ದೆಹಲಿ ಹಿಂಸಾಚಾರ: 10 ಗಂಟೆಗಳ ಕಾಲ ನಿಷೇಧಾಜ್ಞೆ ಸಡಿಲಿಕೆ
ನವದೆಹಲಿ, ಫೆಬ್ರವರಿ 28: ಈಶಾನ್ಯ ದೆಹಲಿಯಲ್ಲಿ ಹೇರಲಾಗಿದ್ದ ನಿಷೇಧಾಜ್ಞೆಯನ್ನು 10 ಗಂಟೆಗಳ ಕಾಲ ಸಡಿಲಿಕೆ ಮಾಡಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ಕಳೆದ 36 ಗಂಟೆಗಳಲ್ಲಿ ಈಶಾನ್ಯ ದೆಹಲಿಯಲ್ಲಿ ಯಾವುದೇ ಅಹಿತಕರ ಘಟನೆ ಕಂಡುಬರದ ಹಿನ್ನೆಲೆಯಲ್ಲಿ ಸೆಕ್ಷನ್ 144ರಡಿಯಲ್ಲಿ ಹೇರಲಾಗಿದ್ದ ನಿಷೇಧಾಜ್ಞೆಯನ್ನು ಶುಕ್ರವಾರ 10 ಗಂಟೆಗಳ ಕಾಲ ಸಡಿಲಿಸಲಾಗುವುದು ಎಂದು ಗೃಹ ಸಚಿವಾಲಯ ತಿಳಿಸಿದೆ.
ಈಶಾನ್ಯ ದೆಹಲಿಯಲ್ಲಿನ ಹಿಂಸಾಚಾರ ಕುರಿತು ನಾಗರಿಕರು, ಮಾಧ್ಯಮ ಪ್ರತಿನಿಧಿಗಳು ಮುಂದೆ ಬಂದು ಹೇಳಿಕೆಗಳನ್ನು, ಫೋಟೋಗಳನ್ನು, ವಿಡಿಯೊಗಳನ್ನು ಹಂಚಿಕೊಳ್ಳುವಂತೆ ನಿನ್ನೆ ದೆಹಲಿ ಪೊಲೀಸರು ಮನವಿ ಮಾಡಿಕೊಂಡಿದ್ದರು.

ದೆಹಲಿ ಹಿಂಸಾಚಾರ ಸಾವು-ನೋವು ಕುರಿತ ತನಿಖೆ ಪ್ರಗತಿಯಲ್ಲಿದೆ
ದೆಹಲಿ ಹಿಂಸಾಚಾರ ಮತ್ತು ಅಪಾರ ಸಾವು-ನೋವಿನ ಕುರಿತು ತನಿಖೆ ಪ್ರಗತಿಯಲ್ಲಿದ್ದು ಈ ಸಂಬಂಧ ಸುಮಾರು 514 ಶಂಕಿತರಲ್ಲಿ ಕೆಲವರನ್ನು ಬಂಧಿಸಲಾಗಿದ್ದು ಇನ್ನು ಕೆಲವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿಯನ್ನು ಬಂಧಿಸುವ ಸಾಧ್ಯತೆಯಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.

ದೆಹಲಿಯಲ್ಲಿ 39 ಮಂದಿ ಸಾವು
ಈಶಾನ್ಯ ದೆಹಲಿಯಲ್ಲಿ ಫೆಬ್ರವರಿ 23ರಂದು ಸಿಎಎ ವಿರುದ್ಧ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ಎರಡು ಗುಂಪುಗಳ ಮಧ್ಯೆ ತೀವ್ರ ಗಲಭೆ, ಕಲ್ಲುತೂರಾಟ ನಡೆದು ರಕ್ತಪಾತವಾಗಿ ಇದುವರೆಗೆ 39ಜನ ಮೃತಪಟ್ಟಿದ್ದಾರೆ. ಅವರಲ್ಲಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಮತ್ತು ಗುಪ್ತಚರ ಇಲಾಖೆಯ ಅಧಿಕಾರಿ ಅಂಕಿತ್ ಶರ್ಮ ಕೂಡ ಸೇರಿದ್ದಾರೆ.ಸುಮಾರು 200 ಮಂದಿಗೆ ಗಂಭೀರ ಗಾಯಗಳಾಗಿವೆ.

