ದೆಹಲಿ ಹಿಂಸಾಚಾರ: ಗಾಯಾಳು ಪೊಲೀಸರನ್ನು ಭೇಟಿ ಮಾಡಿದ ಅಮಿತ್ ಶಾ
ನವದೆಹಲಿ, ಜನವರಿ 28: ಗಣರಾಜ್ಯೋತ್ಸವ ದಿನದಂದು ರೈತರ ಟ್ರ್ಯಾಕ್ಟರ್ ಮೆರವಣಿಗೆ ಸಂದರ್ಭದಲ್ಲಿ ಉಂಟಾದ ಹಿಂಸಾಚಾರದಲ್ಲಿ ಗಾಯಗೊಂಡ ಪೊಲೀಸರು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಗಳಿಗೆ ಗುರುವಾರ ಭೇಟಿ ನೀಡಿದ ಗೃಹ ಸಚಿವ ಅಮಿತ್ ಶಾ, ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು.
ಚಿಕಿತ್ಸೆ ಪಡೆಯುತ್ತಿರುವ ದೆಹಲಿ ಪೊಲೀಸ್ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದ ಅಮಿತ್ ಶಾ, ಅವರ ಆರೋಗ್ಯ ಪ್ರಗತಿ ಕುರಿತು ವೈದ್ಯರಿಂದ ಮಾಹಿತಿ ಪಡೆದರು. ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಮತ್ತು ದೆಹಲಿ ಪೊಲೀಸ್ ಆಯುಕ್ತ ಎಸ್ ಎನ್ ಶ್ರೀವಾಸ್ತವ ಈ ಸಂದರ್ಭದಲ್ಲಿ ಹಾಜರಿದ್ದರು.
ಆಸ್ಪತ್ರೆಗೆ ತೆರಳುವ ಮುನ್ನ ಟ್ವೀಟ್ ಮಾಡಿದ್ದ ಅಮಿತ್ ಶಾ, 'ಗಾಯಗೊಂಡ ದೆಹಲಿಪೊಲೀಸ್ ಸಿಬ್ಬಂದಿಯನ್ನು ಭೇಟಿಯಾಗುತ್ತಿದ್ದೇನೆ. ಅವರ ಧೈರ್ಯ ಮತ್ತು ಸ್ಥೈರ್ಯದ ಬಗ್ಗೆ ನಮಗೆ ಹೆಮ್ಮೆಯಾಗುತ್ತಿದೆ' ಎಂದು ಹೇಳಿದ್ದರು.

ಶುಶ್ರುತ ಟ್ರಾಮಾ ಸೆಂಟರ್ ಮತ್ತು ತೀರ್ಥರಾಮ ಆಸ್ಪತ್ರೆಗಳಿಗೆ ಅಮಿತ್ ಶಾ ಭೇಟಿ ನೀಡಿದರು. ಘಟನೆಯಲ್ಲಿ 400ಕ್ಕೂ ಹೆಚ್ಚು ಪೊಲೀಸರಿಗೆ ಗಾಯಗಳಾಗಿವೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಇನ್ನೊಂದೆಡೆ ದೆಹಲಿ-ಹರ್ಯಾಣದಲ್ಲಿನ ಸಿಂಘು ಗಡಿಯಲ್ಲಿ ಕೆಲವರು ಸ್ಥಳೀಯರು ರೈತರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಸಿಂಘು ಗಡಿ ಪ್ರದೇಶದ ನಿವಾಸಿಗಳು ಎಂದು ಹೇಳಿಕೊಂಡಿರುವ ಜನರ ಗುಂಪೊಂದು, ಗುರುವಾರ ಮಧ್ಯಾಹ್ನ ರಸ್ತೆಗಿಳಿದು ಈ ಸ್ಥಳವನ್ನು ಖಾಲಿ ಮಾಡುವಂತೆ ರೈತರನ್ನು ಒತ್ತಾಯಿಸಿತು.

ರೈತರ ಪ್ರತಿಭಟನೆಯಿಂದ ತಮ್ಮ ದೈನಂದಿನ ವ್ಯವಹಾರಗಳಿಗೆ ಭಾರಿ ಹೊಡೆತ ಬಿದ್ದಿದೆ. ಸಂಚಾರ, ವ್ಯವಹಾರಗಳಿಗೆ ತೊಂದರೆಯಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.












Click it and Unblock the Notifications