿದ ಹಲವು ಬ್ಯುಸಿನೆಸ್ ಮತ್ತು ಅಕ್ರಮ ಆಸ್ತಿಗಳು ದುಬೈ ನಲ್ಲಿರುವುದು ಈಗಾಗಲೇ ಪತ್ತೆಯಾಗಿದ್ದು, ಹೆಚ್ಚಿನ ತನಿಖೆಗಾಗಿ ಭಾರತದ ಸರ್ಕಾರವು ಸಹ ಯುನೈಟೈಡ್ ಅರಬ್ ಎಮಿರೇಟ್ಸ್ ಸರ್ಕಾರದೊಂದಿಗೆ ಕೈಜೋಡಿಸಿದೆ. ದಾವುದ್ ಬಗ್ಗೆ ಮೊದಲ ತನಿಖೆಯನ್ನು 2015 ರಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ದುಬೈಗೆ ಭೇಟಿ ನೀಡಿದ್ದಾಗ ಕೈಗೊಂಡಿದ್ದರು. ಈ ವೇಳೆ ಅಜಿತ್ ದೋವಲ್, ದಾವೂದ್ ಗೆ ಸಂಬಂಧಿಸಿದ ಹಲವು ಆಸ್ತಿಗಳ ಪಟ್ಟಿ ನೀಡಿ ವಶಪಡಿಸಿಕೊಳ್ಳಲು ಕೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರ ಅಂದೇ ಪ್ರತ್ಯೇಕ ತನಿಖಾ ದಳವನ್ನು ಸ್ಥಾಪಿಸಿ ಆಸ್ತಿ ಪರೀಶೀಲನೆ ಮಾಡಲು ಹೇಳಿತ್ತು.
ಪ್ರಸ್ತುತ ಜಾರಿ ನಿರ್ದೇಶನಾಲಯ ಪಿಎಂಎಲ್ ಎ ಅಡಿಯಲ್ಲಿ ದೂರು ದಾಖಲಿಸಲು ನಿರ್ಧರಿಸಿದ್ದು, ಶೀಘ್ರವಾಗಿ ಆಸ್ತಿ ಮುಟ್ಟುಗೋಲು ಹಾಕುವ ಸಾಧ್ಯತೆಗಳು ಇವೆ. ಆದರೆ ಜಾರಿ ನಿರ್ದೇಶನಾಲಯ ಕಾನೂನಿನ ಅಡಿಯಲ್ಲಿ ಮನವಿ ಸಲ್ಲಿಸಲು ಅಗತ್ಯ ಸಾಕ್ಷಿಗಳನ್ನು ಮೊದಲು ಕಲೆಕ್ಟ್ ಮಾಡಲು ಸಜ್ಜಾಗಿದೆ. ತನಿಖೆಯಲ್ಲಿ ದಾವೂದ್ ಆಸ್ತಿ ಅಕ್ರಮ ಎನ್ನಲು ಸರಿಯಾದ ಪುರಾವೆ ಒದಗಿದಲ್ಲಿ, ಆಸ್ತಿಯನ್ನು ಹರಾಜು ಹಾಕುವ ಕ್ರಮವು ಜರುಗಲಿದೆ.
ದಾವೂದ್ ಆಸ್ತಿ ಮೇಲೆ ಭಾರತ ನೀಡಿರುವ ದಾಖಲೆಗಳ ಆಧಾರದಲ್ಲಿ ತನಿಖೆ ಕೈಗೊಳ್ಳಲಾಗಿದೆ. ಭಾರತ ಸಿದ್ಧಪಡಿಸಿರುವ ಪಟ್ಟಿಯಲ್ಲಿ ಹಲವು ಪ್ರಾಪರ್ಟೀಸ್ ಇದ್ದು, ಗೋಲ್ಡೆನ್ ಬಾಕ್ಸ್ ಎಂಬ ಕಂಪನಿ ದುಬೈ ನಲ್ಲಿ ಚಾಲನೆಯಲ್ಲಿದೆ ಎಂದು ಸೂಚಿಸಲಾಗಿದೆ. ಅಲ್ಲದೇ ಹೋಟೆಲ್ ಗಳು ಇರುವುದಾಗಿ ಹೇಳಲಾಗಿದೆ. ಲಿಸ್ಟ್ ನಲ್ಲಿ 50 ಕ್ಕೂ ಹೆಚ್ಚು ಪ್ರಮುಖ ಪ್ರಾಪರ್ಟೀಸ್ ಇದ್ದು, ಅಲ್ಲದೇ ED ದಾವೂದ್ ಗ್ಯಾಂಗ್ ಇತರೆ ದೇಶಗಳಲ್ಲಿ ಹೊಂದಿರುವ ಆಸ್ತಿ ಬಗ್ಗೆ ಹೆಚ್ಚು ಮಾಹಿತಿ ಕಲೆಹಾಕುತ್ತಿದೆ.