ತಿಹಾರ್ ಜೈಲಲ್ಲಿ 4 ಗೊಂಬೆಗಳಿಗೆ ಗಲ್ಲುಶಿಕ್ಷೆ ವಿಧಿಸಿದ್ಯಾಕೆ ಗೊತ್ತೆ?
ನವದೆಹಲಿ, ಜನವರಿ.31: ನಿರ್ಭಯಾ ಅತ್ಯಾಚಾರ ಕೊಲೆ ಪ್ರಕರಣದ ದೋಷಿಗಳಿಗೆ ಗಲ್ಲುಶಿಕ್ಷೆ ವಿಧಿಸಲು ಇನ್ನೊಂದು ದಿನವಷ್ಟೇ ಬಾಕಿ. ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ರಾತ್ರಿ ಕಳೆದು ಬೆಳಕು ಮೂಡಿದರೆ ನಾಲ್ವರು ಅಪರಾಧಿಗಳಿಗೆ ದೆಹಲಿಯ ತಿಹಾರ್ ಜೈಲಿನಲ್ಲಿ ಗಲ್ಲುಶಿಕ್ಷೆ ಜಾರಿಯಾಗಬೇಕು.
ದೋಶಿಗಳಾದ ಮುಕೇಶ್ (32), ಪವನ್ ಗುಪ್ತಾ (25), ವಿನಯ್ ಕುಮಾರ್ ಶರ್ಮಾ (26), ಅಕ್ಷಯ್ ಕುಮಾರ್ ಸಿಂಗ್ (31) ಈ ನಾಲ್ವರು ಅಪರಾಧಿಗಳಿಗೆ ಫೆಬ್ರವರಿ.01ರಂದು ಬೆಳಗ್ಗೆ ಗಲ್ಲುಶಿಕ್ಷೆ ವಿಧಿಸಬೇಕು.
ನಿರ್ಭಯಾ ಕೇಸ್: ತಿಹಾರ್ ಜೈಲಿನಿಂದ ಹ್ಯಾಂಗ್ಮನ್ ಪವನ್ ಗೆ ಬುಲಾವ್
ದೋಷಿಗಳಿಗೆ ಗಲ್ಲುಶಿಕ್ಷೆ ವಿಧಿಸುವ ಮುನ್ನ ದಿನವಾದ ಶುಕ್ರವಾರ ದೆಹಲಿಯ ತಿಹಾರ್ ಜೈಲಿನಲ್ಲಿ ಪ್ರಾಯೋಗಿಕವಾಗಿ ಗಲ್ಲುಶಿಕ್ಷೆಯನ್ನು ಜಾರಿಗೊಳಿಸಲಾಯಿತು. ನಾಲ್ಕು ಗೊಂಬೆಗಳನ್ನು ಬಳಸಿಕೊಂಡು ಮರಣದಂಡನೆ ಶಿಕ್ಷೆಯನ್ನು ಜಾರಿಗೊಳಿಸಲಾಯಿತು.
ತಿಹಾರ್ ಜೈಲಿನಲ್ಲಿ ಗೊಂಬೆಗಳಿಗೆ ಮರಣದಂಡನೆ
ಶುಕ್ರವಾರ ಬೆಳಗ್ಗೆ ಅವಶೇಷಗಳು ಹಾಗೂ ಕಲ್ಲನ್ನು ತುಂಬಿದ ನಾಲ್ಕೂ ಗೊಂಬೆಗಳನ್ನು ನೇಣುಗಂಬಕ್ಕೆ ಏರಿಸಲಾಯಿತು. ಇದಕ್ಕೂ ಮೊದಲು ನಾಲ್ವರು ಅಪರಾಧಿಗಳ ತೂಕವನ್ನು ದಾಖಲಿಸಿಕೊಂಡು, ಅಷ್ಟೇ ತೂಕದ ಕಲ್ಲುಗಳನ್ನು ಗೊಂಬೆಗಳಲ್ಲಿ ತುಂಬಲಾಗಿತ್ತು. ಪ್ರಾಯೋಗಿಕವಾಗಿ ನಡೆದ ಗಲ್ಲುಶಿಕ್ಷೆ ವಿಧಿಸುವ ಸಮಯದಲ್ಲಿ ಜೈಲಿನ ಅಧಿಕಾರಿಗಳು ಉಪಸ್ಥಿತರಿದ್ದರು.
