ಪ್ರತಿಭಟನೆಗೆ ಹೋಗುವ ರೈತರಿಗೆ ಉಚಿತ ಡೀಸೆಲ್!
ನವದೆಹಲಿ, ಡಿಸೆಂಬರ್ 09 : ಕೃಷಿ ನೀತಿಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ಮುಂದುವರೆದಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರೈತರ ನಡುವೆ ಮಂಗಳವಾರ ನಡೆದ ಮಾತುಕತೆ ವಿಫಲವಾಗಿದೆ. ರೈತರ ಪ್ರತಿಭಟನೆ 14ನೇ ದಿನಕ್ಕೆ ಕಾಲಿಟ್ಟಿದೆ.
ಬುಧವಾರ ಪಂಜಾಬ್ನಿಂದ ಮತ್ತಷ್ಟು ರೈತರು ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದಾರೆ. ಶಿರೋಮಣಿ ಅಕಾಲಿ ದಳದ ಕಾರ್ಯಕರ್ತರು ದೆಹಲಿ-ಅಮೃತಸರ ಗಡಿಯಲ್ಲಿ ರೈತರ ವಾಹನಗಳಿಗೆ ಉಚಿತವಾಗಿ ಡೀಸೆಲ್ ಹಾಕುತ್ತಿದ್ದಾರೆ.
ದೆಹಲಿಯಲ್ಲಿ ನಡೆಯುವ ಪ್ರತಿಭಟನೆಗೆ ರೈತರು ಟ್ರಾಕ್ಟರ್, ಕಾರು ಮುಂತಾದ ವಾಹನಗಳಲ್ಲಿ ಹೋಗುತ್ತಿದ್ದಾರೆ. ಹೀಗೆ ಹೋಗುವ ರೈತರ ವಾಹನಗಳಿಗೆ ಉಚಿತವಾಗಿ ಡೀಸೆಲ್ ಹಾಕಲಾಗುತ್ತಿದೆ. ಇಂದು ಸಾವಿರಾರು ರೈತರು ಹೊಸದಾಗಿ ಪ್ರತಿಭಟನೆಗೆ ಕೈ ಜೋಡಿಸಲಿದ್ದಾರೆ.

ಶಿರೋಮಣಿ ಅಕಾಲಿ ದಳದ ಕಾರ್ಯಕರ್ತ ಗುರುಶರಣ್ ಸಿಂಗ್ ಈ ಕುರಿತು ಮಾತನಾಡಿದ್ದಾರೆ. "ಪ್ರತಿಭಟನೆಯಲ್ಲಿ ಇನ್ನೂ ಹೆಚ್ಚಿನ ರೈತರು ಪಾಲ್ಗೊಳ್ಳಲು ಪ್ರೇರೆಪಣೆ ನೀಡಲು ಇದನ್ನು ಆರಂಭಿಸಿದ್ದೇವೆ. ಸ್ಥಳೀಯ ಯುವಕರು, ಎನ್ಆರ್ಐ ಸ್ನೇಹಿತರ ಸಹಾಯದಿಂದ ಉಚಿತವಾಗಿ ಡೀಸೆಲ್ ಹಾಕಲಾಗುತ್ತಿದೆ" ಎಂದರು.
ಮಂಗಳವಾರ ರೈತರು ಭಾರತ್ ಬಂದ್ಗೆ ಕರೆ ನೀಡಿದ್ದರು. ಸಂಜೆ 7 ಗಂಟೆಗೆ ರೈತರನ್ನು ಮಾತುಕತೆಗಾಗಿ ಗೃಹ ಸಚಿವ ಅಮಿತ್ ಶಾ ಆಹ್ವಾನಿಸಿದ್ದರು. ಎರಡೂ ಕಡೆಗಳಿಂದಲೂ ಸೂಕ್ತ ಪ್ರತಿಕ್ರಿಯೆ ಸಿಗದ ಕಾರಣ ಮಾತುಕತೆ ವಿಫಲವಾಗಿದೆ. ಇದುವರೆಗೂ 6 ಬಾರಿ ರೈತರ ಜೊತೆ ಕೇಂದ್ರ ಸರ್ಕಾರ ಮಾತಕತೆ ನಡೆಸಿದೆ.

ಕೃಷಿ ನೀತಿಗಳಲ್ಲಿ ಯಾವ-ಯಾವ ಬದಲಾವಣೆ ಮಾಡಲಾಗುತ್ತದೆ ಎಂದು ರೈತರಿಗೆ ಸಭೆಯಲ್ಲಿ ಪವರ್ ಪಾಯಿಂಟ್ ಮೂಲಕ ವಿವರಣೆ ನೀಡಲಾಯಿತು. ಆದರೆ, ರೈತರು ತಿದ್ದುಪಡಿಗೆ ಒಪ್ಪಿಗೆ ನೀಡಲಿಲ್ಲ. ಕೃಷಿ ನೀತಿ ಸಂಪೂರ್ಣ ರದ್ದಾಗಬೇಕು ಎಂಬ ತಮ್ಮ ನಿಲುವಿಗೆ ಅವರು ಬದ್ಧರಾಗಿದ್ದಾರೆ.
ಶನಿವಾರ ರೈತರ ಜೊತೆ ಕೇಂದ್ರ ಕೃಷಿ ಸಚಿವರು ಸಭೆ ನಡೆಸಿದ್ದರು. ಸಭೆಯಲ್ಲಿ ರೈತರು ಕೃಷಿ ನೀತಿಗಳನ್ನು ರದ್ದುಗೊಳಿಸುತ್ತೀರೋ?, ಇಲ್ಲವೋ? ಎಂಬ ಬೋರ್ಡ್ಗಳನ್ನು ಹಿಡಿದು ಕುಳಿತರು. ಆದ್ದರಿಂದ, ಸಭೆ ವಿಫವಾಗಿತ್ತು.
ಡಿಸೆಂಬರ್ 9ರಂದು ಮತ್ತೊಮ್ಮೆ ಸಭೆ ನಡೆಸುವುದಾಗಿ ಕೃಷಿ ಸಚಿವರು ಹೇಳಿದ್ದರು. ಆದರೆ, ಅಮಿತ್ ಶಾ ಜೊತೆ ಮಂಗಳವಾರ ರೈತರು ಸಭೆ ನಡೆಸಿದ್ದರಿಂದ, ಬುಧವಾರ ಸಂಜೆ ಸಭೆ ನಡೆಯಲಿದಯೇ? ಎಂಬುದು ಇನ್ನೂ ಖಚಿತವಾಗಿಲ್ಲ.












Click it and Unblock the Notifications