ಗುಪ್ತಚರ ಇಲಾಖೆ ಅಧಿಕಾರಿ ಸಾವು: ಎಎಪಿ ಮುಖಂಡನ ಮೇಲೆ ಎಫ್ಐಆರ್
ನವದೆಹಲಿ, ಫೆಬ್ರವರಿ 27: ದೆಹಲಿ ಹಿಂಸಾಚಾರದಲ್ಲಿ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಯೊಬ್ಬರು ಮೃತಪಟ್ಟಿದ್ದು, ಈ ಪ್ರಕರಣದಲ್ಲಿ ಎಎಪಿಯ ಕಾರ್ಪೊರೇಟರ್ ತಾಹಿರ್ ಹುಸೇನ್ ಮೇಲೆ ಎಫ್ಐಆರ್ ದಾಖಲಾಗಿದೆ.
ಗುಪ್ತಚರ ಇಲಾಖೆ ಅಧಿಕಾರಿ ಅಂಕಿತ್ ಶರ್ಮಾ ಎಂಬುವರ ಶವ ಈಶಾನ್ಯ ದೆಹಲಿಯ ಚಾಂದ್ ಬಾಗ್ ಪ್ರದೇಶದಲ್ಲಿ ಪತ್ತೆ ಆಗಿತ್ತು. ಪೊಲೀಸರ ಪ್ರಕಾರ ಕೆಲಸದಿಂದ ಮನೆಗೆ ವಾಪಸ್ಸಾಗುತ್ತಿದ್ದ ಅಂಕಿತ್ ಶರ್ಮಾ ಮೇಲೆ ಕಲ್ಲೆಸೆದು ಗಾಯಗೊಳಿಸಿ ಆತನನ್ನು ಹೊಡೆದು ಕೊಂದು ಶವವನ್ನು ಮೋರಿಗೆ ಎಸೆಯಲಾಗಿದೆ.
ಅಂಕಿತ್ ಶರ್ಮಾ ತಂದೆ ಸಹ ದೆಹಲಿ ಪೊಲೀಸ್ ಅಧಿಕಾರಿಯಾಗಿದ್ದು, 'ನನ್ನ ಮಗನನ್ನು ಎಎಪಿ ಮುಖಂಡರು, ಕಾರ್ಯಕರ್ತರು ಕೊಂದಿದ್ದಾರೆ' ಎಂದು ಆರೋಪಿಸಿದ್ದಾರೆ. ಅಂಕಿತ್ ಶರ್ಮಾ ದೇಹದಲ್ಲಿ ಗುಂಡಿನ ಗುರುತು ಇದೆ ಎನ್ನಲಾಗಿದೆ.

ಅಂಕಿತ್ ಶರ್ಮಾ ಮೇಲೆ ದಾಳಿ ಆದ ವಿಡಿಯೋ ಹರಿದಾಡುತ್ತಿದ್ದು, ಅದರಲ್ಲಿ ಎಎಪಿ ಕಾರ್ಪೊರೇಟರ್ ತಾಹಿರ್ ಹುಸೇನ್ ಸಹ ಇದ್ದಾರೆ ಎನ್ನಲಾಗಿದೆ. ತಾಹಿರ್ ಹುಸೇನ್ ಗೆ ಸೇರಿದ ಮನೆಯ ಮೇಲಿನಿಂದಲೇ ಅಂಕಿತ್ ಮೇಲೆ ಕಲ್ಲು ತೂರಾಟ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ತನ್ನ ಮೇಲೆ ಮಾಡಲಾಗಿರುವ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡಿ ವಿಡಿಯೋ ಬಿಡುಗಡೆ ಮಾಡಿರುವ ತಾಹಿರ್ ಹುಸೇನ್, ಘಟನೆಗೂ ತಮಗೂ ಸಂಬಂಧವಿಲ್ಲವೆಂದು, ವೈರಲ್ ಆಗಿರುವ ವಿಡಿಯೋದಲ್ಲಿ ಇರುವುದು ತಾವಲ್ಲವೆಂದು ಹೇಳಿದ್ದಾರೆ.
'ಬಿಜೆಪಿಯ ಕಪಿಲ್ ಮಿಶ್ರಾ ಹೇಳಿಕೆ ನಂತರವೇ ಹಿಂಸಾಚಾರ ಭುಗಿಲೆದ್ದಿದ್ದು, ಗಲಭೆಕೋರರು ನನ್ನ ಕಚೇರಿಯ ಬಾಗಿಲು ಮುರಿದು ನನ್ನ ಕಟ್ಟಡದ ಮೇಲೆ ಏರಿ ಕಲ್ಲು ತೂರಾಟ ಮಾಡಿದ್ದಾರೆ' ಎಂದು ಹೇಳಿದ್ದಾರೆ.
ತಾಹಿರ್ ಹುಸೇನ್ ಮೇಲೆ ಎಫ್ಐಆರ್ ದಾಖಲಾಗಿರುವ ಕಾರಣ ಅವರನ್ನು ಎಎಪಿ ಪಕ್ಷದಿಂದ ಅಮಾನತ್ತು ಮಾಡಲಾಗಿದೆ.












Click it and Unblock the Notifications