ಜಾಮೀನು ನಿರಾಕರಣೆ: ಡಿಕೆ ಶಿವಕುಮಾರ್ ಮುಂದಿನ ನಡೆ ಏನು?
ನವದೆಹಲಿ, ಸೆಪ್ಟೆಂಬರ್ 25: ಇಂದು ಜಾಮೀನು ಸಿಕ್ಕಬಹುದು ಎಂಬ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರ ನಿರೀಕ್ಷೆ ಸುಳ್ಳಾಗಿದೆ.
ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯ ಡಿಕೆಶಿ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದು, ಕರ್ನಾಟಕ ಕಾಂಗ್ರೆಸ್ ನ ಟ್ರಬಲ್ ಶೂಟರ್ ಡಿಕೆಶಿ ಮತ್ತೆ ತಿಹಾರ್ ಜೈಲಿಗೆ ತೆರಳಬೇಕಿದೆ.
ಸೆಪ್ಟೆಂಬರ್ 03 ರಿಂದ ನಿರಂತರವಾಗಿ ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸುತ್ತಿರುವ ಡಿಕೆ ಶಿವಕುಮಾರ್, ದೆಹಲಿ ಹೈಕೋರ್ಟ್ ಗೆ ಅರ್ಜಿ ಜಾಮೀನು ಕೋರಿ ಮೇಲ್ಮನವಿ ಸಲ್ಲಿಸಲಿದ್ದಾರೆ. ಅದಲ್ಲದೆ ಕನಕಪುರ ಶಾಸಕ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಮುಂದಿರುವ ಆಯ್ಕೆಗಳೇನು?

ಹೈಕೋರ್ಟ್ ಗೆ ಅರ್ಜಿ
ಈಗಾಗಲೇ ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯ ಜಾಮೀನನ್ನು ನಿರಾಕರಿಸಿರುವುದನ್ನು ಪ್ರಶ್ನಿಸಿ, ದೆಹಲಿ ಹೈಕೋರ್ಟ್ ಗೆ ಡಿ.ಕೆ.ಶಿವಕುಮಾರ್ ಅರ್ಜಿ ಸಲ್ಲಿಸಬಹುದು. ಹೈಕೋರ್ಟ್ ನಲ್ಲಿ ಜಾಮೀನು ಸಿಗದೆ ಇದ್ದರೆ ಸುಪ್ರೀಂ ಕೋರ್ಟ್ ಮೊರೆಹೋಗಬಹುದು.

ನ್ಯಾಯಾಂಗ ಬಂಧನ ಪೂರ್ಣಗೊಳ್ಳುವವರೆಗೂ ಕಾಯುವುದು
ಅದಿಲ್ಲವೆಂದರೆ ಜಾರಿ ನಿರ್ದೇಶನಾಲಯದ ನ್ಯಾಯಾಂಗ ಬಂಧನ ಪೂರ್ಣಗೊಂಡ ನಂತರ ಅಂದರೆ ಅ. 1 ರಂದು ಮತ್ತೆ ಜಾಮೀನಿಗೆ ಅರ್ಜಿ ಹಾಕಬಹುದು.

ಹೈಕೋರ್ಟ್ ನಲ್ಲಿ ಅನಾರೋಗ್ಯದ ಕಾರಣ
ಜಾಮೀನು ಅರ್ಜಿ ವಜಾಗೊಳಿಸಿರುವ ಜಾರಿ ನಿರ್ದೇಶನಾಲಯದ ಆದೇಶವನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೊರೆಹೋದರೆ, ಅಲ್ಲಿ ಮತ್ತೆ ಅನಾರೋಗ್ಯದ ಕಾರಣ ನೀಡಿ ಜಾಮೀನಿಗೆ ಪ್ರಯತ್ನಿಸಬಹುದು. ಆದರೆ ಇದಕ್ಕೂ ಮುನ್ನ ಅನಾರೋಗ್ಯದ ಆಧಾರದ ಏಲೆ ಜಾಮೀನು ಕೇಳಿದ್ದ ಡಿಕೆಶಿ ಅವರಿಗೆ ಕೋರ್ಟು ಜಾಮೀನು ನಿರಾಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಸಂಕಷ್ಟ ತಂದ 8.59 ಕೋಟಿ ರೂ. ಪ್ರಕರಣ
2017ರ ಆಗಸ್ಟ್ 2 ರಿಂದ 5ನೇ ತಾರೀಕಿನ ತನಕ ನಡೆದ ಆದಾಯ ತೆರಿಗೆ ಇಲಾಖೆ ದಾಳಿ 8.59 ಕೋಟಿ ರೂ.ಗಳ ಪ್ರಕರಣ ದಾಖಲಾಗುವಂತೆ ಮಾಡಿತು. ಇದೇ ಪ್ರಕರಣದಲ್ಲಿ ಡಿ. ಕೆ. ಶಿವಕುಮಾರ್ ನಾಲ್ಕು ದಿನಗಳ ವಿಚಾರಣೆ ಎದುರಿಸಿ ಬಂಧನಕ್ಕೆ ಒಳಗಾಗಿದ್ದಾರೆ.












Click it and Unblock the Notifications