ಎಲ್ಲರಿಗೂ ಉಚಿತ ಲಸಿಕೆಗಾಗಿ ಧ್ವನಿಯೆತ್ತಲು ರಾಹುಲ್ ಗಾಂಧಿ ಕರೆ
ನವದೆಹಲಿ, ಜೂನ್ 2: ಕೊರೊನಾ ವೈರಸ್ಗಾಗಿ ನೀಡುವ ಲಸಿಕೆಯನ್ನು ದೇಶಾದ್ಯಂತ ಉಚಿತವಾಗಿ ನೀಡಬೇಕೆಂದು ಧ್ವನಿಯೆತ್ತುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕರೆ ನೀಡಿದ್ದಾರೆ. ಟ್ವಿಟ್ಟರ್ನಲ್ಲಿ ಈ ಬಗ್ಗೆ ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಲಸಿಕೆ ಕೊರೊನಾ ವಿರುದ್ಧ ಹೋರಾಡಲು ಇರುವ ಬಲಿಷ್ಟವಾದ ಅಸ್ತ್ರ ಎಂದಿದ್ದಾರೆ. ಹೀಗಾಗಿ ಎಲ್ಲರೂ ಕೂಡ ಪ್ರತಿಯೊಬ್ಬರಿಗೂ ಲಸಿಕೆಯನ್ನು ಉಚಿತವಾಗಿ ನೀಡಲು ಧ್ವನಿಯೆತ್ತುವಂತೆ ಅವರು ಮನವಿ ಮಾಡಿದ್ದಾರೆ.
कोरोना महामारी के ख़िलाफ़ सबसे मज़बूत सुरक्षा कवच सिर्फ़ वैक्सीन है।
— Rahul Gandhi (@RahulGandhi) June 2, 2021
देश के जन-जन तक मुफ़्त टीकाकरण पहुँचाने के लिए आप भी आवाज़ उठाइये- केंद्र सरकार को जगाइये!#SpeakUpForFreeUniversalVaccination pic.twitter.com/SEFhwokfSU
"ಕೋವಿಡ್ 19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟವನ್ನು ನಡೆಸಲು ಲಸಿಕೆ ಬಲಿಷ್ಟವಾದ ಅಸ್ತ್ರವಾಗಿದೆ. ಹೀಗಾಗಿ ಉಚಿತವಾಗಿ ಲಸಿಕೆಯನ್ನು ನೀಡಲು ನಾಗರೀಕರೆಲ್ಲರೂ ಧ್ವನಿಯೆತ್ತಬೇಕು ಮತ್ತು ಕೇಂದ್ರ ಸರ್ಕಾರವನ್ನು ಎಚ್ಚರಿಸಬೇಕು" ಎಂದು ಟ್ವೀಟ್ ಮಾಡಿ ರಾಹುಲ್ ಗಾಂಧಿ ಕರೆ ನೀಡಿದ್ದಾರೆ.

ಇನ್ನು ಈ ಸಂದರ್ಭದಲ್ಲಿ ಪ್ರಿಯಾಂಕ ಗಾಂಧಿ ವಾದ್ರ ಕೂಡ ದೇಶದಲ್ಲಿ ನಡೆಯುತ್ತಿರುವ ಲಸಿಕೆಯ ಅಭಿಯಾನದ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ತಮ್ಮ ಟ್ವೀಟ್ನಲ್ಲಿ ಅವರು "ವಿಶ್ವದಲ್ಲಿ ಅತಿ ಹೆಚ್ಚು ಲಸಿಕೆ ಉತ್ಪಾದನೆ ಮಾಡುವ ದೇಶಗಳಲ್ಲಿ ನಮ್ಮ ದೇಶವೂ ಒಂದು. ಆದರೆ ಇನ್ನು ಕೂಡ 3.4 ಶೇಕಡಾ ಜನರು ಮಾತ್ರವೇ ಸಂಪೂರ್ಣ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಭಾರತದ ಈ ಗೊಂದಲಕಾರಿ ಲಸಿಕೆ ಅಭಿಯಾನಕ್ಕೆ ಯಾರು ಹೊಣೆ? ಎಂದು ಪ್ರಶ್ನಿಸಿದ್ದಾರೆ.
ದೇಶಾದ್ಯಂತ ಲಸಿಕೆಯ ಕೊರತೆ ಆರಂಭವಾದ ಬಳಿಕ ಲಸಿಕೆ ಅಭಿಯಾನದ ವೇಗ ನಿಧಾನವಾಗಿ ನಡೆಯುತ್ತಿದೆ. ಈ ಮಧ್ಯೆ ಜೂನ್ ತಿಂಗಳಿನಲ್ಲಿ 10 ಕೋಟಿಗೂ ಅಧಿಕ ಲಸಿಕೆ ದೊರೆಯಲಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಇದರ ಜೊತೆಗೆ ಲಸಿಕೆ ಉತ್ಪಾದಕರು ತಮ್ಮ ಉತ್ಪಾದನಾ ಸಾಮರ್ಥ್ಯ ಹೆಚ್ಚಳ ಮಾಡಿಕೊಳ್ಳುತ್ತಿರುವ ಬಗ್ಗೆಯೂ ಮಾಹಿತಿಯನ್ನು ನೀಡಿರುವುದು ಆಶಾವಾದ ಮೂಡಿಸಿದೆ. ಆದರೆ ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಬೆಲೆ ಲಸಿಕೆಗಳನ್ನು ಮಾರಾಟ ಮಾಡುವ ವಿಚಾರವಾಗಿ ಸಾಕಷ್ಟು ಆಕ್ಷೇಪಗಳು ವ್ಯಕ್ತವಾಗುತ್ತಿದೆ.
ಭಾರತ ಮೊದಲ ಹಂತದ ಲಸಿಕಾ ಅಭಿಯಾನವನ್ನು ಈ ವರ್ಷದ ಜನವರಿ 16ರಿಂದ ಆರಂಭಿಸಿತ್ತು. ಮೊದಲಿಗೆ ಕೊರೊನಾ ವಾರಿಯರ್ಸ್ ಹಾಗೂ ಫ್ರಂಟ್ಲೈನ್ ವರ್ಕರ್ಸ್ಗೆ ಲಸಿಕೆಯನ್ನು ನೀಡಲಾಯಿತು. ಈಗ 18 ವರ್ಷಕ್ಕಿಂತ ಮೇಲಿನ ಎಲ್ಲಾ ವಯೋಮಾನದವರಿಗೂ ಲಸಿಕೆಯನ್ನು ನೀಡಲಾಗುತ್ತಿದೆ. ಈ ವರ್ಷಾಂತ್ಯದ ಒಳಗೆ ಪ್ರತಿಯೊಬ್ಬರಿಯೂ ಲಸಿಕೆ ಹಾಕುವ ಭರವಸೆಯನ್ನು ಕೇಂದ್ರ ಸರ್ಕಾರ ವ್ಯಕ್ತಪಡಿಸಿದೆ.












Click it and Unblock the Notifications