ಚುನಾವಣೆ ಗೆಲ್ಲಲು ರಾಹುಲ್ ಗೆ ಪಟ್ಟ ಕಟ್ಟುವುದೇ ಕಟ್ಟ ಕಡೆಯ ಆಯ್ಕೆ!
ರಾಹುಲ್ ಗಾಂಧಿ ಅವರ ಇಮೇಜ್ ಮರು ಕಟ್ಟುವ ಕೆಲಸದಲ್ಲಿ ಮೊದಲನೇದಾಗಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವಂತೆ ಪಕ್ಷದ ಸಂಸದರು ಮಂಗಳವಾರ ನಡೆಯುವ ಸಭೆಯಲ್ಲಿ ಒತ್ತಡ ಹೇರುವ ಸಾಧ್ಯತೆಗಳಿವೆ.
ನವದೆಹಲಿ, ಮಾರ್ಚ್ 28: ರಾಹುಲ್ ಗಾಂಧಿ ಕಾಂಗ್ರೆಸ್ ನ ಅಧ್ಯಕ್ಷರಾಗಬೇಕು. ಪಕ್ಷದ ಮೇಲೆ ಸಂಪೂರ್ಣ ಹಿಡಿತ ಸಾಧಿಸಬೇಕು ಎಂದು ಒತ್ತಡ ಹೇರಲು ನಿರ್ಧರಿಸಲಾಗಿದೆ. ಉತ್ತರಪ್ರದೇಶದ ಹೀನಾಯ ಸೋಲಿನ ನಂತರ ಮಂಗಳವಾರ (ಮಾರ್ಚ್ 28) ಕಾಂಗ್ರೆಸ್ ಸಂಸದರನ್ನು ಉದ್ದೇಶಿಸಿ ರಾಹುಲ್ ಮಾತನಾಡಲಿದ್ದು, ಪಕ್ಷದ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವಂತೆ ಒತ್ತಡ ಬರುವ ಸಾಧ್ಯತೆ ಇದೆ.
ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗುವುದಕ್ಕೆ ಈಗಲೂ ಆಲೋಚಿಸುತ್ತಾ ಕೂತರೆ ಆಗೋದಿಲ್ಲ. ಇನ್ನು ಸಮಯ ವ್ಯರ್ಥ ಮಾಡಬಾರದು. ಶೀಘ್ರವೇ ಪಕ್ಷದ ನೇತೃತ್ವ ವಹಿಸಬೇಕು ಎಂದು ಕಾಂಗ್ರೆಸ್ ಸಂಸದರು ಆಗ್ರಹಿಸಲಿದ್ದಾರೆ. ಮುಂಬರುವ ಚುನಾವಣೆಗಳಿಗೆ ಕಾಂಗ್ರೆಸ್ ರಣತಂತ್ರದ ಬಗ್ಗೆ ಚರ್ಚಿಸಲು ಸಭೆ ನಡೆಯುತ್ತದೆ.[ಗುಜರಾತ್ ಚುನಾವಣೆಗೆ ಕಾಂಗ್ರೆಸ್ ನಿಂದಲೂ ಹಿಂದುತ್ವ ರಣತಂತ್ರ]

ಈ ವರ್ಷ ಹಾಗೂ ಮುಂದಿನ ವರ್ಷ ಗುಜರಾತ್, ಹಿಮಾಚಲ ಪ್ರದೇಶ ಹಾಗೂ ಕರ್ನಾಟಕ ವಿಧಾನಸಭೆ ಚುನಾವಣೆಗಳು ನಡೆಯಲಿವೆ. ಇದರ ಜತೆ 2019ರ ಲೋಕಸಭೆ ಚುನಾವಣೆಯಲ್ಲಿ ದೊಡ್ಡ ಗೆಲುವು ಸಾಧಿಸುವ ಬಗ್ಗೆ ಗಮನ ಹರಿಸಬೇಕಿದೆ. ಇಂಥ ಸನ್ನಿವೇಶದಲ್ಲಿ ರಾಹುಲ್ ಮುಂದಾಳತ್ವ ವಹಿಸಬೇಕು. ಹಾಗೂ ತಮ್ಮ ಸುತ್ತ ಇರುವ ತಂಡವನ್ನು ಸ್ವಚ್ಛಗೊಳಿಸಬೇಕು.

ರಾಹುಲ್ ವರ್ಚಸ್ಸನ್ನು ಮತ್ತೆ ಕಟ್ಟುವ ಕೆಲಸಕ್ಕೆ ಕಾಂಗ್ರೆಸ್ ತಂತ್ರ ಹೆಣೆಯುತ್ತಿದೆ. ಅದರ ಮೊದಲ ಭಾಗವಾಗಿ ಪಕ್ಷದ ಚುಕ್ಕಾಣಿ ವಹಿಸುವ ಆಲೋಚನೆ ಇದೆ. ಆ ನಂತರ ರಾಹುಲ್ ಸುತ್ತ ಇರುವ ತಂಡವನ್ನು ಸರಿಪಡಿಸಲಾಗುತ್ತದೆ. ಈಗ ರಾಹುಲ್ ಗಾಂಧಿ ಸುತ್ತ ಇರುವ ಹಿರಿಯರ ತಂಡವನ್ನು ಕೈ ಬಿಡಬೇಕು ಎಂಬ ಸಲಹೆ ಪಕ್ಷದಲ್ಲಿ ಕೇಳಿಬರುತ್ತಿದೆ.[ರಾಹುಲ್ ಗಾಂಧಿ ಬ್ರಾಂಡ್ ಇಮೇಜ್ ಮರುಕಟ್ಟುವ ಕಸರತ್ತು]

ಜ್ಯೋತಿರಾದಿತ್ಯ ಸಿಂಧ್ಯಾ, ಸಚಿನ್ ಪೈಲಟ್ ರಂಥವರಿಗೆ ಪ್ರಾಮುಖ್ಯ ನೀಡಲು ನಿರ್ಧರಿಸಲಾಗಿದೆ. ಯುವ ತಂಡವನ್ನು ರಚಿಸಿಕೊಂಡರೆ ಉತ್ಸಾಹ ಇರುತ್ತದೆ ಎಂಬುದು ಕಾಂಗ್ರೆಸ್ ನ ಹಲವು ನಾಯಕರ ಅಭಿಪ್ರಾಯ. ಹಿರಿಯರ ತಂಡವನ್ನು ಪದೇ ಪದೇ ಪರೀಕ್ಷೆ ಮಾಡಿಯಾಗಿದೆ. ಆ ತಂಡ ವಿಫಲವಾಗಿದೆ.

ಹೀಗೇ ಮುಂದುವರಿದರೆ ಚುನಾವಣೆ ಸೋಲುಗಳ ವಿಚಾರದಲ್ಲಿ ಗಿನ್ನಿಸ್ ದಾಖಲೆಗೆ ರಾಹುಲ್ ಗಾಂಧಿ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂಬ ಮಾತನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications