ಈಶಾನ್ಯ ದೆಹಲಿ ಹೊತ್ತಿ ಉರಿದರೂ ಜನ ಮಾನವೀಯತೆ ಮರೆತಿಲ್ಲ
ನವದೆಹಲಿ, ಫೆಬ್ರವರಿ 27 : ಪೌರತ್ವ ತಿದ್ದುಪಡಿ ಪರ-ವಿರೋಧ ಹೋರಾಟದಲ್ಲಿ ಈಶಾನ್ಯ ದೆಹಲಿ ಹೊತ್ತಿ ಉರಿದಿದೆ. ಇದುವರೆಗೂ 38 ಜನರು ಮೃತಪಟ್ಟಿದ್ದಾರೆ. ಹೋರಾಟ ಕೋಮು ಗಲಭೆ ರೂಪ ಪಡೆದುಕೊಂಡು ಜನರಲ್ಲಿ ಆತಂಕ ಮೂಡಿಸಿತ್ತು.
Recommended Video
ದೆಹಲಿ ಹೊತ್ತಿ ಉರಿದರೂ ಜನರು ಮಾನವೀಯತೆಯನ್ನು ಮರೆತಿಲ್ಲ. ರಾಜಕೀಯ ಪಕ್ಷಗಳು ಘರ್ಷಣೆಯ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದರು ಜನರು ತಮ್ಮ ಅಕ್ಕ-ಪಕ್ಕದ ಜನರ ಸಹಾಯಕ್ಕೆ ನಿಂತಿದ್ದಾರೆ. ಈ ಮೂಲಕ ಮಾನವೀಯತೆ ಮೆರೆದಿದ್ದಾರೆ.
ದೆಹಲಿಯಲ್ಲಿ ಭಾನುವಾರದಿಂದ ನಡೆದ ಹಿಂಸಾಚಾರದಿಂದ ಇದುವರೆಗೂ 200 ಜನರು ಗಾಯಗೊಂಡಿದ್ದಾರೆ. ಗುರುತೇಜ್ ಬಹದ್ದೂರ್ ಸೇರಿದಂತೆ ವಿವಿಧ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಸಂಬಂಧಿಕರು ಆಸ್ಪತ್ರೆಗೆ ಬರುತ್ತಿದ್ದಾರೆ.

ಗಲಭೆಯ ಕಾರಣ ದೆಹಲಿಯ ಹಲವು ಪ್ರದೇಶಗಳಲ್ಲಿ ಅಂಗಡಿ, ಹೋಟಲ್ ಮುಚ್ಚಲಾಗಿದೆ. ಸಂಬಂಧಿಕರನ್ನು ನೋಡಲು ಬರುವ ಜನರು ಉಟಕ್ಕಾಗಿ ಪರದಾಡುತ್ತಿದ್ದಾರೆ. ಗುರುತೇಜ್ ಬಹದ್ದೂರ್ ಆಸ್ಪತ್ರೆ ಬಳಿ ಸ್ಥಳೀಯರು ಗಾಯಗೊಂಡವರ ಸಂಬಂಧಿಕರಿಗೆ ಊಟವನ್ನು ನೀಡುತ್ತಿದ್ದಾರೆ.
ಜಾತಿ, ಮತ, ಪಂಥ, ರಾಜಕೀಯ ಪಕ್ಷಗಳು ಇಲ್ಲಿ ಲೆಕ್ಕಕ್ಕೆ ಇಲ್ಲ. ಸ್ಥಳೀಯ ಜನರ ಮಾನವೀಯತೆ, ತುತ್ತು ಅನ್ನಕಾಗಿ ಪರದಾಡುತ್ತಿರುವ ಜನರ ಹಸಿವು ಮಾತ್ರ ಇಲ್ಲಿ ಲೆಕ್ಕಕ್ಕೆ ಸೇರುತ್ತದೆ. ಈ ಸೇವೆಯನ್ನು ಯಾರೂ ಹೇಳಿ ಮಾಡಿಸುತ್ತಿಲ್ಲ. ಇಲ್ಲಿ ರಾಜಕೀಯ ಪಕ್ಷದವರ ಕೈವಾಡವಿಲ್ಲ.
ಆಸ್ಪತ್ರೆ ಸಮೀಪ ಆಹಾರ ವಿತರಣೆ ಮಾಡುತ್ತಿರುವ ಜನರು "ಇದು ಯಾವುದೇ ರಾಜಕೀಯ ಪಕ್ಷದ ಕೆಲಸವಲ್ಲ. ನಮ್ಮ ಸ್ವ ಪ್ರೇರಣೆಯಿಂದ ಇದನ್ನು ಮಾಡುತ್ತಿದ್ದೇವೆ" ಎಂದು ಹೇಳಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬುಧವಾರ ವಿಧಾನಸಭೆಯಲ್ಲಿ, "ದೆಹಲಿ ಜನರು ಶಾಂತಿ ಪ್ರಿಯರು. ತಮ್ಮ ಮುಂದಿನ ಭವಿಷ್ಯಕ್ಕಾಗಿ ಅವರು ದುಡಿಯುತ್ತಿದ್ದಾರೆ. ಗಲಭೆ, ಹಿಂಸಾಚಾರದ ಹಿಂದೆ ಯಾರಿದ್ದಾರೆ? ಎಂದು ತಿಳಿಯುತ್ತಿಲ್ಲ. ದೆಹಲಿ ಜನರು ಇದನ್ನು ಮಾಡುತ್ತಿಲ್ಲ" ಎಂದು ಹೇಳಿದ್ದರು.
ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಮೃತಪಟ್ಟವರ ಕುಟುಂಬಕ್ಕೆ ದೆಹಲಿ ಸರ್ಕಾರ 10 ಲಕ್ಷ ರೂ. ಪರಿಹಾರವನ್ನು ಘೋಷಣೆ ಮಾಡಿದೆ. ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಲಾಗಿದೆ.












Click it and Unblock the Notifications