ಪಾಕ್ ದುರಹಂಕಾರಕ್ಕೆ ತಕ್ಕ ಶಾಸ್ತಿ, FATF ನಿಂದ ಕಪ್ಪುಪಟ್ಟಿಯ ಶಿಕ್ಷೆ!
ಇಸ್ಲಾಮಾಬಾದ್, ಆಗಸ್ಟ್ 22: ಭಯೋತ್ಪಾದನೆಯನ್ನು ಹತ್ತಿಕ್ಕಿ ಎಂಬ ವಿಶ್ವದ ಎಚ್ಚರಿಕೆಯ ನಡುವೆಯೂ ದುರಹಂಕಾರ ಮೆರೆಯುತ್ತಿದ್ದ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿಯಾಗಿದೆ. ಗ್ಲೋಬಲ್ ಫೈನಾನ್ಶಿಯಲ್ ವಾಚ್ ಡಾಗ್ FATF(Financial Action Task Force)ನ ಏಷ್ಯಾ-ಪೆಸಿಫಿಕ್ ವಿಭಾಗವು ಜಾಗತಿಕ ಗುಣಮಟ್ಟವನ್ನು ಕಾಪಾಡಿಕೊಳ್ಳುವಲ್ಲಿ ಅಸಮರ್ಥವಾದ ಪಾಕಿಸ್ತಾನವನ್ನು ಕಪ್ಪುಪಟ್ಟಿಯಲ್ಲಿಡಲು ನಿರ್ಧರಿಸಿದೆ.
ಭಯೋತ್ಪಾದನೆಯ ವಿರುದ್ಧ ಇದುವರೆಗೂ ಪಾಕಿಸ್ತಾನ ಯಾವುದೇ ಕ್ರಮ ಕೈಗೊಳ್ಳದ ಕಾರಣ ಅದರ ಕಪ್ಪುಪಟ್ಟಿಯ ಅವಧಿಯನ್ನು FATF ಮುಂದುವರಿಸಿದೆ.
ಭಯೋತ್ಪಾದನೆಯನ್ನು ನಿಯಂತ್ರಿಸುವಂತೆ ಮತ್ತು ಭಯೋತ್ಪಾದಕ ಸಂಘಟನೆಗಳಿಗೆ ನೆರವು ನೀಡುವುದನ್ನು ನಿಲ್ಲಿಸುವಂತೆ ಜಾಗತಿಕ ಮಟ್ಟದಲ್ಲಿ ಸೃಷ್ಟಿಯಾದ ಒತ್ತಡಕ್ಕೂ ಮಣಿಯದ ಪಾಕಿಸ್ತಾನದ ದುರಹಂಕಾರಕ್ಕೆ ಈ ಮೂಲಕ ತಕ್ಕ ಶಾಸ್ತಿಯಾದಂತಾಗಿದೆ.
ಜಾಗತಿಕ ಗುಣಮಟ್ಟವನ್ನು ತಲುಪಲು ಇರುವ ಸುಮಾರು 40 ಮಾನದಂಡಗಳಲ್ಲಿ ಪಾಕಿಸ್ತಾನ 32 ರಲ್ಲಿ ಯಾವುದೇ ನಿರ್ವಹಣೆ ತೋರದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ. ಅದರಲ್ಲಿ ಪ್ರಮುಖವಾಗಿರುವುದು, "ಅಕ್ರಮ ಹಣಕಾಸು ಸಂಗ್ರಹ ಮತ್ತು ಭಯೋತ್ಪಾದನೆಗೆ ನೆರವು ನೀಡುತ್ತಿರುವುದು"!

ಅಕ್ಟೋಬರ್ ವರೆಗೆ ಗಡುವು
ಅಕ್ಟೋಬರ್ ಒಳಗೆ ಪಾಕಿಸ್ತಾನ ಭಯೋತ್ಪಾದನೆಯನ್ನು ಹತ್ತಿಕ್ಕುವತ್ತ ಕಠಿಣ ಕ್ರಮ ಕೈಗೊಳ್ಳದೆ ಇದ್ದಲ್ಲಿ ಭಾರೀ ಪರಿಣಾಮ ಎದುರಿಸಬೇಕಾದೀತು ಎಂದು ಎಫ್ ಎಟಿಎಫ್ ಹೇಳಿದೆ. ಈ ಕಪ್ಪುಪಟ್ಟಿಯನ್ನು ಕಳಚಿಕೊಳ್ಳಲು ಪಾಕಿಸ್ತಾನಕ್ಕೆ ಅಕ್ಟೋಬರ್ ವರೆಗೆ ಸಮಯ ನೀಡಲಾಗಿದ್ದು, ಉಗ್ರವಾದವನ್ನು ಹತ್ತಿಕ್ಕುವಲ್ಲಿ ಅದು ಕಠಿಣ ಕ್ರಮ ಕೈಗೊಂಡಿದ್ದೇ ಆದರೆ ಅದು ಈ 'ಕಪ್ಪುಪಟ್ಟಿಯ ಕುಖ್ಯಾತಿ'ಯಿಂದ ಹೊರಬರಲಿದೆ.

