ಕ್ರೈಂ ರಾಜಧಾನಿ ದೆಹಲಿಯಲ್ಲಿ ಕಾಮುಕರ ಅಟ್ಟಹಾಸ
ನವದೆಹಲಿ, ಆ.20: ಅತ್ತ ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆ ಬಳಿ ಸ್ವಾತಂತ್ರ್ಯೋತ್ಸವ ಆಚರಣೆ ಭಾಷಣದಲ್ಲಿ ಮಹಿಳೆಯರ ರಕ್ಷಣೆ ಬಗ್ಗೆ ಹೇಳುತ್ತಿದ್ದರೆ, ಇತ್ತ ಒಬೆರಾಯ್ ಹೋಟೆಲ್ ನಲ್ಲಿ ನರ್ಸ್ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ದೇಶದ ರಾಜಧಾನಿ ದೆಹಲಿ ಮತ್ತೊಮ್ಮೆ ಮಹಿಳೆಯರಿಗೆ ಸುರಕ್ಷಿತವಾಗಿಲ್ಲ ಎಂಬ ಘೋರ ಸಂದೇಶವನ್ನು ಜಗತ್ತಿಗೆ ಸಾರಿದೆ. ಮುಂದುವರೆದ ಅತ್ಯಾಚಾರ ಸರಣಿ, ಪ್ರತಿಭಟನೆ ನಡುವೆ,ದೆಹಲಿಯಲ್ಲಿನ ಅರಾಜಕತೆಗೆ ಉತ್ತರ ನೀಡುವವರು ಇಲ್ಲದ್ದಂತಾಗಿದ್ದಾರೆ.
ಡಿ16,2012ರ ಸಾಮೂಹಿಕ ಅತ್ಯಾಚಾರ ಪ್ರಕರಣದ ನಂತರ ದೆಹಲಿಯಲ್ಲಿ ಮಹಿಳೆಯ ಸುರಕ್ಷತೆಗಾಗಿ ಅನೇಕ ಮಾರ್ಗೋಪಾಯಗಳನ್ನು ಕಂಡುಕೊಳ್ಳಲಾಗಿತ್ತು. ಆದರೆ, ಒಬೆರಾಯ್ ಹೋಟೆಲ್ ಗೆ ಹೋದ ನರ್ಸ್ ಗೆ ಇದ್ಯಾವುದೂ ನೆರವಿಗೆ ಬರಲಿಲ್ಲ. ಹೋಟೆಲ್ ಮಾಲೀಕರ ಪತ್ನಿಗೆ ಚಿಕಿತ್ಸೆ ನೀಡಲು ಬಂದಿದ್ದ ನರ್ಸ್ ಮೇಲೆ ಕಾಮಪೀಡಿತರು ಮುಗಿ ಬಿದ್ದು ಮುಕ್ಕಿರುವ ದಾರುಣ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ದೆಹಲಿಯಲ್ಲಿರುವ ಪ್ರತಿಷ್ಠಿತ ಒಬೆರಾಯ್ ಹೊಟೆಲ್ನಲ್ಲಿ ಈ ಕೃತ್ಯ ನಡೆದಿದ್ದು, ಸ್ವಾತಂತ್ರ್ಯ ದಿನಾಚರಣೆಯ ರಾತ್ರಿಯಲ್ಲಿ ಇಬ್ಬರು ಕಾಮುಕರು ತಮ್ಮ ಅಟ್ಟಹಾಸ ಮೆರೆದಿದ್ದಾರೆ. ಒಬೆರಾಯ್ ಹೊಟೆಲ್ನಲ್ಲಿ ಅಸ್ವಸ್ಥ ಮಹಿಳೆಗೆ ಚಿಕಿತ್ಸೆ ನೀಡಿ ತನ್ನ ಕೊಠಡಿಗೆ ವಾಪಸ್ ಹೋಗುತ್ತಿದ್ದ 27 ವರ್ಷದ ನರ್ಸ್ ಮೇಲೆ ಇಬ್ಬರು ಸಿಬ್ಬಂದಿಗಳು ಅತ್ಯಾಚಾರಕ್ಕೆ ಮುಂದಾಗಿದ್ದಾರೆ. ಈ ವೇಳೆ ಆಕೆ ಪ್ರತಿರೋಧಿಸಿದಾಗ, ನಿನ್ನ ಕೆಲಸ ಕಳೆದುಕೊಳ್ಳುವಂತೆ ಮಾಡುತ್ತೇವೆ, ಜೀವ ತೆಗೆಯುತ್ತೇವೆ ಎಂದು ಅವರು ಬೆದರಿಕೆ ಹಾಕಿ ಬಲಾತ್ಕಾರ ಮಾಡಿದ್ದಾರೆ.

ಹೊಟೆಲ್ ಸಿಬ್ಬಂದಿಗಳ ದುಷ್ಕೃತ್ಯದಿಂದ ಮಾನಸಿಕವಾಗಿ ತೀವ್ರ ಜರ್ಜರಿತಳಾಗಿದ್ದ ನರ್ಸ್, ಈ ವಿಚಾರವನ್ನು ಯಾರಿಗೂ ಹೇಳದೇ ತನ್ನಲ್ಲೇ ಬಟ್ಟಿಟ್ಟುಕೊಂಡಿದ್ದಳು. ಆದರೆ ಮತ್ತೆ ಅದೇ ಸಿಬ್ಬಂದಿಗಳು ಭಾನುವಾರ ರಾತ್ರಿ ತನ್ನ ಮೇಲೆ ಎರಗಲು ಮುಂದಾದಾಗ, ಕೊಠಡಿಯಲ್ಲಿದ್ದ ಅಲಾರ್ಮ್ ಅನ್ನು ಒತ್ತಿ ತನ್ನ ಪತಿರಾಯನನ್ನು ಕರೆದಿದ್ದಾಳೆ. ಬಳಿಕ ತನ್ನ ಮೇಲಾದ ದುಷ್ಕೃತ್ಯವನ್ನು ತನ್ನ ಪತಿಗೆ ವಿವರಿಸಿದ್ದು, ಆಕೆಯ ಪತಿ ಸೋಮವಾರ ಬೆಳಗ್ಗೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾನೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ನೀರಜ್ (25) ಮತ್ತು ರಾಜನ್ (23) ಎಂಬ ಇಬ್ಬರು ಯುವಕರನ್ನು ಬಂಧಿಸಿದ್ದು, ತಿಹಾರ್ ಜೈಲಿಗೆ ಕಳಿಸಲಾಗಿದೆ. ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಪ್ರಕರಣ ಸಂಬಂಧ ಒಬೆರಾಯ್ ಹೊಟೆಲ್ನ ಸಿಬ್ಬಂದಿಗಳನ್ನು ವಿಚಾರಣೆಗೊಳಪಡಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ನೀಡುವಂತೆ ಪೊಲೀಸರು ಸೂಚಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಹೊಟೆಲ್ನ ಆಡಳಿತ ಮಂಡಳಿ, ನರ್ಸ್ ಮೇಲೆ ಅತ್ಯಾಚಾರವೆಸಗಿದವರು ತಮ್ಮ ಸಿಬ್ಬಂದಿಗಳಲ್ಲವೇ ಅಲ್ಲ ಎಂದು ಹೇಳಿದೆ. ಆದರೆ ವಿಚಾರಣೆಗೆ ಸಂಬಂಧಿಸಿದ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದೆ. ಪ್ರಸ್ತುತ ಈ ಇಬ್ಬರು ದುಷ್ಕರ್ಮಿಗಳನ್ನು ನ್ಯಾಯಾಲಯ 14ದಿನಗಳ ಕಾಲ ನ್ಯಾಯಾಂಗ ವಶಕ್ಕೆ ನೀಡಿದೆ.












Click it and Unblock the Notifications