ಸೋಲಿಗೆ ಇವಿಎಂ ಹೊಣೆಯಲ್ಲ: ವೀರಪ್ಪ ಮೋಯ್ಲಿ
ಚುನಾವಣೆಯ ಸೋಲಿಗೆ ಇವಿಎಂ ಹೊಣೆ ಎನ್ನುತ್ತಿದ್ದ ಕಾಂಗ್ರೆಸ್ ಸೇರಿದಂತೆ 13 ಕ್ಕೂ ಹೆಚ್ಚು ಪಕ್ಷಗಳ ನಡೆಯನ್ನು ಕಾಂಗ್ರೆಸ್ ನಾಯಕ ವೀರಪ್ಪ ಮೋಯ್ಲಿ ವಿರೋಧಿಸಿದ್ದಾರೆ.
ನವದೆಹಲಿ, ಏಪ್ರಿಲ್ 12: ಚುನಾವಣೆಯ ಸೋಲಿಗೆ ಮತಯಂತ್ರ (ಇವಿಎಂ) ಹೊಣೆಯಲ್ಲ, ಇಂಥ ಆರೋಪಗಳಲ್ಲಿ ಹುರುಳೂ ಇಲ್ಲ ಎಂದು ಮಾಜಿ ಕಾನೂನು ಸಚಿವ, ಕಾಂಗ್ರೆಸ್ ಹಿರಿಯ ನಾಯಕ ವೀರಪ್ಪ ಮೋಯ್ಲಿ ಹೇಳಿದ್ದಾರೆ. ಈ ಮೂಲಕ ತಮ್ಮದೇ ಪಕ್ಷದ ಕೆಲ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ!
ಕಳೆದ ತಿಂಗಳು ನಡೆದ ಐದು ರಾಜ್ಯಗಳ ಚುನಾವಣೆಯ ನಂತರ ಸೋತ ಪಕ್ಷಗಳೆಲ್ಲವೂ, ತಮ್ಮ ಸೋಲಿಗೆ ಮತಯಂತ್ರ (ಇವಿಎಂ)ದಲ್ಲಿನ ದೋಷವೇ ಕಾರಣ ಎಂದು ದೂರಿದ್ದವು. ಮಾಯಾವತಿ, ಅರವಿಂದ್ ಕೇಜ್ರಿವಾಲ್, ಅಖಿಲೇಶ್ ಯಾದವ್ ಜೊತೆಗೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೂ ಸೇರಿಕೊಂಡು ಸೋಲಿನ ಹೊಣೆಯನ್ನು ಸುಲಭವಾಗಿ ಇವಿಎಂ ಮೇಲೆ ಎತ್ತಿಹಾಕಿದ್ದವು.[ನನ್ನ ಸೋಲಿಗೆ ಕಾರಣ EVM ಅಲ್ಲ, ನಂಬಿಕೆ ದ್ರೋಹ: ಅಪರ್ಣಾ ಯಾದವ್]
ಆದರೆ ಇವಿಎಂ ನಲ್ಲಿ ಯಾವುದೇ ದೋಷವಿರಲಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದ ಮೇಲೂ, ಏಪ್ರಿಲ್ 10 ರಂದು ಸೋಮವಾರ ಸಹ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಎಡಪಕ್ಷ ಸೇರಿದಂತೆ 13 ಕ್ಕೂ ಹೆಚ್ಚು ಪಕ್ಷಗಳು ಇವಿಎಂ ಮೇಲೆ ತಾವು ಸಂಪೂರ್ಣ ನಂಬಿಕೆ ಕಳೆದುಕೊಂಡಿದ್ದೇವೆಂದು ಹೇಳಿದ್ದವು. ಅಷ್ಟೇ ಅಲ್ಲದೆ, ಇನ್ನು ಮೇಲೆ ಚುನಾವಣೆಗಳಲ್ಲಿ ವಿವಿಪಿಎಟಿ (ಮತ ಸ್ಪಷ್ಟೀಕರಣ ಯಂತ್ರ) ಯಂತ್ರಗಳನ್ನು ಬಳಸಬೇಕೆಂದೂ ಬೇಡಿಕೆ ಇಟ್ಟಿದ್ದವು. ಈ ಬಗ್ಗೆ ಮಾತನಾಡಿದ ವೀರಪ್ಪ ಮೋಯ್ಲಿ ತಮ್ಮದೇ ಪಕ್ಷದ ಕೆಲ ನಾಯಕರ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.[ಬಿಜೆಪಿ ಗೆಲುವಿಗೆ ಇವಿಎಂ ಲೋಪ ಎನ್ನುತ್ತಿದ್ದ ಕೇಜ್ರಿವಾಲ್ ಈಗ ಏನು ಹೇಳ್ತಾರೋ?]
"ನಾನು ಕಾನೂನು ಸಚಿವನಾಗಿದ್ದವನು, ನನ್ನ ಅಧಿಕಾರಾವಧಿಯಲ್ಲೇ ಮತಯಂತ್ರಗಳ ಬಳಕೆ ಆರಂಭವಾಗಿದ್ದು. ಆದ್ದರಿಂದ ನನಗೂ ಈ ಬಗ್ಗೆ ಜ್ಞಾನವಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೂ ಇಂಥ ದೂರುಗಳು ಕೇಳಿಬಂದಿದ್ದವು. ಆ ಸಂದರ್ಭದಲ್ಲಿ ನಾವು ಇವಿಎಂ ಗೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದೆವು. ಇವಿಎಂ ಸಂಪೂರ್ಣ ದೋಷಮುಕ್ತವಾಗಿದೆ ಎಂಬುದು ಆಗಲೇ ಸಾಬೀತಾಗಿದೆ. ಈ ಬಗ್ಗೆ ಮತ್ತೆ ಮತ್ತೆ ಮಾತನಾಡುವುದರಲ್ಲಿ ಅರ್ಥವಿಲ್ಲ" ಎಂದು ಮೋಯ್ಲಿ ಖಾರವಾಗಿಯೇ ಹೇಳಿದರು.
"ಹೀಗೆ ಅನವಶ್ಯಕವಾಗಿ ಇವಿಎಂ ಮೇಲೆ ಗೂಬೆ ಕೂರಿಸುವುದು ಸೋತವರ ಮನಸ್ಥಿತಿಯನ್ನು ತೋರಿಸುತ್ತದೆ. ನಮ್ಮ ಸೋಲಿಗೆ ಇವಿಎಂ ಅನ್ನು ದೂರುವುದು ತಪ್ಪು" ಎಂದು ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದರು.