ಮೋದಿ, ಶಾ ವಿರುದ್ಧ ಕ್ರಮ ಜರುಗಿಸದ ಆಯೋಗದ ವಿರುದ್ಧ ಸುಪ್ರೀಂಗೆ ದೂರು
ನವದೆಹಲಿ, ಏಪ್ರಿಲ್ 29 : ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ್ದರೂ ಕ್ರಮ ತೆಗೆದುಕೊಳ್ಳಲು ಚುನಾವಣಾ ಆಯೋಗ ವಿಫಲರಾಗಿದ್ದರ ವಿರುದ್ಧ ಸುಪ್ರೀಂ ಕೋರ್ಟಿಗೆ ಕಾಂಗ್ರೆಸ್ ಅರ್ಜಿ ಸಲ್ಲಿಸಿದೆ.
ಮೂರು ವಾರಗಳಿಂದ ಚುನಾವಣಾ ಆಯೋಗಕ್ಕೆ ನರೇಂದ್ರ ಮೋದಿ ಮತ್ತು ಅಮಿತ್ ಶಾ ವಿರುದ್ಧ ದೂರು ನೀಡಿದ್ದರೂ ಆಯೋಗ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕಳೆದ 24 ಗಂಟೆಗಳಲ್ಲಿ ನೀಡಲಾದ ದೂರುಗಳನ್ನು ಪರಿಶೀಲಿಸಬೇಕೆಂದು ಕಾಂಗ್ರೆಸ್ ಸಂಸದೆ ಸುಶ್ಮಿತಾ ದೇವ್ ಅವರು ಮನವಿ ಮಾಡಿಕೊಂಡಿದ್ದಾರೆ.
ಮೋದಿ ಮತ್ತು ಶಾ ಇಬ್ಬರೂ ಚುನಾವಣಾ ಸಮಾವೇಶಗಳಲ್ಲಿ ದ್ವೇಷ ತುಂಬುವ ಭಾಷಣ ಮಾಡಿದ್ದಾರೆ, ಸಮಾಜವನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿದ್ದಾರೆ ಮತ್ತು ಭಾಷಣಗಳಲ್ಲಿ ಸೇನೆಯ ಸಾಧನೆಯನ್ನು ತಮ್ಮ ರಾಜಕೀಯ ಪ್ರಚಾರ ಗಿಟ್ಟಿಸಲು ಬಳಸಿಕೊಂಡಿದ್ದಾರೆ ಎಂದು ಸುಶ್ಮಿತಾ ದೇವ್ ಅವರು ಆರೋಪಿಸಿದ್ದಾರೆ. ಈ ಕೇಸನ್ನು ಮಂಗಳವಾರ ಆಲಿಸುವುದಾಗಿ ಕೋರ್ಟ್ ತಿಳಿಸಿದೆ.

ಏಪ್ರಿಲ್ 23ರಂದು ಮತದಾನ ಮಾಡಿದ ನಂತರ, ವಾರಣಾಸಿಯಲ್ಲಿ ಬೃಹತ್ ರೋಡ್ ಶೋದಲ್ಲಿ ಪಾಲ್ಗೊಂಡಿದ್ದ ನರೇಂದ್ರ ಮೋದಿಯವರು ನೀತಿ ಸಂಹಿತೆಯನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ ಎಂದು ಅವರು ಅರ್ಜಿಯಲ್ಲಿ ದೂರಿದ್ದಾರೆ. ಮತಹಾಕಿದ ನಂತರ ಮೆರವಣಿಗೆಯಲ್ಲಿ ಹೋಗಿದ್ದಷ್ಟೇ, ಯಾವುದೇ ಭಾಷಣ ಮಾಡಿಲ್ಲ ಎಂಬುದು ಬಿಜೆಪಿಯ ವಾದವಾಗಿದೆ.
