ದೀಪಾವಳಿಗೆ ಪಟಾಕಿ ಹೊಡೆಯಬೇಕಿಲ್ಲ, ಸಿಹಿ ಹಂಚಿದರೂ ಸಾಕು: ಸುಪ್ರೀಂಕೋರ್ಟ್
ನವದೆಹಲಿ, ಆಗಸ್ಟ್ 9: ದೀಪಾವಳಿ ಸಂದರ್ಭದಲ್ಲಿ ಮಾಲಿನ್ಯ ಹೆಚ್ಚಲು ಪಟಾಕಿಗಳು ಮಾತ್ರವೇ ಕಾರಣವಲ್ಲ, ಇನ್ನೂ ಅನೇಕ ಅಂಶಗಳು ಕೂಡ ಕಾರಣವಾಗಿವೆ. ಅದಕ್ಕಾಗಿ ಇಡೀ ಪಟಾಕಿ ಉದ್ಯಮವನ್ನೇ ಮುಚ್ಚುವುದು ಸರಿಯಲ್ಲ ಎಂದು ಪಟಾಕಿ ತಯಾರಕ ಕಂಪೆನಿಗಳು ಸುಪ್ರೀಂಕೋರ್ಟ್ನಲ್ಲಿ ವಾದಿಸಿವೆ.
ಪಟಾಕಿಗಳಿಂದಾಗಿ ಮುಖ್ಯವಾಗಿ ದೀಪಾವಳಿ ಸಮಯದಲ್ಲಿ ಮಾಲಿನ್ಯದ ಪ್ರಮಾಣ ಅತಿ ಅಪಾಯಕಾರಿ ಮಟ್ಟಕ್ಕೆ ತಲುಪುತ್ತಿದ್ದು, ದೇಶದಾದ್ಯಂತ ಪಟಾಕಿಗಳ ಉತ್ಪಾದನೆ, ಮಾರಾಟ ಮತ್ತು ಸಂಗ್ರಹಿಸುವಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಕಂಪೆನಿಗಳು, ಮಾಲಿನ್ಯವು ಅತ್ಯಧಿಕ ಮಟ್ಟಕ್ಕೆ ತಲುಪಲು ಪಟಾಕಿಗಳಷ್ಟೇ ಕಾರಣವಲ್ಲ. ವಾಹನಗಳ ಮಾಲಿನ್ಯ, ನಿರ್ಮಾಣ ಕಾಮಗಾರಿಗಳ ದೂಳು ಮತ್ತು ತ್ಯಾಜ್ಯದ ಸುಡುವಿಕೆಯೂ ಕಾರಣ ಎಂದು ವಾದಿಸಿವೆ.

'ವಾಯುಮಾಲಿನ್ಯವನ್ನು ಗಮನದಲ್ಲಿಟ್ಟುಕೊಂಡು ಪಟಾಕಿ ಉತ್ಪಾದನೆಯನ್ನು ಸಂಪೂರ್ಣವಾಗಿ ನಿಷೇಧಿಸಿದರೆ ಉಳಿದ ಉದ್ಯಮಗಳನ್ನೂ ನಿಷೇಧಿಸಲಾಗುತ್ತದೆಯೇ ಎಂಬ ಪ್ರಶ್ನೆ ಮೂಡುತ್ತದೆ' ಎಂದು ಹೇಳಿದ ಪಟಾಕಿ ಕಂಪೆನಿಗಳ ಪರ ವಕೀಲರು, ದೀಪಾವಳಿಯ ಆಚರಣೆಯು ಜನರನ್ನು ಒಂದುಗೂಡಿಸುತ್ತದೆ ಎಂದರು.
ಇದಕ್ಕೆ ನ್ಯಾಯಮೂರ್ತಿ ಎಕೆ ಸಿಕ್ರಿ, 'ದೀಪಾವಳಿ ಬೆಳಕಿನ ಹಬ್ಬ. ಜನರನ್ನು ಒಂದುಗೂಡಿಸಲು ಪಟಾಕಿಗಳು ಅಗತ್ಯವಾಗಿಲ್ಲ. ಸಿಹಿಯನ್ನು ಹಂಚುವ ಮೂಲಕವೂ ಜನರನ್ನು ಒಂದುಗೂಡಿಸಬಹುದು' ಎಂದು ಹೇಳಿದರು.
ಈ ಅರ್ಜಿಯ ಬಾಕಿ ವಿಚಾರಣೆಯನ್ನು ನ್ಯಾಯಮೂರ್ತಿ ಎಕೆ ಸಿಕ್ರಿ ಮತ್ತು ನ್ಯಾಯಮೂರ್ತಿ ಅಶೋಕ್ ಭೂಷಣ್ ಅವರಿದ್ದ ನ್ಯಾಯಪೀಠ ಆಗಸ್ಟ್ 14ಕ್ಕೆ ನಿಗದಿಪಡಿಸಿತು.
ದೇಶದಲ್ಲಿ ವಾಯುಮಾಲಿನ್ಯದಿಂದಾಗಿ ಮಕ್ಕಳಲ್ಲಿ ಹೆಚ್ಚುತ್ತಿರುವ ಉಸಿರಾಟದ ಸಮಸ್ಯೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ನ್ಯಾಯಪೀಠ, ಪಟಾಕಿಗಳ ಬಳಕೆಯನ್ನು ಭಾಗಶಃ ಅಥವಾ ಸಂಪೂರ್ಣವಾಗಿ ನಿಷೇಧಿಸುವ ಸಂಬಂಧ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದೆ.
ರಾಜಧಾನಿ ದೆಹಲಿಯಲ್ಲಿ ಶೇ 20-25ರಷ್ಟು ಮಕ್ಕಳು ಉಸಿರಾಟದ ಕಾಯಿಲೆಗಳಿಂದ ಬಳಲುತ್ತಿದ್ದು, ಹೆಚ್ಚಿನ ಶಿಶುಗಳ ಶ್ವಾಸಕೋಶಗಳು ಬೂದುಬಣ್ಣದಲ್ಲಿವೆ ಎಂಬ ವರದಿಯೊಂದನ್ನು ಅದು ಉಲ್ಲೇಖಿಸಿದೆ.
ರಾಜಧಾನಿ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಯುಮಾಲಿನ್ಯವು ಅಪಾಯಕಾರಿ ಮಟ್ಟಕ್ಕೆ ಹೋಗಿದ್ದು, ಅದರಲ್ಲಿ ಪಟಾಕಿಗಳ ಬಳಕೆಯೂ ಹೆಚ್ಚಿನ ಪಾಲು ಹೊಂದಿದೆ. ಆದ್ದರಿಂದ ಪಟಾಕಿ ಬಳಕೆ ಮೇಲೆ ನಿರ್ಬಂಧ ವಿಧಿಸಬೇಕು ಎಂದು ಅರ್ಜುನ್ ಗೋಪಾಲ್ ಎಂಬ ಬಾಲಕರ ಪರ ವಕೀಲರು ವಾದಿಸಿದ್ದರು.












Click it and Unblock the Notifications