ಸುಪ್ರೀಂ ಕೋರ್ಟ್ ನಲ್ಲಿ ಅನರ್ಹ ಶಾಸಕರ ತೀರ್ಪು: ಮುಖ್ಯಾಂಶಗಳು
ನವದೆಹಲಿ, ನವೆಂಬರ್ 13: ಉಪಚುನಾವಣೆಗೆ ಸ್ಪರ್ಧಿಸಬಹುದು ಎಂಬ ಸುಪ್ರೀಂ ಕೋರ್ಟ್ ಆದೇಶ ಕೇಳಿ ನಿರಾಳರಾಗುತ್ತಿದ್ದ ಅನರ್ಹ ಶಾಸಕರಿಗೆ ಸರ್ವೋಚ್ಚ ನ್ಯಾಯಾಲಯದ ಮತ್ತೊಂದು ಆದೇಶ ಆಘಾತವನ್ನುಂಟು ಮಾಡಿದೆ.
ಮಂತ್ರಿ ಸ್ಥಾನದ ಬೇಡಿಕೆಯನ್ನು ಮುಂದಿಟ್ಟುಕೊಂಡೇ ಮೈತ್ರಿ ಸರ್ಕಾರದೊಂದಿಗೆ ಬಂಡಾಯವೆದ್ದಿದ್ದ ಶಾಸಕರಿಗೆ ಇದೀಗ ಚುನಾವಣೆಗೆ ಸ್ಪರ್ಧಿಸುವುದಕ್ಕೇನೋ ಸುಪ್ರೀಂ ಕೋರ್ಟ್ ಅವಕಾಶ ನೀಡಿದೆ.
ಆದರೆ ಮರು ಆಯ್ಕೆಯಾಗುವವರೆಗೂ ಸಚಿವ ಸ್ಥಾನ, ಅಥವಾ ಯಾವುದೇ ಸಾಂವಿಧಾನಕ ಹುದ್ದೆ ಪಡೆಯುವಂತಿಲ್ಲ ಎಂಬ ಆದೇಶವನ್ನೂ ನೀಡಿದೆ. ಇಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಪ್ರಮುಖ ಅಂಶಗಳು ಇಲ್ಲಿವೆ.

ಅನರ್ಹತೆ ಸರಿ
ಪಕ್ಷಾಂತರ ನಿಷೇಧ ಕಾಯ್ದೆಯಡಿಯಲ್ಲಿ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಈ ಮೂಲಕ ಅನರ್ಹತೆಯನ್ನು ಪ್ರಶ್ನಿಸಿದ್ದ ಶಾಸಕರಿಗೆ ತಕ್ಕ ಉತ್ತರ ನೀಡಿದೆ.

ಚುನಾವಣೆಗೆ ಸ್ಪರ್ಧಿಸಬಹುದು
ಶಾಸಕರ ಮೊದಲ ಬೇಡಿಕೆಯಿದ್ದಿದ್ದು, ಉಪಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿ ಎಂಬುದು. ಆ ಬೇಡಿಕೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದ್ದು, ಅನರ್ಹ ಶಾಸಕರು ಉಪಚುನಾವಣೆಗೆ ಸ್ಪರ್ಧಿಸಬಹುದು ಎಂದಿದೆ.

ಮಂತ್ರಿಸ್ಥಾನವಿಲ್ಲ!
ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸಬಹುದು. ಆದರೆ ಅವರು ಮರು ಆಯ್ಕೆಯಾಗುವವರೆಗೂ ಸಚಿವರಾಗುವಂತಿಲ್ಲ ಮತ್ತು ಯಾವುದೇ ರೀತಿಯ ಸಾಂವಿಧಾನಿಕ ಹುದ್ದೆ ಹೊಂದುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಸ್ಪೀಕರ್ ಗೆ ಅನರ್ಹತೆ ಕಾಲಾವಧಿ ನಿರ್ಧರಿಸೋ ಹಕ್ಕಿಲ್ಲ
ಸ್ಪೀಕರ್ ಶಾಸಕರ ಅನರ್ಹತೆಯನ್ನು ನಿರ್ಧರಿಸಬಹುದು. ಆದರೆ ಅನರ್ಹತೆಯ ಕಾಲಾವಧಿಯನ್ನು ಸ್ಪೀಕರ್ ನಿರ್ಧರಿಸುವುದಕ್ಕೆ ಬರುವುದಿಲ್ಲ ಎಂದು ಕೋರ್ಟು ಹೇಳಿದೆ. ಪಕ್ಷಾಂತರ ನಿಷೇಧ ಕಾಯ್ದೆಯಡಿ ಶಾಸಕರನ್ನು ಅನರ್ಹರೆಂದು ಘೋಷಿಸಿ, 2023 ವರವರೆಗೆ ಅವರು ಚುನಾವಣೆಗೆ ಸ್ಪರ್ಧಿಸಬಾರದು ಎಂಬ ನಿರ್ಧಾರ ಸರಿಯಲ್ಲ ಎಂದು ಕೋರ್ಟು ಹೇಳಿದೆ.












Click it and Unblock the Notifications