ಪುಲ್ವಾಮಾದಲ್ಲಿ ಆತ್ಮಾಹುತಿ ದಾಳಿ ಮತ್ತು ಬಾಲಕೋಟ್ ನಲ್ಲಿ ಉಗ್ರರ ನೆಲೆಗಳನ್ನು ಭಾರತೀಯ ಸೇನೆ ಧ್ವಂಸ ಮಾಡಿದ ಮೇಲೆ ಯಾವುದೇ ಚುನಾವಣಾ ಭಾಷಣಗಳಲ್ಲಿ ಸೇನೆಯನ್ನು ಪ್ರಸ್ತಾಪಿಸಬಾರದು ಎಂದು ಕಳೆದ ತಿಂಗಳು ಕೇಂದ್ರ ಚುನಾವಣಾ ಆಯೋಗ ನಿರ್ದೇಶನ ನೀಡಿತ್ತು. ಆದರೆ, ಈ ನಿರ್ದೇಶನವನ್ನು ಮೋದಿ ಮತ್ತು ಅಮಿತ್ ಶಾ ಅವರು ಗಾಳಿಗೆ ತೂರಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಗುಜರಾತ್ ನಲ್ಲಿ ಭಾಷಣ ಮಾಡುತ್ತಿದ್ದಾಗ, ಮೊದಲು ಭಾರತದಲ್ಲಿ ದಾಳಿ ನಡೆಸಿದ ನಂತರ ಪಾಕ್ ಉಗ್ರರು ತರಚಿದ ಗಾಯ ಕೂಡ ಆಗದೆ ಪಾರಾಗಿ ಬಿಡುತ್ತಿದ್ದರು. ನಾವು ತಿರುಗೇಟು ನೀಡಿದರೆ ಅಣ್ವಸ್ತ್ರ ಪ್ರಯೋಗಿಸುವುದಾಗಿ ಬೆದರಿಸುತ್ತಿದ್ದರು. ಆದರೆ, ನಮ್ಮ ಬಳಿಯೀಗ ಅಣ್ವಸ್ತ್ರಗಳ ಅಣ್ವಸ್ತ್ರಗಳಿವೆ. ಅವರು ಏನು ಬೇಕಾದರೂ ಮಾಡಲಿ ಎಂದು ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದರು.
ಅಮಿತ್ ಶಾ ಅವರು ಕೂಡ ಬಿಹಾರದಲ್ಲಿ ಸಮಾವೇಶವೊಂದರಲ್ಲಿ ಮಾತನಾಡುತ್ತ, ನರೇಂದ್ರ ಮೋದಿ ಸರಕಾರ ದೇಶದ ಗಡಿಯನ್ನು ಸುರಕ್ಷಿತಗೊಳಿಸಿದೆ ಮತ್ತು ರಾಷ್ಟ್ರೀಯ ಭದ್ರತೆಯನ್ನೇ ಆದ್ಯತೆಯನ್ನಾಗಿ ಮಾಡಿಕೊಂಡಿದೆ. ಇಸ್ರೇಲ್ ಮತ್ತು ಅಮೆರಿಕದ ನಂತರ ಭಾರತವೊಂದೇ ಭಯೋತ್ಪಾದನೆಯ ವಿರುದ್ಧ ಇಷ್ಟು ಧೈರ್ಯದಿಂದ ತಿರುಗಿಬಿದ್ದಿದ್ದು ಎಂದು ಪ್ರಸ್ತಾಪಿಸಿದ್ದರು.
ಈ ಬಗ್ಗೆ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ನೀಡಿದ್ದರೂ ಆಯುಕ್ತರು ಬಿಜೆಪಿ ನಾಯಕರ ವಿರುದ್ಧ ಕ್ರಮ ತೆಗೆದುಕೊಳ್ಳಲು ಅಥವಾ ಅವರು ಚುನಾವಣಾ ಪ್ರಚಾರ ಮಾಡದಂತೆ ನಿರ್ಬಂಧ ಹೇರುವಲ್ಲಿ ವಿಫಲರಾಗಿದ್ದಾರೆ ಎಂದು ಸುಶ್ಮಿತಾ ದೇವ್ ಅವರು ಸರ್ವೋಚ್ಚ ನ್ಯಾಯಾಲಯದ ಮುಂದೆ ಅಲವತ್ತುಕೊಂಡಿದ್ದಾರೆ.












Click it and Unblock the Notifications