ಯಾದಗಿರಿ ಜಿಲ್ಲೆಗೆ ರೈಲ್ವೆ ಕೋಚ್ ಫ್ಯಾಕ್ಟರಿ, ಕೇಂದ್ರ ಅಸ್ತು
ಗುರುವಾರದ ಲೋಕಸಭೆ ಅಧಿವೇಶನದಲ್ಲಿ ರೈಲ್ವೆ ಸಚಿವ ಮತ್ತು ಯಾದಗಿರಿ ಪಕ್ಕದ ಗುಲ್ಬರ್ಗ ಸಂಸದ ಮಲ್ಲಿಕಾರ್ಜುನ ಖರ್ಗೆ 70,759 ಕೋಟಿ ರೂ. ಮೊತ್ತದ ರೈಲ್ವೆ ಪೂರಕ ಅಂದಾಜಿನ ಪೂಕರ ಬಜೆಟ್ ಮಂಡಿಸಿದರು ಇದರಲ್ಲಿ ಯಾದಗಿರಿ ಯೋಜನೆಯ ಪ್ರಸ್ತಾಪವೂ ಇತ್ತು. ಯಾವುದೇ ಚರ್ಚೆ ನಡೆಸದೆ, ಗದ್ದಲದ ನಡುವೆಯೇ ಈ ಪೂರಕ ಅಂದಾಜು ಕಲಾಪದಲ್ಲಿ ಅಂಗೀಕಾರವಾಗಿದೆ.
ಹಿಂದೆ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಕೋಲಾರ ಸಂಸದ ಕೆ.ಎಚ್.ಮುನಿಯಪ್ಪ ಕೋಲಾರ ಜಿಲ್ಲೆಗೆ ರೈಲ್ವೆ ಬೋಗಿ ಕಾರ್ಖಾನೆ ಮಂಜೂರು ಮಾಡಿಸಿಕೊಂಡಿದ್ದರು. ಸದ್ಯ ಮಲ್ಲಿಕಾರ್ಜುನ ಖರ್ಗೆ ಅವರಿಂದ ಯಾದಗಿರಿಗೆ ಮತ್ತೊಂದು ಕಾರ್ಖಾನೆ ಮಂಜೂರಾಗಿದೆ. ಇದರಿಂದಾಗಿ ರಾಜ್ಯಕ್ಕೆ 2 ಬೋಗಿ ಕಾರ್ಖಾನೆಗಳು ಮಂಜೂರಾದಂತಾಗಿದೆ.
ಪಶ್ಚಿಮ ಬಂಗಾಳದ ಹಲವು ಮಾರ್ಗಗಳಲ್ಲಿ ಮಾರ್ಗ ವಿದ್ಯುದೀಕರಣಕ್ಕೆ 22,926 ಕೋಟಿ, ಯಾದಗಿರಿಯಲ್ಲಿ ಎಲ್ಎಚ್ಬಿ ಡಿಸೈನ್ ಕೋಚ್ಗಳಿಗೆ ಬೋಗಿ ತಯಾರಿಸುವ ಕಾರ್ಯಾಗಾರ ಸ್ಥಾಪನೆಗೆ 7500 ಕೋಟಿ ರೂ. ಖರ್ಚು ಮಾಡುವ ಪ್ರಸ್ತಾಪ ಈ ಪೂರಕ ಅಂದಾಜಿನಲ್ಲಿ ಸೇರಿವೆ. ರೈಲ್ವೆ ಮೇಲ್ಸೆತುವೆ, ಕೆಳಸೇತುವೆಗಳನ್ನು ನಿರ್ಮಿಸುವುದಕ್ಕೂ ಹಣ ಖರ್ಚು ಮಾಡಲು ಇದರಲ್ಲಿ ಒಪ್ಪಿಗೆ ಪಡೆಯಲಾಗಿದೆ.
ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನ ಮಾನ ನೀಡುವ ಮೂಲಕ ಕೇಂದ್ರ ಸರ್ಕಾರ ಉತ್ತರ ಕರ್ನಾಟಕ ಭಾಗಕ್ಕೆ ಕೊಡುಗೆ ನೀಡುತ್ತು. ಸದ್ಯ ಕರ್ನಾಟಕದ 30ನೇ ಜಿಲ್ಲೆಯಾಗಿ ಮೂರೂವರೆ ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಯಾದಗಿರಿಗೆ ರೈಲ್ವೆ ಸಚಿವಾಲಯ ಮತ್ತೊಂದು ಕೊಡುಗೆ ನೀಡಿದೆ.