ತಾವೇ ತೋಡಿದ್ದ ಹಳ್ಳಕ್ಕೆ ತಾವೇ ಬಿದ್ದರಾ ರಂಜನ್ ಗೋಗಾಯ್?
ನವದೆಹಲಿ, ಜನವರಿ 13: ನವದೆಹಲಿಯ ಸರ್ವೋಚ್ಚ ನ್ಯಾಯಾಲಯದ ಅಂಗಳದಲ್ಲಿ ನಿನ್ನೆ ನಡೆದ ಅನಿರೀಕ್ಷಿತ ಬೆಳವಣಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದೆ.
ಸುಪ್ರೀಂ ಕೋರ್ಟಿನ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿ ನಡೆಸಿ, ನ್ಯಾಯಾಂಗದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸೂಚನೆ ನೀಡಿದ್ದರು. ಆದರೆ ಈ ನಡೆಯಿಂದಾಗಿ ಇದೇ ಅಕ್ಟೋಬರ್ ನಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿ ಪಟ್ಟ ಏರಬೇಕಿದ್ದ ರಂಜನ್ ಗೋಗಾಯ್ ಸ್ಥಾನಕ್ಕೆ ಕುತ್ತು ಬರುತ್ತಿದೆಯಾ?
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಸುದ್ದಿಗೋಷ್ಠಿ ಕರೆದಿದ್ದು ಏಕೆ?
ಅಂಥದೊಂದು ಪ್ರಶ್ನೆ ಎದ್ದಿದೆ ಈಗ. ಹಾಲಿ ಸಿಜೆ ಐ ದೀಪಕ್ ಮಿಶ್ರಾ 2018 ರ ಅಕ್ಟೋಬರ್ ನಲ್ಲಿ ತಮ್ಮ ಸ್ಥಾನದಿಂದ ನಿವೃತ್ತರಾಗಲಿದ್ದಾರೆ. ಅವರ ಉತ್ತರಾಧಿಕಾರಿಯಾಗಿರುವವರು ರಂಜನ್ ಗೋಗಾಯ್. ಪದ್ಧತಿಯ ಪ್ರಕಾರ ಅವರೇ ಸಿಜೆಐ ಆಗಬೇಕು. ಆದರೆ ನಿನ್ನೆಯ ನಡೆಯಿಂದಾಗಿ ಸುಪ್ರೀಂ ಕೋರ್ಟಿನ ಗೌರವಕ್ಕೆ ಧಕ್ಕೆಯಾಗಿದೆ ಎಂದು ಹಾಲಿ ಸಿಜೆಐ ಏನಾದರೂ ದೂರಿದರೆ, ಗೋಗಾಯ್ ಅವರ ಹೆಸರನ್ನು ಸಿಜೆಐ ಪಟ್ಟಕ್ಕೆ ಸೂಚಿಸದಿರುವ ಅವಕಾಶವೂ ಮಿಶ್ರಾ ಅವರಿಗಿದೆ!
ಇದುವರೆಗೂ ಭಾರತದ ನ್ಯಾಯಾಂಗದ ಇತಿಹಾಸದಲ್ಲಿ ಇಂಥ ಘಟನೆಗಳು ನಡೆದಿಲ್ಲವಾದರೂ, ತಮ್ಮ ನಿವೃತ್ತಿಯ ಸಮಯದಲ್ಲಿ ಅತ್ಯಂತ ಹಿರಿಯ ನ್ಯಾಯಮೂರ್ತಿಯ ಹೆಸರನ್ನೇ ಸಿಜೆಐ ಪಟ್ಟಕ್ಕೆ ರಾಷ್ಟ್ರಪತಿಯವರಿಗೆ ದೀಪಕ್ ಮಿಶ್ರಾ ಸೂಚಿಸಬೇಕಾಗುತ್ತದೆ. ಅದು ಎಂದಿನಿಂದಲೂ ನ್ಯಾಯಾಂಗದ ಸಂಪ್ರದಾಯದಲ್ಲಿ ನಡೆದುಕೊಂಡು ಬಂದಿದೆ. ಅದೇ ಶಿಷ್ಟಾಚಾರ.
ಆದರೆ ಅಕಸ್ಮಾತ್, ನಿನ್ನೆಯ ನಡೆಯಿಂದ ನ್ಯಾಯಾಂಗದ ಗೌರವಕ್ಕೆ ದಕ್ಕೆ ಬಂದಿದೆ ಎಂಬ ಸಬೂಬು ನೀಡಿ ಗೋಗಾಯ್ ಅವರ ಬದಲು ಬೇರೆಯವರ ಹೆಸರನ್ನು ಸೂಚಿಸುವ ಅಧಿಕಾರ ಮಿಶ್ರಾ ಅವರಿಗಿದೆ. ಅಕಸ್ಮಾತ್ ವಿರಳಾತಿವಿರಳವಾದ ಈ ನಿರ್ಧಾರವನ್ನು ಮಿಶ್ರಾ ತೆಗೆದುಕೊಂಡಲ್ಲಿ ಗೋಗಾಯ್ ಸಿಜೆಐ ಆಗುವ ಕನಸು ನನಸಾಗುವುದು ಅನುಮಾನವೇ!
ಸುಪ್ರೀಂ ನ್ಯಾಯಮೂರ್ತಿಗಳು ಬರೆದಿರುವ ಪತ್ರದಲ್ಲಿ ಏನಿದೆ?
ಜ.12 ರಂದು ನವದೆಹಲಿಯಲ್ಲಿ ಸುಪ್ರೀಂ ಕೋರ್ಟಿನ ಹಿರಿಯ ನ್ಯಾಯಮೂರ್ತಿಗಳಾದ ನ್ಯಾ. ಕುರಿಯನ್ ಜೋಸೆಫ್, ನ್ಯಾ. ಜೆ ಚಲಮೇಶ್ವರ, ನ್ಯಾ. ರಂಜನ್ ಗೊಗೊಯ್ ಮತ್ತು ನ್ಯಾ. ಮದನ್ ಲೋಕೂರ್ ಸುದ್ದಿಗೋಷ್ಠಿ ಕರೆದಿದ್ದರು. ಈ ಸುದ್ದಿ ಗೋಷ್ಟಿಯಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಹಲವು ಹುಳುಕುಗಳಿವೆ ಎಂದು ಜರೆದಿದ್ದರು. ಮಾತ್ರವಲ್ಲ, ಇತ್ತೀಚೆಗೆ ದೀಪಕ್ ಮಿಶ್ರಾ ಅವರಿಗೆ ಈ ಕುರಿತು ಬರೆದ ಪತ್ರಕ್ಕೆ ಅವರು ಸರಿಯಾಗಿ ಪ್ರತಿಕ್ರಿಯೆ ನೀಡಿಲ್ಲ ಎಂದೂ ದೂರಿದ್ದರು. ಯಾವ ಸೂಚನೆಯನ್ನೂ ನೀಡದೆ, ಶಿಷ್ಟಾಚಾರವನ್ನೆಲ್ಲ ಉಲ್ಲಂಘಿಸಿದ ನ್ಯಾಯಮೂರ್ತಿಗಳ ನಡೆಗೆ ನ್ಯಾಯಾಂಗ ವಲಯದಲ್ಲಿ ತೀವ್ರ ಅಸಮಾಧಾನ ಸೃಷ್ಟಿಯಾಗಿತ್ತು.