ರೈತರ ಪ್ರತಿಭಟನೆ ಕೊನೆಯಾಗಲೇಬೇಕು; ಕೇಂದ್ರ ಸರ್ಕಾರ
ನವದೆಹಲಿ, ಅಕ್ಟೋಬರ್ 05: ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದಂಥ ಅಹಿತಕರ ಘಟನೆ ಮರುಕಳಿಸದಂತೆ ತಡೆಯಲು ಕೃಷಿ ಕಾಯ್ದೆಗಳ ವಿರುದ್ಧ ರೈತರು ಕೈಗೊಂಡಿರುವ ಪ್ರತಿಭಟನೆಯನ್ನು ಕೊನೆಗೊಳಿಸಲೇಬೇಕಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್ನಲ್ಲಿ ತಿಳಿಸಿದೆ.
ಕೃಷಿ ಕಾಯ್ದೆಗಳ ಸಾಂವಿಧಾನಿಕತೆ ನ್ಯಾಯಾಲಯದ ಮುಂದೆ ಬಾಕಿ ಇರುವಾಗ ರೈತರು ಪ್ರತಿಭಟನೆ ಮುಂದುವರೆಸುತ್ತಿರುವ ಕುರಿತು ನ್ಯಾಯಾಲಯ ಪ್ರಸ್ತಾಪ ಮಾಡಿದೆ.
ಕೇಂದ್ರ ಸರ್ಕಾರ ಪರಿಚಯಿಸಿದ್ದ ಮೂರು ನೂತನ ಕೃಷಿ ಕಾಯ್ದೆಗಳಿಗೆ ಸುಪ್ರೀಂ ಕೋರ್ಟ್ ಜನವರಿ 2, 2021ರಂದು ತಡೆ ನೀಡಿತ್ತು. ಆದರೆ ರೈತರು ಈ ಕಾಯ್ದೆಗಳ ರದ್ದತಿಗೆ ಪಟ್ಟುಹಿಡಿದಿದ್ದು, ಪ್ರತಿಭಟನೆ ಮುಂದುವರೆಸಿದ್ದರು. ರೈತರು ಬಯಸಿದರೆ ಪ್ರತಿಭಟನೆ ನಡೆಸಬಹುದು. ಅಧಿಕಾರಿಗಳು ಅವರ ಪ್ರತಿಭಟನೆಯಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಉನ್ನತ ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿತ್ತು.

ಅಂದಿನಿಂದಲೂ ರೈತರ ಪ್ರತಿಭಟನೆ ಮುಂದುವರೆದಿದೆ. ಆದರೆ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಭಾನುವಾರ ನಡೆದ ಘಟನೆಯಿಂದ ಮತ್ತೆ ರೈತರ ಪ್ರತಿಭಟನೆ ವಿಷಯ ಮುನ್ನೆಲೆಗೆ ಬಂದಿದೆ.
ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರ ಮೂಲಕ ಕೇಂದ್ರ ಸರ್ಕಾರ ನ್ಯಾಯಾಲಯದಲ್ಲಿ ಈ ಘಟನೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಘಟನೆಯನ್ನು ದುರದೃಷ್ಟ ಎಂದು ಕರೆದಿದ್ದು, 'ಪ್ರತಿಭಟನೆ ಮುಂದುವರೆಯಲು ಬಿಡಬಾರದು. ರೈತರ ಪ್ರತಿಭಟನೆ ಕೊನೆಗೊಳ್ಳಲೇಬೇಕು' ಎಂದು ಹೇಳಿದೆ.
ಇಂಥ ದುರ್ಘಟನೆಗಳು ನಡೆಯಬಾರದು. ಇದಕ್ಕಾಗಿ ಪ್ರತಿಭಟನೆ ನಿಲ್ಲಿಸಬೇಕು ಎಂದು ಹೇಳಿದೆ. ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ನೇತೃತ್ವದ ನ್ಯಾಯಪೀಠ ಪ್ರತಿಭಟನೆ ಕುರಿತು ಪ್ರತಿಕ್ರಿಯೆ ನೀಡಿದೆ.

