ಬೆಂಗಳೂರಿಗರು ಕುಡಿಯುವ ನೀರಿಗೆ ಭಿಕ್ಷೆ ಬೇಡಬೇಕೇ: ರಾಜ್ಯಸಭೆಯಲ್ಲಿ ದೇವೇಗೌಡರ ಪ್ರಶ್ನೆ!
ನವದೆಹಲಿ, ಏಪ್ರಿಲ್ 5: ಬೆಂಗಳೂರಿನ ಜನರು ಕುಡಿಯುವ ನೀರಿಗೂ ಭಿಕ್ಷೆ ಬೇಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಾಜಿ ಪ್ರಧಾನಮಂತ್ರಿ ಹೆಡ್ ಡಿ ದೇವೇಗೌಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯಸಭೆಯಲ್ಲಿ ಸಿಲಿಕಾನ್ ಸಿಟಿಯ ಜನರು ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆ ಕುರಿತು ಅವರು ಪ್ರಸ್ತಾಪಿಸಿದರು. ಈ ದಿನ ನಾವು ಕೇವಲ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮಾತ್ರ ಮಾತನಾಡುತ್ತೇನೆ ಎನ್ನುತ್ತಲೇ ಅವರು ಮಾತು ಆರಂಭಿಸಿದರು.
ಮೇಕೆದಾಟು; ತಮಿಳುನಾಡು ವಿರುದ್ಧ ಸರ್ವಾನುಮತದ ಖಂಡನಾ ನಿರ್ಣಯ
ಇವತ್ತು ಬೆಂಗಳೂರು ನಗರದಲ್ಲಿ ಸುಮಾರು 1 ಕೋಟಿ 30 ಲಕ್ಷ ಜನ ವಾಸಿಸುತ್ತಿದ್ದಾರೆ. ಪ್ರಸ್ತುತ ನಮ್ಮ ಪಾಲಿಗೆ ಸಿಗುತ್ತಿರುವ ನೀರಿನಿಂದ ಜನರ ದಾಹ ನೀಗಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ನಮ್ಮ ದುರದೃಷ್ಟವಶಾತ್ ಟ್ರಿಬ್ಯೂನಲ್ ನಿಂದ ಕೂಡ ನಮಗೆ ಸಂಪೂರ್ಣ ನ್ಯಾಯ ದೊರಕಿಲ್ಲ. ಟ್ರಿಬ್ಯೂನಲ್ ಕೊಟ್ಟಿರುವ ತೀರ್ಪನ್ನೇ ಸುಪ್ರೀಂಕೋರ್ಟ್ ಕೂಡ ಎತ್ತಿ ಹಿಡಿದಿದೆ. ಟ್ರಿಬ್ಯುನಲ್ ತೀರ್ಮಾನದಂತೆ 4.75 ಟಿಎಂಸಿ ನೀರನ್ನು ಮಾತ್ರ ನೀಡಲಾಗುತ್ತಿದೆ ಎಂದು ಹೆಚ್ ಡಿ ದೇವೇಗೌಡರು ಉಲ್ಲೇಖಿಸಿದರು.
200 ವರ್ಷಗಳ ನೀರು ಹಂಚಿಕೆ ಬಗ್ಗೆ ಮಾಹಿತಿ ಇದೆ:
"ನನಗೆ ಸುಮಾರು 200 ವರ್ಷಗಳಿಂದ ನೀರಿನ ಹಂಚಿಕೆ ವಿಷಯದಲ್ಲಿ ಏನಾಗಿದೆ ಎಂಬುದು ನನಗೆ ಸಂಪೂರ್ಣವಾಗಿ ಗೊತ್ತಿದೆ. ಬೇಕಾದರೆ ಈ ಎಲ್ಲಾ ವಿಚಾರವನ್ನು ಸದನದಲ್ಲಿ ಕೂಲಂಕುಷವಾಗಿ ಪ್ರಸ್ತಾಪಿಸಬಲ್ಲೆ. ಆದರೆ ನಾನು ಯಾವುದೇ ಅಣೆಕಟ್ಟು ನಿರ್ಮಾಣದ ಬಗ್ಗೆಯೂ ಮಾತನಾಡುವುದಿಲ್ಲ. ಜೊತೆಗೆ ಇದಕ್ಕೆ ಸಂಬಂಧ ಪಟ್ಟ ವಿಚಾರವನ್ನು ಕೂಡ ಮಾತನಾಡುವುದಿಲ್ಲ. ನನಗೆ ಅದಲ್ಲೆರ ಬಗ್ಗೆ ಮಾಹಿತಿಯಿದೆ," ಎಂದರು.
ನೀರಿನ ಹಂಚಿಕೆಯ ಬಗ್ಗೆ ಕೂಡ ಸಂಪೂರ್ಣವಾಗಿ ನನಗೆ ತಿಳಿದಿದೆ. ಆ ವಿಚಾರವನ್ನು ಈ ದಿನ ನಾನು ಪ್ರಸ್ತಾಪಿಸುವುದಿಲ್ಲ. ನಮಗೆ ಬೇಕಾಗಿರುವುದು ಒಂದೇ ಬೆಂಗಳೂರು ನಗರಕ್ಕೆ ಕುಡಿಯುವ ನೀರು ಎಂದು ಹೇಳಿದರು.
ರಾಜ್ಯದ ನೀರಿನ ಸಮಸ್ಯೆ ಬಗ್ಗೆ ಸದ್ಯ ಮಾತನಾಡುವುದಿಲ್ಲ:
ನಮ್ಮ ರಾಜ್ಯದಲ್ಲಿ ನೀರಿನ ಸಮಸ್ಯೆ ಅತಿ ಹೆಚ್ಚಾಗಿದೆ, ಆದರೆ ನಾನು ಅದನ್ನು ಈಗ ಪ್ರಸ್ತಾಪಿಸಲು ಹೋಗುವುದಿಲ್ಲ. ನನ್ನ ಕೋರಿಕೆ ಒಂದೇ ಬೆಂಗಳೂರು ನಗರಕ್ಕೆ ಕುಡಿಯಲು ನೀರು ಕೊಡಿ ಅಷ್ಟೇ ಸಾಕು ಎಂದರು. ನಮ್ಮ ದುರದೃಷ್ಟ ನೋಡಿ, ಕುಡಿಯುವ ನೀರಿಗೂ ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ. ಬಹಳ ನೋವಿನಿಂದ ಈ ಮಾತನ್ನು ಹೇಳುತ್ತಿದ್ದೀನಿ ಎಂದು ದೇವೇಗೌಡರು ಉಲ್ಲೇಖಿಸಿದರು.
ಪಕ್ಷಬೇಧ ಮರೆತು ನೀರಿನ ಸಮಸ್ಯೆ ನೀಗಿಸಲು ಒತ್ತಾಯ:
ಕರ್ನಾಟಕ ಸೇರಿದಂತೆ ಇತರ 3 ರಾಜ್ಯಗಳಿಗೆ ಕೇಂದ್ರ ಸರ್ಕಾರವೇ ಒಂದು ತಂಡವನ್ನು ಕಳಿಹಿಸಲಿ. ಆ ಮೂಲಕ ವರದಿಯನ್ನು ತರಿಸಿಕೊಳ್ಳಲಿ ಗೌರವಾನ್ವಿತರಾದ ನಿಮಗೂ ಕೂಡ ಮಾಹಿತಿ ನೀಡಲಿ. ಇಂದು ನಾವು ಬೆಂಗಳೂರಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದೇವೆ. ದಯಮಾಡಿ ನಾವೆಲ್ಲ ಪಕ್ಷಭೇದ ಮರೆತು ಈ ಸಮಸ್ಯೆ ನಿವಾರಿಸಬೇಕಿದೆ ಎಂದು ಮಾಜಿ ಪ್ರಧಾನಮಂತ್ರಿ ಹೆಚ್ ಡಿ ದೇವೇಗೌಡ ಹೇಳಿದರು.