ಮೊದಲೇ ಖಡಕ್ ಎಚ್ಚರಿಕೆ ನೀಡಿದ್ದ FATF
ಕಳೆದ ಜೂನ್ ನಲ್ಲೇ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದ FATF ನ ಏಷ್ಯಾ ಪೆಸಿಫಿಕ್ ವಿಭಾಗ, "ವಿಶ್ವಸಂಸ್ಥೆಯೇ ಜಾಗತಿಕ ಉಗ್ರ ಎಂದು ಘೋಷಿಸಿದವರನ್ನೂ ಪಾಕಿಸ್ತಾನ ಸಾಕಿಟ್ಟಿದೆ. ಭಯೋತ್ಪಾದನೆಯನ್ನು ಹತ್ತಿಕ್ಕುತ್ತೇನೆ ಎಂಬುದು ಕೇವಲ ಪಾಕಿಸ್ತಾನದ ಬಾಯಿಮಾತಾಗಿದೆ" ಎಂದು ದೂರಿತ್ತು. ಕಳೆದ ಮೇ ತಿಂಗಳಲ್ಲಿ ಪಾಕ್ ಮೂಲದ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಸಂಸ್ಥಾಪಕ ಮಸೂದ್ ಅಝರ್ ನನ್ನು ವಿಶ್ವಸಂಸ್ಥೆಯು ಜಾಗತಿಕ ಉಗ್ರ ಎಂದು ಘೋಷಿಸಿತ್ತು. ಈತನಿಗೆ ಪಾಕಿಸ್ತಾನನೇ ಆಶ್ರಯ ನೀಡಿರುವುದಕ್ಕೆ ಸಾಕ್ಷ್ಯಗಳಿದ್ದರೂ ಪಾಕಿಸ್ತಾನ ಆತನ ವಿರುದ್ಧ ಯಾವ ಕ್ರಮವನ್ನೂ ಕೈಗೊಂಡಿಲ್ಲ.

ಪುಲ್ವಾಮಾ ದಾಳಿ ನಂತರ ಜಗತ್ತಿನ ಕೆಂಗಣ್ಣಿಗೆ ಗುರಿಯಾದ ಪಾಕ್
ಫೆಬ್ರವರಿಯಲ್ಲಿ ಭಾರತದ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ನಲವತ್ತಕ್ಕೂ ಹೆಚ್ಚು ಭಾರತೀಯ ಯೋಧರನ್ನು ಕೊಲ್ಲಲಾಗಿತ್ತು. ಈ ದಾಳಿಯ ಹೊಣೆಯನ್ನು ಪಾಕ್ ಮೂಲದ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆ ಹೊತ್ತುಕೊಂಡಿತ್ತು. ಈ ಘಟನೆಯ ನಂತರ ಪಾಕಿಸ್ತಾನ ಇಡೀ ವಿಶ್ವದ ಕಣ್ಣಲ್ಲಿ ಕುಖ್ಯಾತಿ ಪಡೆದಿತ್ತು. ಭಾರತ ನಂತರ ಪಾಕಿಸ್ತಾನದ ಉಗ್ರರ ಅಡಗುತಾಣವಾದ ಬಾಲಕೋಟ್ ಮೇಲೆ ಏರ್ ಸ್ಟ್ರೈಕ್ ನಡೆಸಿತ್ತು.

