ವಿಚಾರಣೆಗೆ ತೆರಳುವ ಮುನ್ನಾ ಭಾವುಕರಾದ ಗಟ್ಟಿ ಗುಂಡಿಗೆಯ ಡಿಕೆ.ಶಿವಕುಮಾರ್
ನವದೆಹಲಿ, ಸೆಪ್ಟೆಂಬರ್ 02: ಗಟ್ಟಿ ಗುಂಡಿಗೆ ರಾಜಕಾರಣಿ ಎಂದೇ ಖ್ಯಾತರಾಗಿರುವ ಡಿ.ಕೆ.ಶಿವಕುಮಾರ್ ಅವರು ಇಂದು ಭಾವುಕರಾಗಿ ಬಿಟ್ಟರು.
ಮೂರನೇಯ ದಿನ ಇಡಿ ವಿಚಾರಣೆಗೆ ತೆರಳುವ ಮುನ್ನಾ ಎದುರಾದ ಮಾಧ್ಯಮಗಳ ಎದುರು ಮಾತನಾಡಿದ ಡಿ.ಕೆ.ಶಿವಕುಮಾರ್ ಮಾತನಾಡುತ್ತಾ ಗದ್ಗದಿತರಾದರು. ಉಕ್ಕಿ ಬರುತ್ತಿದ್ದ ಅಳುವನ್ನು ತುಟಿ ಕಚ್ಚಿ ತಡೆದು ಮಾಧ್ಯಮಗಳ ಮುಂದೆ ಮಾತನಾಡಿದರು.
ಮೊದಲಿಗೆ ರಾಜ್ಯದ ಜನರಿಗೆ ಗೌರಿ-ಗಣೇಶ ಹಬ್ಬದ ಶುಭಾಶಯ ತಿಳಿಸಿದ ಡಿ.ಕೆ.ಶಿವಕುಮಾರ್, 'ಯಾವ ಕಾಂಗ್ರೆಸ್ ನಾಯಕರೂ ನನಗೆ ಬೆಂಬಲ ವ್ಯಕ್ತಪಡಿಸಲು ದೆಹಲಿಗೆ ಬರುವುದು ಬೇಡ, ನೀವು ಕೊಟ್ಟಿರುವ ಬೆಂಬಲ ನನಗೆ ಶ್ರೀರಕ್ಷೆಯಾಗಿದೆ' ಎಂದು ಹೇಳಿದರು.

ಮಾತು ಮುಂದುವರೆಸಿದ ಅವರು, 'ಇಂದು ನಮ್ಮ ತಂದೆಯವರಿಗೆ ಹಿರಿಯರಿಗೆ ಪೂಜೆ ಮಾಡುವ ದಿನ ಆದರೆ, ಅವರಿಗೆ ಇಂದು ಎಡೆ ಸಹ ಇಡಲು ಆಗುತ್ತಿಲ್ಲ, ಇವರು ಅವಕಾಶ ನೀಡಲಿಲ್ಲ, ನಾನೂ ನನ್ನ ತಮ್ಮ ಇಬ್ಬರೂ ಸಹ ಇಂದು ಇಲ್ಲೇ ಇದ್ದೇವೆ' ಎಂದು ಹೇಳುತ್ತಲೇ ಗದ್ಗದಿತರಾದರು. ಶಿವಕುಮಾರ್ ಅವರಿಗೆ ದುಃಖ ಒತ್ತರಿಸಿಕೊಂಡು ಬಂತು ಆದರೆ ತುಟಿ ಕಚ್ಚಿ ಅಳುವನ್ನು ತಡೆದುಕೊಂಡರು.
'ಈ ಮೊದಲು ಡಿಸಿಎಂ ಆಗಿದ್ದ ನನ್ನ ಗೆಳೆಯರೊಬ್ಬರು ನನ್ನ ಬಗ್ಗೆ ಮಾತನಾಡುತ್ತಾ, ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದು ಹೇಳಿದ್ದಾರೆ' ಎಂದು ಬಗ್ಗೆ ಗದ್ಗದಿತರಾದರು ಡಿ.ಕೆ.ಶಿವಕುಮಾರ್. ಆರ್.ಅಶೋಕ್ ಅನ್ನು ಉದ್ದೇಶಿಸಿಯೇ ಶಿವಕುಮಾರ್ ಅವರು ಈ ಮಾತು ಹೇಳಿದ್ದಾರೆ.
ಮಾತು ಮುಂದುವರೆಸಿದ ಅವರು, 'ನಾನು ನಿಮಗೆ (ಜನರಿಗೆ) ಅವಮಾನವಾಗುವಂತೆ ಯಾವ ತಪ್ಪನ್ನೂ ಮಾಡಿಲ್ಲ, ಇಂತಹಾ (ಇಡಿ) ನೂರು ಮಂದಿ ಬಂದರೂ ಎದುರಿಸುವ ಶಕ್ತಿ ನನಗೆ ಇದೆ' ಎಂದರು.
'ನನ್ನ ಪಕ್ಷ, ನಾನು ನಂಬಿದ ಜನಕ್ಕಾಗಿ ಇಷ್ಟು ವರ್ಷ ಹೋರಾಟ ಮಾಡಿಕೊಂಡು ಬಂದಿದ್ದೇನೆ, ಇಂತಹಾ ಎಷ್ಟೇ ಜನ ಬಂದರೂ ಹೋರಾಡುವ ಶಕ್ತಿ ನೀವು (ಜನ) ಕೊಟ್ಟಿದ್ದೀರಿ' ಎಂದು ಆತ್ಮಸ್ಥೈರ್ಯ ಪ್ರದರ್ಶಿಸಿದರು ಡಿ.ಕೆ.ಶಿವಕುಮಾರ್.












Click it and Unblock the Notifications