ನಿವೃತ್ತಿಗೂ ಮುನ್ನ ದೀಪಕ್ ಮಿಶ್ರಾ ಕೈಯಲ್ಲಿ 5 ಮಹತ್ವದ ಪ್ರಕರಣ
ನವದೆಹಲಿ, ಸೆಪ್ಟೆಂಬರ್ 06: ತಮ್ಮ ನಿವೃತ್ತಿಗೂ ಮುನ್ನ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಒಟ್ಟು ಐದು ಮಹತ್ವದ ಪ್ರಕರಣಗಳ ವಿಚಾರಣೆ ನಡೆಸಲಿದ್ದಾರೆ.
ಅವುಗಳಲ್ಲಿ ಆಧಾರ್ ಮಾನ್ಯತೆ, ಅಯೋದ್ಹಯೆ ಪ್ರಕರಣಗಳೂ ಸೇರಿವೆ. ಇದೇ ಅಕ್ಟೋಬರ್ 2 ರಂದು ನಿವೃತ್ತರಾಗಲಿರುವ ದೀಪಕ್ ಮಿಶ್ರಾ ಅವರ ಉತ್ತರಾಧಿಕಾರಿಯನ್ನಾಗಿ ಹಿರಿಯ ನ್ಯಾಯಮೂರ್ತಿ ರಂಜನ್ ಗೋಗಾಯ್ ಅವರ ಹೆಸರನ್ನು ಈಗಾಗಲೇ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ.
ಹತ್ತು ಹಲವು ಮಹತ್ವದ ಪ್ರಕರಣಗಳಲ್ಲಿ ನ್ಯಾಯಯುತ ತೀರ್ಪು ನೀಡಿದ ಹೆಗ್ಗಳಿಕೆ ಪಡೆದ ದೀಪಕ್ ಮಿಶ್ರಾ ಅವರು ನಿವೃತ್ತಿಗೂ ಮುನ್ನ ವಿಚಾರಣೆ ನಡೆಸಲಿರುವ ಪ್ರಕರಣಗಳ ವಿವರ ಇಲ್ಲಿದೆ.

ಆಧಾರ್ ಮಾನ್ಯತೆ
ಹತ್ತು ಹಲವು ಸರ್ಕಾರಿ ಯೋಜನೆಗಳಿಗೆ, ಬ್ಯಾಂಕ್ ಖಾತೆ ಮತ್ತು ವೈಯಕ್ತಿಕ ವಿವರಗಳಿಗೆ ಕಡ್ಡಾಯವಾಗಿ ಆಧಾರ್ ಸಂಖ್ಯೆಯನ್ನು ಜೋಡಿಸುವುದರಿಂದ ಖಾಸಗೀತನಕ್ಕೆ ಧಕ್ಕೆಯಾಗುತ್ತದೆ ಎಂದು ಸಲ್ಲಿಸಿರುವ ಅರ್ಜಿಯ ವಿಚಾರಣೆ ಇದೇ ತಿಂಗಳು ನಡೆಯಲಿದ್ದು, ಆಧಾರ್ ಮಾನ್ಯತೆಯ ಕುರಿತು ತೀರ್ಪು ಹೊರಬರುವ ಸಾಧ್ಯತೆ ಇದೆ.

ಐಪಿಸಿಯ ಸೆಕ್ಷನ್ 377
ಐಪಿಸಿಯ ಸೆಕ್ಷನ್ 377ಅನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಎಲ್ ಜಿಬಿಟಿ ಸಂಘವು (ಸಲಿಂಗಿಗಳ ಸಂಘಟನೆ) ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್, ಅಂತಿಮ ತೀರ್ಪನ್ನು ಸೆ.6 ರಂದು ನೀಡಲಿದೆ.

ಅಯೋಧ್ಯೆ ವಿವಾದ
ಅಯೋಧ್ಯೆಯ ವಿವಾದಿತ ಸ್ಥಳದಲ್ಲೇ ಮುಸ್ಲಿಮರು ನಮಾಜು ಮಾಡಬೇಕೆಂದಿಲ್ಲ. ಬೇರೆ ಸ್ಥಳದಲ್ಲಿ ಮಾಡಬಹುದು ಎಂದು1994ರಲ್ಲಿ ನೀಡಲಾಗಿದ್ದು ತೀರ್ಪನ್ನು ವಿರೋಧಿಸಿ ಸಲ್ಲಿಸಿದ ಅರ್ಜಿಯ ತೀರ್ಪೂ ಈ ತಿಂಗಳು ಹೊರಬೀಳಲಿದೆ.

ಶಬರಿಮಲೆಗೆ ಮಹಿಳೆಯರ ಪ್ರವೇಶ ನಿಷೇಧ
ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶ ನಿಷೇಧಿಸಿರುವ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪೂ ಹೊರಬೀಳಲಿದೆ.
ದೇವಸ್ಥಾನದ ಆಡಳಿತ ಮಂಡಳಿಯ ನಿಯಮಾವಳಿ ಪ್ರಕಾರ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರು ದೇವಸ್ಥಾನದ ಆವರಣಕ್ಕೆ ಭೇಟಿ ನೀಡಲು ಅವಕಾಶವಿಲ್ಲ. ಋತುಮತಿಯಾಗುವ ವಯಸ್ಸಿನ ಹೆಣ್ಣುಮಕ್ಕಳು ದೇವಾಲಯದ ಆವರಣಕ್ಕೆ ಪ್ರವೇಶಿಸಿದರೆ ಮಂದಿರದ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ ಎನ್ನಲಾಗಿತ್ತು.

ಐಪಿಸಿ ಸೆಕ್ಷನ್ 497
ಐಪಿಸಿ ಸೆಕ್ಷನ್ 497ರ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ತೀರ್ಪು ಸಹ ಹೊರಬೀಳಲಿದೆ. ಮಹಿಳೆ ಇನ್ನೊಬ್ಬ ವ್ಯಕ್ತಿಯ ಪತ್ನಿ ಎಂದು ಗೊತ್ತಿದ್ದರೂ, ಆತನ ಒಪ್ಪಿಗೆ ಇಲ್ಲದೇ ಆಕೆಯೊಂದಿಗೆ ಲೈಂಗಿಕ ಸಂಬಂಧ ಬೆಳೆಸುವುದು ಅತ್ಯಾಚಾರ ಎಂದು ಸಾಬೀತಾಗುವುದಿಲ್ಲ. ವ್ಯಭಿಚಾರದ ಅಪರಾಧ ಎಂದು ಪರಿಗಣಿಸಲಾಗುತ್ತದೆ ಎಂದು ಈ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ದೀಪಕ್ ಮಿಶ್ರಾ ಹೇಳಿದ್ದರು. ಈ ಪ್ರಕರಣದಲ್ಲಿ ಅಪರಾಧಿಗೆ ಇದಕ್ಕೆ 5 ವರ್ಷದ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.












Click it and Unblock the Notifications