ಡಿ.ಕೆ.ಶಿವಕುಮಾರ್ ಗೆ ಜಾಮೀನು: ಸಹೋದರ ಡಿ.ಕೆ.ಸುರೇಶ್ ಕಣ್ಣೀರು
ನವದೆಹಲಿ, ಅಕ್ಟೋಬರ್ 23: ಡಿ.ಕೆ.ಶಿವಕುಮಾರ್ಗೆ ಜಾಮೀನು ಸಿಕ್ಕಿರುವ ಬಗ್ಗೆ ಸಹೋದರ ಡಿ.ಕೆ.ಸುರೇಶ್ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.
ಡಿ.ಕೆ.ಶಿವಕುಮಾರ್ ಇಡಿ ಎದುರು ವಿಚಾರಣೆಗೆ ಹಾಜರಾದಾಗಿನಿಂದಲೂ ಡಿ.ಕೆ.ಸುರೇಶ್ ದೆಹಲಿಯಲ್ಲಿಯೇ ಇದ್ದು ಅಣ್ಣನಿಗೆ ಬೆಂಬಲವಾಗಿ ನಿಂತಿದ್ದರು. ಕೋರ್ಟ್, ಜೈಲು, ಪೊಲೀಸ್, ವಕೀಲರು, ಮಾಧ್ಯಮಗಳು ಎಲ್ಲವನ್ನೂ ನಿಭಾಯಿಸಿದ್ದ ಸುರೇಶ್, ಜಾಮೀನು ಸಿಕ್ಕ ನಂತರ ನಿರಾಳ ಭಾವದಲ್ಲಿದ್ದರು.
ಡಿ.ಕೆ.ಶಿವಕುಮಾರ್ ಅವರಿಗೆ ಜಾಮೀನು ಸಿಕ್ಕ ಕೂಡಲೇ ಸುರೇಶ್ ಅವರು ಕೋರ್ಟ್ ಹಾಲ್ನಲ್ಲೇ ಕಣ್ಣಿರು ಸುರಿಸಿದ್ದಾರೆ. ವಕೀಲರನ್ನು ತಬ್ಬಿಕೊಂಡು, ಕೈಮುಗಿದು ಧನ್ಯವಾದಗಳನ್ನು ಅರ್ಪಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಸುರೇಶ್, 'ಕಳೆದ 50 ದಿನಗಳಿಂದ ಮಾನಸಿಕ ಹಿಂಸೆ ಅನುಭವಿಸಿದ್ದೆವು ಈಗ ನಿರಾಳವಾಗಿದೆ' ಎಂದರು. ಡಿಕೆಶಿ ಪರವಾಗಿ ವಾದಿಸಿದ ವಕೀಲರಿಗೆ, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಡಿ.ಕೆ.ಶಿವಕುಮಾರ್ ಅಭಿಮಾನಿಗಳು ಎಲ್ಲರಿಗೂ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ಅರ್ಪಿಸಿದರು.
'ನ್ಯಾಯಾಲಯದ ಮೇಲೆ ನಮಗೆ ನಂಬಿಕೆ ಇತ್ತು, ಅದರಂತೆ ನಾವು ಕಾದೆವು ಇಂದು ಹೈಕೋರ್ಟ್ ಜಾಮೀನು ನೀಡಿದೆ. ಮೊದಲೇ ಹೇಳಿದಂತೆ ಡಿಕೆಶಿ ಈ ಪ್ರಕರಣದಿಂದ ಮುಕ್ತರಾಗಿ ಬರುತ್ತಾರೆ ಅದಕ್ಕೆ ಇದು ಆರಂಭವಷ್ಟೆ' ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ನಂಬಿದ್ದ ದೈವ ಅವರ ಕೈಹಿಡಿದಿದೆ. ಇಡಿ ಅವರು ಸುಪ್ರೀಂಕೋರ್ಟ್ಗೆ ಬೇಕಾದರೂ ಹೋಗಲಿ, ನಾವು ಕಾನೂನು ಹೋರಾಟ ಮುಂದುವರೆಸುತ್ತೇವೆ ಎಂದು ಡಿ.ಕೆ.ಸುರೇಶ್ ಹೇಳಿದರು.












Click it and Unblock the Notifications