ಹಿಂಸಾಚಾರದ ವಿಡಿಯೋ, ಫೋಟೊಗಳಿದ್ದರೆ ಪೊಲೀಸರಿಗೆ ನೀಡಬಹುದು
ದೆಹಲಿ ಪೊಲೀಸ್ ಇಲಾಖೆಯ ಅಪರಾಧ ವಿಭಾಗದಡಿ ಎರಡು ವಿಶೇಷ ತನಿಖಾ ತಂಡವನ್ನು ತನಿಖೆಗೆ ನೇಮಿಸಲಾಗಿದೆ. ಈ ಘಟನೆಯನ್ನು ಯಾರಾದರೂ ಸ್ವತಃ ಕಂಡಿದ್ದರೆ, ಮೊಬೈಲ್ ನಲ್ಲಿ ಘಟನೆಯ ವಿಡಿಯೊ, ಫೋಟೋ ಹಿಡಿದಿದ್ದರೆ ಅಂತವರು ಮುಂದೆ ಬಂದು ಪೊಲೀಸರಿಗೆ ಹೇಳಿಕೆಗಳನ್ನು, ವಿಡಿಯೊ, ಫೋಟೋಗಳನ್ನು ಈಶಾನ್ಯ ದೆಹಲಿಯ ಡಿಸಿಪಿ ಕಚೇರಿಗೆ, ಸೀಲಂಪುರ್, ದೆಹಲಿ ಪೊಲೀಸ್ ಠಾಣೆಗಳಿಗೆ ಇನ್ನು ಏಳು ದಿನಗಳೊಳಗೆ ಕಚೇರಿ ಅವಧಿಯಲ್ಲಿ ನೀಡಬಹುದು ಎಂದು ಅಪರಾಧ ವಿಭಾಗದ ಹೆಚ್ಚುವರಿ ಅಧಿಕಾರಿ ಬಿ ಕೆ ಸಿಂಗ್ ತಿಳಿಸಿದ್ದಾರೆ.

ದೆಹಲಿ ನೂತನ ಪೊಲೀಸ್ ಆಯುಕ್ತರಾಗಿ ಶ್ರೀವಾಸ್ತವ ನೇಮಕ
ಹಿರಿಯ ಐಪಿಎಸ್ ಅಧಿಕಾರಿ ಎಸ್ ಎನ್ ಶ್ರೀವಾಸ್ತವ ಅವರನ್ನು ದೆಹಲಿ ಪೊಲೀಸ್ ಆಯುಕ್ತರನ್ನಾಗಿ ಕೇಂದ್ರ ಗೃಹ ಸಚಿವಾಲಯ ನೇಮಕ ಮಾಡಿದೆ. ದೆಹಲಿಯಲ್ಲಿ ವಿವಾದಾತ್ಮಕ ಪೌರತ್ವ ಕಾಯ್ದೆಗೆ ಸಂಬಂಧಿಸಿದಂತೆ ಉಂಟಾದ ಹಿಂಸಾಚಾರವನ್ನು ನಿಯಂತ್ರಿಸಲು ಕೇಂದ್ರೀಯ ಮೀಸಲು ಪೊಲೀಸ್ ಪಡೆಯಿಂದ ಶ್ರೀವಾಸ್ತವ ಅವರನ್ನು ದೆಹಲಿಗೆ ಕರೆಸಿಕೊಂಡಿದ್ದ ಗೃಹ ಸಚಿವಾಲಯ ಅವರನ್ನು ವಿಶೇಷ ಆಯುಕ್ತರನ್ನಾಗಿ ನೇಮಿಸಿತ್ತು.












Click it and Unblock the Notifications