ಸ್ವಚ್ಛ ಭಾರತ ಅಭಿಯಾನಕ್ಕಾಗಿ ಗಾಂಧಿ ಜಯಂತಿ ರಜೆ ಇಲ್ಲ
ನವದೆಹಲಿ, ಸೆ. 26 : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಸ್ವಚ್ಛ ಭಾರತ ಅಭಿಯಾನಕ್ಕೆ ಸಜ್ಜಾಗುತ್ತಿದೆ. ಅ.2ರಂದು ಮಹಾತ್ಮ ಗಾಂಧಿ ಅವರ ಹುಟ್ಟುಹಬ್ಬದ ದಿನ ಈ ಮಹತ್ವದ ಅಭಿಯಾನ ಜಾರಿಗೆ ಬರಲಿದ್ದು, ಅಂದು ಕೇಂದ್ರ ಸರ್ಕಾರ ನೌಕರರಿಗೆ ಕಚೇರಿಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಆದ್ದರಿಂದ ಈ ಬಾರಿ ಗಾಂಧಿ ಜಯಂತಿ ರಜೆಗೆ ಕತ್ತರಿ ಬಿದ್ದಿದೆ.
ಗಾಂಧಿ ಜಯಂತಿ ರಜೆ ರದ್ದುಗೊಳಿಸಿರುವ ಬಗ್ಗೆ ಸಂಪುಟ ಕಾರ್ಯದರ್ಶಿ ಅಜಿತ್ ಸೇಠ್ ಸುತ್ತೋಲೆ ಹೊರಡಿಸಿದ್ದು, ಗಾಂಧಿ ಜಯಂತಿ ದಿನವಾದ ಅ. 2ರಂದು ಎಲ್ಲ ನೌಕರರು 'ನಿರ್ಮಲ ಭಾರತ' ಪ್ರಮಾಣ ವಚನ ಸ್ವೀಕರಿಸಲು ತಪ್ಪದೇ ಕಚೇರಿಗೆ ಆಗಮಿಸಬೇಕೆಂದು ಸೂಚಿಸಿದ್ದಾರೆ.
ಕಚೇರಿಯ ಜವಾನನಿಂದ ಹಿಡಿದು ಉನ್ನತಾಧಿಕಾರಿಗಳ ತನಕ ಪ್ರತಿಯೊಬ್ಬರು ತಪ್ಪದೇ ಹಾಜರಾಗಬೇಕೆಂದು ಸೂಚಿಸಲಾಗಿದೆ. ಎಲ್ಲ ಇಲಾಖೆಗಳ ಕಾರ್ಯದರ್ಶಿಗಳಿಗೆ ಸುತ್ತೋಲೆ ಕಳುಹಿಸಿಕೊಡಲಾಗಿದ್ದು, ಯೋಜನೆ ಯಶಸ್ವಿಯಾಗುವಂತೆ ನೋಡಿಕೊಳ್ಳಬೇಕೆಂದು ನಿರ್ದೇಶನ ನೀಡಿದ್ದಾರೆ. [ಗಾಂಧಿ ಜಯಂತಿಯಂದು ಸ್ವಚ್ಛ ಭಾರತ ಅಭಿಯಾನ]

ಎರಡು ದಿನಗಳ ಕರ್ನಾಟಕ ಪ್ರವಾಸಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ದೇಶದ ನೈರ್ಮಲ್ಯವು ಸರ್ಕಾರಿ ಕಚೇರಿಗಳನ್ನು ಸ್ವತ್ಛಗೊಳಿಸುವ ಮೂಲಕ ಪ್ರಾರಂಭವಾಗಬೇಕೆಂದು ಹೇಳಿದ್ದರು. ಕೇಂದ್ರ ಸರ್ಕಾರದ ಈ ಮಹತ್ವಕಾಂಕ್ಷೆಯ ಯೋಜನೆಗೆ ಅ.2ರಂದು ಚಾಲನೆ ದೊರೆಯಲಿದೆ. [ಮೋದಿ ಕರ್ನಾಟಕ ಭೇಟಿ ಚಿತ್ರಗಳು]
ಸ್ವಚ್ಛ ಭಾರತ ಅಭಿಯಾನದ ಮೂಲಕ ದೇಶದ ನಗರ ಪ್ರದೇಶಗಳನ್ನು ಕಸಮುಕ್ತಗೊಳಿಸಲಾಗುತ್ತದೆ. ಐದು ವರ್ಷಗಳ ಅವಧಿಯ ಈ ಯೋಜನೆ 4,041 ನಗರ, ಪಟ್ಟಣಗಳಲ್ಲಿ ಜಾರಿಗೊಳ್ಳಲಿದ್ದು, ಯೋಜನಾ ವೆಚ್ಚ 62,000 ಕೋಟಿ ಆಗಲಿದೆ ಎಂದು ಕಾನೂನು ಮತ್ತು ಟೆಲಿಕಾಂ, ಐಟಿ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. [ಮಂಡ್ಯ ಜಿಲ್ಲೆಯಲ್ಲಿ 1 ಲಕ್ಷ ಶೌಚಾಲಯ ನಿರ್ಮಾಣ]
ಈ ಮಹತ್ವದ ಅಭಿಯಾನಕ್ಕಾಗಿ ಕೇಂದ್ರ ಸರ್ಕಾರ ಸುಮಾರು 14,623 ಕೋಟಿ ಮೀಸಲಿಟ್ಟಿದೆ. 1.04 ಮನೆಗಳು, 2.5 ಲಕ್ಷ ಸಮುದಾಯ ಶೌಚಾಲಯ, 2.6 ಲಕ್ಷ ಸಾರ್ವಜನಿಕ ಶೌಚಾಲಯ ಹಾಗೂ ಘನ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆ ಗುರಿಯನ್ನು ಅಭಿಯಾನದ ಮೂಲಕ ಹೊಂದಲಾಗಿದೆ.












Click it and Unblock the Notifications