ಮೋದಿ ಪ್ರಚಾರಕ್ಕೆ ಅನುಕೂಲವಾಗಿ ವೇಳಾಪಟ್ಟಿ ಸಿದ್ಧಪಡಿಸಿದೆ ಚುನಾವಣೆ ಆಯೋಗ: ರಾಹುಲ್ ಆರೋಪ
ಒಂದು ಕಡೆ ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದರೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪತ್ರಿಕಾ ಗೋಷ್ಠಿ ನಡೆಸಿ, ಲೋಕಸಭಾ ಚುನಾವಣೆಯ ಕೊನೆ ಹಂತದ ಮತದಾನಕ್ಕೆ ಇನ್ನೇನು ನಾಲ್ಕೈದು ದಿನ ಇರುವಾಗ ಪ್ರಧಾನಿ ಪತ್ರಿಕಾಗೋಷ್ಠಿ ಕರೆದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಈ ಬಾರಿ ಚುನಾವಣೆ ಆಯೋಗವು ಪೂರ್ವಗ್ರಹ ಪೀಡಿತವಾಗಿ ಕಾರ್ಯ ನಿರ್ವಹಿಸಿದೆ. ಮೋದಿ ತಮಗೇನು ಬೇಕೋ ಅದನ್ನು ಹೇಳಬಹುದು. ಆದರೆ ನಮ್ಮನ್ನು ಹೇಳದಂತೆ ತಡೆಯಲಾಗುತ್ತದೆ. ಇದು ಮೋದಿ ಅವರ ಚುನಾವಣೆ ಪ್ರಚಾರಕ್ಕೆ ಅನುಕೂಲ ಆಗುವಂತೆ ವೇಳಾಪಟ್ಟಿ ಸಿದ್ಧ ಮಾಡಿದಂತೆ ಇದೆ. ನಮ್ಮ ಬಳಿ ಸತ್ಯ ಇದ್ದರೆ, ಮೋದಿ ಹಾಗೂ ಬಿಜೆಪಿ ಬಳಿ ಸಾಕಷ್ಟು ಹಣ ಇದೆ ಎಂದಿದ್ದಾರೆ.
ವಿಪಕ್ಷಗಳ ಮೈತ್ರಿ ಬಗ್ಗೆ ಮಾತನಾಡಿದ ಅವರು, ನಾನು ಸ್ಪಷ್ಟವಾಗಿ ಹೇಳಿದ್ದೇನೆ: ಮೇ ಇಪ್ಪತ್ಮೂರನೇ ತಾರೀಕು ಜನರು ತೀರ್ಮಾನ ಮಾಡುತ್ತಾರೆ. ಅದರ ಆಧಾರದಲ್ಲಿ ನಾವು ಕೆಲಸ ಮಾಡುತ್ತೇವೆ. ನಾವು ಬಿಜೆಪಿ ಜತೆ ಹೋರಾಡಿದ್ದೇವೆ ಎಂಬ ಬಗ್ಗೆ ಹೆಮ್ಮೆ ಇದೆ. ದೇಶದ ಸಂಸ್ಥೆಗಳನ್ನು ಬಿಜೆಪಿ ಹಾಗೂ ಆರೆಸ್ಸೆಸ್ ನಿಂದ ರಕ್ಷಿಸಿದ್ದೇವೆ. ನಾವದನ್ನು ಯಶಸ್ವಿಯಾಗಿ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಮೋದಿ ಥರ ನಾನಲ್ಲ ಎಂದ ರಾಹುಲ್ ಗಾಂಧಿ
ನಾವು ಮುಂದೆ ಮನಮೋಹನ್ ಸಿಂಗ್ ಹಾಗೂ ಸೋನಿಯಾ ಗಾಂಧಿ ಅವರ ಅನುಭವವನ್ನು ಬಳಸಿಕೊಳ್ಳುತ್ತೇವೆ. ಅನುಭವವನ್ನು ಹೊರ ಹಾಕುವಂಥ ಮೋದಿ ಥರ ನಾನಲ್ಲ. ಈ ದೇಶದ ಜನರು ಏನು ನಿರ್ಧಾರ ಮಾಡುತ್ತಾರೆ ಎಂಬ ಬಗ್ಗೆ ಪೂರ್ವಗ್ರಹದಿಂದ ತೀರ್ಮಾನಕ್ಕೆ ಬರುವುದಿಲ್ಲ. ಮೇ ಇಪ್ಪತ್ಮೂರನೇ ತಾರೀಕಿನಂದು ದೇಶದ ಜನರ ಮನಸ್ಸು ಗೊತ್ತಾಗಲಿದೆ ಎಂದಿದ್ದಾರೆ.ನೀವು ಎಲ್ಲ ಕಡೆಯೂ ಚೌಕೀದಾರ್ ಎಂದುಕೊಳ್ಳಬಹುದು. ಯಾವುದೇ ನಗರದಲ್ಲಿ, ಎಲ್ಲೇ ಹೇಳಿದರೂ ಅದಕ್ಕೆ ಪ್ರತಿಕ್ರಿಯೆ ಚೋರ್ ಹೈ ಅಂತಲೇ ಬರುತ್ತದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಎ ಗ್ರೇಡ್ ವಿಪಕ್ಷವಾಗಿದೆ. ನಾನು ಅವರನ್ನು ಕಠಿಣ ಪ್ರಶ್ನೆಗಳನ್ನು ಕೇಳುತ್ತಿದ್ದರೆ, ಚರ್ಚೆಯ ವಿಷಯವಲ್ಲದ ಪ್ರಶ್ನೆಗಳನ್ನು ಅವರು ಕೇಳುತ್ತಿದ್ದರೆ ನನ್ನ ಮನಸಿಗೆ ಸಮಾಧಾನ ಆಗಲ್ಲ ಎಂದು ಹೇಳಿದ್ದಾರೆ.