ತಿಹಾರ್ ಜೈಲಿಗೆ ತೆರಳಿರುವ ಹ್ಯಾಂಗ್ ಮ್ಯಾನ್ ಪವನ್
ದೆಹಲಿಯ ತಿಹಾರ್ ಜೈಲು ಅಧಿಕಾರಿಗಳು ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸುವ ಹ್ಯಾಂಗ್ ಮ್ಯಾನ್ ಪವನ್ ಜಲ್ಲಾದ್ ಗೆ ಬುಲಾವ್ ನೀಡಿದ್ದಾರೆ. ಈಗಾಗಲೇ ತಿಹಾರ್ ಜೈಲು ತಲುಪಿರುವ ಹ್ಯಾಂಗ್ ಮ್ಯಾನ್, ಶನಿವಾರವೇ ನಾಲ್ವರು ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸುವ ಸಾಧ್ಯತೆಯಿದೆ.
"ನಿರ್ಭಯಾ ನೀಚರ ಗಲ್ಲುಶಿಕ್ಷೆಯನ್ನು ದೇಶವೇ ಎದುರು ನೋಡುತ್ತಿದೆ"
ಇನ್ನು, ತಿಹಾರ್ ಜೈಲು ತಲುಪಿರುವ ಹ್ಯಾಂಗ್ ಮ್ಯಾನ್ ಪವನ್ ಜಲ್ಲಾದ್, ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ನಾಲ್ವರು ದೋಷಿಗಳಿಗೆ ಗಲ್ಲುಶಿಕ್ಷೆ ವಿಧಿಸುವುದನ್ನು ನಿರ್ಭಯಾ ಪೋಷಕರು ಸೇರಿದಂತೆ ಇಡೀ ದೇಶವೇ ಎದುರು ನೋಡುತ್ತಿದೆ ಎಂದು ಪವನ್ ಜಲ್ಲಾದ್ ತಿಳಿಸಿದರು.
ಸಾಲು ಸಾಲು ಅರ್ಜಿ ಸಲ್ಲಿಸುತ್ತಿರುವ ಅಪರಾಧಿಗಳು
ನಾಲ್ವರು ಅಪರಾಧಿಗಳ ಪೈಕಿ ಒಬ್ಬೊಬ್ಬರೇ ಸುಪ್ರೀಂಕೋರ್ಟ್ ಮತ್ತು ದೆಹಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಫೆಬ್ರವರಿ.01ರಂದು ಗಲ್ಲುಶಿಕ್ಷೆಗೆ ತಡೆ ನೀಡಬೇಕೆಂದು ಗುರುವಾರ ಅಪರಾಧಿ ಅಕ್ಷಯ್ ಸಿಂಗ್ ದೆಹಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾನೆ. ಮತ್ತೊಬ್ಬ ಅಪರಾಧಿ ವಿನಯ್ ಶರ್ಮಾ ಗಲ್ಲುಶಿಕ್ಷೆಯಿಂದ ಕ್ಷಮಾದಾನ ನೀಡುವಂತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಬುಧವಾರ ಮನವಿ ಮಾಡಿಕೊಂಡಿದ್ದಾನೆ. ಈ ಹಿಂದೆ ಮುಕೇಶ್ ಸಿಂಗ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿಗಳು ತಿರಸ್ಕರಿಸಿದ್ದರು. ರಾಷ್ಟ್ರಪತಿಗಳ ನಿರ್ಧಾರವನ್ನು ಪ್ರಶ್ನಿಸಿ ಮುಕೇಶ್ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ಬುಧವಾರವೇ ಸುಪ್ರೀಂಕೋರ್ಟ್ ಕೂಡಾ ತಿರಸ್ಕರಿಸಿತ್ತು.