ಕಾಂಗ್ರೆಸ್ ನಿಂದ 10 ಸೀಟು ಗಿಟ್ಟಿಸಿಕೊಂಡಿದ್ದೇವೆ ಎಂದ ದೇವೇಗೌಡ
Recommended Video

ನವದೆಹಲಿ, ಮಾರ್ಚ್ 06 : ಕರ್ನಾಟಕದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ಕಗ್ಗಂಟು ಇನ್ನೂ ಬಗೆಹರಿದಂತಿಲ್ಲ. ಬುಧವಾರ ದೇವೇಗೌಡ ಅವರು ರಾಹುಲ್ ಅವರನ್ನು ಭೇಟಿಯಾಗಿದ್ದು, ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ.
ಈ ಬಗ್ಗೆ ಮಾಧ್ಯಮದೊಡನೆ ಮಾತನಾಡಿದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು, ಕರ್ನಾಟಕದಲ್ಲಿ ಇರುವ 28 ಸೀಟುಗಳಲ್ಲಿ ಜೆಡಿಎಸ್ 10 ಸೀಟುಗಳನ್ನು ಕಬಳಿಸುವಲ್ಲಿ ಸಫಲವಾಗಿದೆ ಎಂದು ಹೇಳಿದರು.
ಆದರೆ, ಅಂತಿಮ ನಿರ್ಧಾರವನ್ನು, ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಮತ್ತು ಜೆಡಿಎಸ್ ನ ರಾಷ್ಟ್ರೀಯ ವಕ್ತಾರ ಡ್ಯಾನಿಶ್ ಅಲಿ ಜೊತೆ ಮಾತನಾಡಿದ ನಂತರ ರಾಹುಲ್ ಗಾಂಧಿ ಅವರು ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.

ಕಾಂಗ್ರೆಸ್ ಜೊತೆ ಮೈತ್ರಿ ಸರಕಾರ ನಡೆಸುತ್ತಿರುವ ಜೆಡಿಎಸ್ 12 ಸೀಟುಗಳನ್ನು ಕಾಂಗ್ರೆಸ್ ಬಿಟ್ಟುಕೊಡಬೇಕೆಂದು ಪಟ್ಟು ಹಿಡಿದಿದೆ. ಆದರೆ, 12 ಕೊಡಲಾಗುವುದಿಲ್ಲ ಕೇವಲ 6 ಮಾತ್ರ ಬಿಟ್ಟುಕೊಡಲಾಗುವುದು ಎಂದು ಕಾಂಗ್ರೆಸ್ ಹಠ ಹಿಡಿದು ಕೂತಿದೆ.

ಸಮನ್ವಯ ಸಮಿತಿಯಲ್ಲಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಹಲವಾರು ಸಭೆಗಳು ನಡೆದರೂ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಇನ್ನೂ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ಕಾಂಗ್ರೆಸ್ ಬಲಿಷ್ಠವಾಗಿರುವ ಕೆಲವು ಕ್ಷೇತ್ರಗಳನ್ನು ಬಿಟ್ಟುಕೊಡಬೇಕೆಂದು ಜೆಡಿಎಸ್ ದುಂಬಾಲು ಬಿದ್ದಿರುವುದು ಕಾಂಗ್ರೆಸ್ಸಿಗೆ ಬಿಸಿತುಪ್ಪವಾದಂತಾಗಿದೆ.
ಚಿಕ್ಕಬಳ್ಳಾಪುರ, ಮೈಸೂರು ಸೇರಿದಂತೆ ಹಲವಾರು ಕ್ಷೇತ್ರಗಳನ್ನು ಬಿಟ್ಟುಕೊಡಲು ಜೆಡಿಎಸ್ ಬೇಡಿಕೆ ಇಟ್ಟಿರುವುದು ಕಾಂಗ್ರೆಸ್ಸಿಗೆ ಇರುಸುಮುರುಸು ತಂದಿದೆ. ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರ ಸಹಾಯದಿಂದ ಕಾಂಗ್ರೆಸ್ ಕಳೆದ ಚುನಾವಣೆಯಲ್ಲಿ ಗೆದ್ದಿತ್ತು. ಆದ್ದರಿಂದ, ಈಬಾರಿ ಆ ಕ್ಷೇತ್ರವನ್ನು ತನಗೆ ಬಿಟ್ಟುಕೊಡಬೇಕೆಂದು ಜೆಡಿಎಸ್ ಆಗ್ರಹಿಸುತ್ತಿದೆ. ಅದನ್ನು ಬಿಟ್ಟುಕೊಡಲು ಕಾಂಗ್ರೆಸ್ ಸುತಾರಾಂ ತಯಾರಿಲ್ಲ.
ಆದರೆ, ಹತ್ತಕ್ಕೆ ಹತ್ತೂ ಸೀಟುಗಳನ್ನು ಜೆಡಿಎಸ್ ಕಳೆದುಕೊಳ್ಳಲಿದೆ, ಡೆಪಾಸಿಟ್ ಕೂಡ ಸಿಗುವುದಿಲ್ಲ ಎಂದು ಟ್ವಿಟ್ಟಿಗರು ತಮಾಷೆ ಮಾಡುತ್ತಿದ್ದಾರೆ. ಸೀಟು ಹಂಚಿಕೆಯಲ್ಲಿ ಸಿದ್ದರಾಮಯ್ಯ ಗೆಲ್ಲುತ್ತಾರಾ ಅಥವಾ ದೇವೇಗೌಡರ ಹಠ ಗೆಲ್ಲುವುದಾ? ಅಥವಾ ಇಬ್ಬರೂ ಸ್ವತಂತ್ರವಾಗಿ ಸ್ಪರ್ಧೆ ಮಾಡಲು ನಿರ್ಧರಿಸುತ್ತಾರಾ?












Click it and Unblock the Notifications