ಮೋದಿ ಏಕೆ ಸವಾಲು ಸ್ವೀಕರಿಸಲ್ಲ
ರಫೇಲ್ ವಿಷಯವಾಗಿ ನನ್ನೊಂದಿಗೆ ಚರ್ಚೆಗೆ ಪ್ರಧಾನಿ ಮೋದಿ ಏಕೆ ಸವಾಲು ಸ್ವೀಕರಿಸುವುದಿಲ್ಲ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಕಾರ್ಯಕರ್ತರಿಗೆ ಈ ಚುನಾವಣೆಯ ಬೆಂಬಲಕ್ಕೆ ಧನ್ಯವಾದ ಹೇಳಿದ್ದಾರೆ. ಇನ್ನು, ವಾಗ್ದಾಳಿ ಮುಂದುವರಿಸಿದ ಅವರು, ಅಮಿತ್ ಶಾ ಹಾಗೂ ನರೇಂದ್ರ ಮೋದಿ ತತ್ವಗಳು ಖಂಡಿತ ಮಹಾತ್ಮ ಗಾಂಧಿಯ ತತ್ವಗಳಲ್ಲ. ನಾನು ಕೆಲವು ಪತ್ರಕರ್ತರಿಗೆ ಹೇಳಿದ್ದೇನೆ. ನಮ್ಮ ಪರವಾಗಿ ಕೆಲವು ಪ್ರಶ್ನೆಗಳನ್ನು ಕೇಳಿ. ಅವರು ಖಂಡಿತಾ ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ಬಿಜೆಪಿಯನ್ನು ಸೋಲಿಸುವುದು ನಮ್ಮ ಆದ್ಯತೆ
ಬಿಎಸ್ ಪಿ ಹಾಗೂ ಎಸ್ ಪಿ ಜತೆಯಾಗಿ ಉತ್ತರಪ್ರದೇಶದಲ್ಲಿ ಚುನಾವಣೆ ಎದುರಿಸಲು ನಿರ್ಧರಿಸಿದ್ದನ್ನು ಗೌರವಿಸುತ್ತೇನೆ. ಕಾಂಗ್ರೆಸ್ ದೃಷ್ಟಿಯಿಂದ ನಮ್ಮ ಸಿದ್ಧಾಂತವನ್ನು ಉತ್ತರಪ್ರದೇಶದಲ್ಲಿ ತರಬೇಕು. ಬಿಜೆಪಿಯನ್ನು ಸೋಲಿಸಿ, ಇದು ನಮ್ಮ ಆದ್ಯತೆ ಎಂಬುದನ್ನು ಪ್ರಿಯಾಂಕಾ ಹಾಗೂ ಜ್ಯೋತಿರಾದಿತ್ಯ ಇಬ್ಬರಿಗೂ ತಿಳಿಸಿದ್ದೇನೆ ಎಂದಿದ್ದಾರೆ.
ವಿಧಾನಸಭಾ ಚುನಾವಣೆಗಳಲ್ಲೂ ಜಯ ಸಾಧಿಸಬೇಕು
ನಮ್ಮ ಆದ್ಯತೆ ಏನೆಂದರೆ, ವಿಧಾನಸಭಾ ಚುನಾವಣೆಗಳಲ್ಲೂ ಜಯ ಸಾಧಿಸಬೇಕು ಎಂಬುದು. ಇನ್ನೊಂದು ವಿಚಾರ ಏನೆಂದರೆ ಮಾಯಾವತಿ, ಮುಲಾಯಂ ಸಿಂಗ್, ಮಮತಾ ಬ್ಯಾನರ್ಜಿ, ಚಂದ್ರಬಾಬು ಇವರ್ಯಾರೂ ನರೇಂದ್ರ ಮೋದಿ ಸರಕಾರವನ್ನು ಬೆಂಬಲಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.