ಈಗಲೂ ಕಾಶ್ಮೀರದ ಚಿಂತೆ!
ಈ ಎಲ್ಲಾ ಬೆಳವಣಿಗೆಯ ನಂತರ ಭಾರತ ಮತ್ತು ಪಾಕಿಸ್ತಾನದ ಸಂಬಂಧ ಹದಗೆಟ್ಟಿತ್ತು. ಇಷ್ಟಾದರೂ ತನ್ನ ನೆಲದಲ್ಲಿರುವ ಉಗ್ರರನ್ನು ಹತ್ತಿಕ್ಕುವ ಬಗ್ಗೆ ಯೋಚಿಸುವುದನ್ನು ಬಿಟ್ಟು, ಈಗಲೂ ಪಾಕಿಸ್ತಾನ ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370 ನೇ ವಿಧಿಯ ಅಡಿಯಲ್ಲಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ಭಾರತ ಸರ್ಕಾರದ ಕ್ರಮದ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದೆ. ಭಾರತದ ವಿರುದ್ಧ ವಿಶ್ವಸಂಸ್ಥೆ ಮತ್ತು ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆಹೋಗಿದೆ. ಆದರೆ ಅಕ್ಟೋಬರ್ ಒಳಗೆ ಕಪ್ಪುಪಟ್ಟಿಯ ಕುಖ್ಯಾತಿಯಿಂದ ಹೊರಬರುವ ಪ್ರಯತ್ನವನ್ನು ಪಾಕಿಸ್ತಾನ ಮಾಡದೆ ಇದ್ದಲ್ಲಿ ಮತ್ತು ಮೋಸ್ಟ್ ವಾಂಟೆಡ್ ಉಗ್ರರಾದ ಹಫೀಜ್ ಸಯ್ಯದ್, ಮಸೂದ್ ಅಝರ್ ರಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೇ ಇದ್ದಲ್ಲಿ, ಇಡೀ ವಿಶ್ವದ ನಿಷ್ಠುರವನ್ನೂ ಪಾಕಿಸ್ತಾನ ಕಟ್ಟಿಕೊಳ್ಳಬೇಕಾಗುತ್ತದೆ ಎಂಬುದಂತೂ ಸತ್ಯ!

FATF ಬಗ್ಗೆ ಒಂದಷ್ಟು....
ಹಣಕಾಸು ಕ್ರಿಯಾ ಕಾರ್ಯಪಡೆ (FATF ) ಎಂದು ಕರೆಯಲ್ಪಡುವ ಈ ಸಂಸ್ಥೆ ಉಗ್ರವಾದಿ ಚಟುವಟಿಕೆಗಳಿಗೆ ರಾಷ್ಟ್ರಗಳು ಅಕ್ರಮವಾಗಿ ಹಣ ರವಾನಿಸುವ ಜಾಲದ ಮೇಲೆ ಕಣ್ಣಿಟ್ಟಿರುತ್ತವೆ.
ಎಚ್ಚರಿಕೆ ನಿಡಿದ ಬಳಿಕವೂ ಭಯೋತ್ಪಾದನಾ ಕೃತ್ಯಗಳಿಗೆ ವರ್ಗಾಯಿಸಲಾಗುವ ಹಣಕಾಸು ನೆರವನ್ನು ನಿಲ್ಲಿಸದ ರಾಷ್ಟರಗಳನ್ನು FATF ಕಪ್ಪುಪಟ್ಟಿಗೆ ಸೇರ್ಪಡೆ ಮಾಡುತ್ತದೆ. ಕಪ್ಪು ಪಟ್ಟಿಗೆ ಸೇರ್ಪಡೆಯಾಗುವ ರಾಷ್ಟಕ್ಕೆ ನೀಡಲಾಗುವ ಹಣಕಾಸು ನೆರವನ್ನು ಸಂಪೂರ್ಣವಾಗಿ ನಿಲ್ಲಿಸಲಾಗುತ್ತದೆ. ಇದರಿಂದ ರಾಷ್ಟ್ರದ ವ್ಯವಹಾರ, ಶಿಕ್ಷಣ ಹಾಗೂ ಆರ್ಥಿಕ ವ್ಯವಸ್ಥೆ ಸಂಪೂರ್ಣ ಹದಗೆಡುತ್ತದೆ. ಇಂತಹ ಒತ್ತಡ ಆರಂಭವಾದಾಗ ಕಪ್ಪುಪಟ್ಟಿಗೆ ಸೇರ್ಪಡೆಗೊಂಡ ರಾಷ್ಟ್ರ ಅನಿವಾರ್ಯವಾಗಿ ಭಯೋತ್ಪಾದನಾ ಚಟುವಟಿಕೆಗಳನ್ನು ಹತ್ತಿಕ್ಕಲೇಬೇಕಾಗುತ್ತದೆ.












Click it and Unblock the Notifications