ಜೆಎನ್ಯು ಗಲಭೆ; ಹೊಣೆ ಹೊತ್ತುಕೊಂಡ ಹಿಂದೂ ರಕ್ಷಾ ದಳ
ನವದೆಹಲಿ, ಜನವರಿ 08 : ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಹಲ್ಲೆ ಪ್ರಕರಣದ ಜವಾಬ್ದಾರಿಯನ್ನು ' ಹಿಂದೂ ರಕ್ಷಾ ದಳ' ಎಂಬ ಸಂಘಟನೆ ಹೊತ್ತುಕೊಂಡಿದೆ. ಭಾನುವಾರ ವಿದ್ಯಾರ್ಥಿಗಳ ಮೇಲೆ ಮುಸುಕು ಧಾರಿಗಳು ಹಲ್ಲೆ ಮಾಡಿದ್ದರು.
'ಹಿಂದೂ ರಕ್ಷಾ ದಳ'ದ ಮುಖ್ಯಸ್ಥರು ಎಂದು ಹೇಳಿಕೊಳ್ಳುವ ಪಿಂಕಿ ಚೌಧರಿ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರ ಮೇಲೆ ನಡೆದ ಹಲ್ಲೆಯ ಹೊಣೆಯನ್ನು ಹೊತ್ತುಕೊಂಡಿದ್ದಾರೆ. ದೆಹಲಿಯ ಗೌಜಿಯಾಬಾದ್ ಪೊಲೀಸರು ಪಿಂಚಿ ಚೌಧರಿಗೆ ವಿಚಾರಣೆಗೆ ಬರುವಂತೆ ಸಮನ್ಸ್ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕಿರುವ ಪಿಂಕಿ ಚೌಧರಿ ಎಂಬುವವರು, " ಜೆಎನ್ ಹಲವು ವರ್ಷಗಳಿಂದ ಕಮ್ಯುನಿಷ್ಟರ ಕೋಟೆಯಾಗಿದೆ. ಇದನ್ನು ನಾವು ಸಹಿಸುವುದಿಲ್ಲ. ರಾಷ್ಟ್ರ ವಿರೋಧಿ ಚಟುವಟಿಕೆಯಲ್ಲಿ ತೊಡಗುವವರನ್ನು ಹಿಗೇಯೇ ಎದುರಿಸಲಾಗುತ್ತದೆ" ಎಂದು ಹೇಳಿದ್ದಾರೆ.

"ಜೆಎನ್ಯು ಆವರಣದಲ್ಲಿ ಭಾನುವಾರ ರಾತ್ರಿ ನಡೆದ ಘಟನೆಯ ಹೊಣೆಯನ್ನು ಹಿಂದೂ ರಕ್ಷಾ ದಳದ ಭೂಪೇಂದ್ರ ತೋಮರ್, ಪಿಂಕಿ ಚೌಧರಿ ಹೊರುತ್ತಾರೆ. ಭಾರತ ಮಾತೆಯ ರಕ್ಷಣೆಗಾಗಿ ಇಂಥ ಕೆಲಸ ಮಾಡಲು ಹಿಂಜರಿಯುವವರಿಗೆ ಈ ದೇಶದಲ್ಲಿ ಜೀವಿಸುವ ಹಕ್ಕಿಲ್ಲ" ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.
ಭಾನುವಾರ ರಾತ್ರಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡ 20ಕ್ಕೂ ಅಧಿಕ ಜನರು ಜೆಎನ್ಯು ಆವರಣಕ್ಕೆ ನುಗ್ಗಿದ್ದರು. ಹಲವು ವಿದ್ಯಾರ್ಥಿಗಳು ಮತ್ತು ಪ್ರಾಧ್ಯಪಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರು. ಈ ಹಲ್ಲೆ ನಡೆಸಿದ್ದು ಯಾರು? ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆಯನ್ನು ಹಲವರು ಖಂಡಿಸಿದ್ದಾರೆ. ವಿದ್ಯಾರ್ಥಿಗಳ ಜೊತೆ ಪ್ರತಿಭಟನೆಯಲ್ಲಿ ನಟಿ ದೀಪಿಕಾ ಪಡುಕೋಣೆ ಪಾಲ್ಗೊಂಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಆರಂಭವಾಗಿದೆ.
ಜೆಎನ್ಯು ಆವರಣದಲ್ಲಿ ನಡೆದ ಗಲಭೆ, ವಿದ್ಯಾರ್ಥಿಗಳ ಮೇಲಿನ ಹಲ್ಲೆ ಪ್ರಕರಣದ ಬಗ್ಗೆ ತನಿಖೆಗೆ ಗೃಹ ಸಚಿವಾಲಯ ಆದೇಶ ನೀಡಿದೆ. ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆಗೆ ಕುಲಪತಿ ಜಗದೀಶ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ. "ಈಗ ಕ್ಯಾಂಪಸ್ ಈಗ ಸುರಕ್ಷಿತವಾಗಿದೆ. ಹಿಂದಿನದ್ದನ್ನು ಮರೆತು ಎಲ್ಲರೂ ಕ್ಯಾಂಪಸ್ಗೆ ಬರಬೇಕು" ಎಂದು ಕರೆ ನೀಡಿದ್ದಾರೆ.












Click it and Unblock the Notifications