'ಇಂಥ ಘಟನೆಗಳು ಸಂಭವಿಸಿದಾಗ ಯಾರೂ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ. ರೈತರು ಏಕೆ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ತಿಳಿಸಬೇಕು. ಇದರಲ್ಲಿ ಜಾರಿಗೆ ತರಲು ಏನೂ ಇಲ್ಲ. ರೈತರು ಯಾಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ? ನ್ಯಾಯಾಲಯದ ಹೊರತಾಗಿ ಬೇರೆ ಯಾರೂ ಕೃಷಿ ಕಾಯ್ದೆಗಳ ಸಿಂಧುತ್ವದ ಕುರಿತು ನಿರ್ಧರಿಸಲಾರರು. ಪ್ರಕರಣ ನ್ಯಾಯಾಲಯದಲ್ಲಿರುವಾಗಿ ಪ್ರತಿಭಟನೆ ಏಕೆ ಕೈಗೊಳ್ಳಬೇಕು? ಈ ಪ್ರತಿಭಟನೆಗೆ ಏಕೆ ಅವಕಾಶ ನೀಡಬೇಕು? ಪ್ರತಿಭಟನೆಗಳು ಎಲ್ಲಿಯವರೆಗೆ ನಡೆಯುತ್ತವೆ' ಎಂದು ಪೀಠ ಪ್ರಶ್ನಿಸಿದೆ.
ಏನಿದು ಲಖಿಂಪುರ ಹಿಂಸಾಚಾರ?:
ಉತ್ತರ ಪ್ರದೇಶ ಸಚಿವ ಅಜಯ್ ಮಿಶ್ರಾ ತೆನಿ ಈಚೆಗೆ ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಕುರಿತು ಕಟುವಾದ ಹೇಳಿಕೆ ನೀಡಿದ್ದಲ್ಲದೆ ಪ್ರತಿಭಟಿಸುವವರ ಮೇಲೆ ಕ್ರಮ ಕೈಗೊಳ್ಳುವ ಬಹಿರಂಗ ಬೆದರಿಕೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಅವರ ತವರು ಕ್ಷೇತ್ರ ಲಖಿಂಪುರ ಖೇರಿಯಲ್ಲಿ ಸೇರಿದ್ದ ರೈತರು ಸಚಿವರ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದರು. ಇದೇ ಸಂದರ್ಭ ರಸ್ತಾ ರೋಖೋ ನಡೆಸುತ್ತಿದ್ದ ರೈತರ ಮೇಲೆ ಬೆಂಗಾವಲು ವಾಹನ ಹರಿಸಲಾಗಿತ್ತು.
ಈ ಘಟನೆ ಸಂದರ್ಭ ಕಾರಿನಲ್ಲಿ ಕೇಂದ್ರ ರಾಜ್ಯ ಸಚಿವ ಅಜಯ್ ಮಿಶ್ರಾ ಪುತ್ರ ಇದ್ದರು ಎಂಬ ಆರೋಪ ಕೇಳಿಬಂದಿದೆ. ಈ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ ಒಟ್ಟು ಎಂಟು ಮಂದಿ ಸಾವನ್ನಪ್ಪಿದ್ದಾರೆ. ವಿರೋಧ ಪಕ್ಷಗಳು, ವಿವಿಧ ರೈತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಕಳೆದ ವರ್ಷದಿಂದ ನಡೆಯುತ್ತಿರುವ ಪ್ರತಿಭಟನೆ:
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ರೈತರು ನವೆಂಬರ್ 26ರಿಂದಲೂ ಪ್ರತಿಭಟನೆ ನಡೆಸುತ್ತಿದ್ದಾರೆ. ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ಹೋರಾಟ ಮುಂದುವರೆಸಿರುವ ರೈತರಿಗೆ ದೇಶಾದ್ಯಂತ ಬೆಂಬಲ ವ್ಯಕ್ತವಾಗಿತ್ತು. ಹಲವು ಬಾರಿ ಮಾತುಕತೆಗಳು ನಡೆದಿದ್ದು, ಯಾವುದೇ ಒಪ್ಪಂದಕ್ಕೆ ಬರಲಾಗಿಲ್ಲ. ಜೊತೆಗೆ ಗಣರಾಜ್ಯೋತ್ಸವ ದಿನದಂದು ರೈತರ ಟ್ರ್ಯಾಕ್ಟರ್ ಜಾಥಾ ಸಂದರ್ಭ ದೊಡ್ಡ ಮಟ್ಟದಲ್ಲಿ ಗಲಭೆ ಏರ್ಪಟ್ಟಿತ್ತು.












Click it and Unblock the Notifications