ದೆಹಲಿ ಸರ್ಕಾರಕ್ಕೆ ವಕೀಲರು ಕೊಟ್ಟರು 10 ದಿನಗಳ ಗಡುವು
ನವದೆಹಲಿ, ನವೆಂಬರ್.09: ದೆಹಲಿಯಲ್ಲಿ ನಡೆದ ವಕೀಲರು ಹಾಗೂ ಪೊಲೀಸರ ನಡುವಿನ ಘರ್ಷಣೆ ವಿಚಾರಕ್ಕೆ ನಯಾ ಟ್ವಿಸ್ಟ್ ಸಿಕ್ಕಿದೆ. ಕಳೆದ ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಿದ್ದ ವಕೀಲರು ಇದೀಗ ಸಾಫ್ಟ್ ಆಗಿದ್ದಾರೆ. ಮುಂದಿನ ಹತ್ತು ದಿನಗಳವರೆಗೂ ಕೋರ್ಟ್ ಕಾರ್ಯ ಕಲಾಪ ನಡೆಸುವುದಾಗಿ ತಿಳಿಸಿದ್ದಾರೆ.
ದೆಹಲಿಯಲ್ಲಿ ಸಭೆ ನಡೆಸಿದ ಬಿಸಿಐ ಸಹಕಾರಿ ಸಮಿತಿ ಹಾಗೂ ದೆಹಲಿಯ ಬಾರ್ ಕೋಡ್ ಸಭೆ ನಡೆಸಿ ಈ ತೀರ್ಮಾನವನ್ನು ತೆಗೆದುಕೊಂಡಿದೆ. ಕಳೆದ ಐದು ದಿನಗಳಿಂದ ನಡೆಯುತ್ತಿದ್ದ ಪ್ರತಿಭಟನೆಯನ್ನು ಕೈ ಬಿಡಲು ವಕೀಲರು ನಿರ್ಧರಿಸಿದ್ದಾರೆ. ಜೊತೆಗೆ ಕಕ್ಷಿದಾರರ ಹಿತದೃಷ್ಟಿ ಹಾಗೂ ಕಾನೂನು ವ್ಯವಸ್ಥೆಯನ್ನು ಗೌರವಿಸುವ ಉದ್ದೇಶದಿಂದ ಮುಂದಿನ ಹತ್ತುಗಳ ಕಾಲ ಕೋರ್ಟ್ ಕಾರ್ಯ ಕಲಾಪದಲ್ಲಿ ಭಾಗಿಯಾಗುವುದಾಗಿ ತಿಳಿಸಿದ್ದಾರೆ. ಮುಂದಿನ ಹತ್ತು ದಿನಗಳವರೆಗೂ ದೆಹಲಿಯಲ್ಲಿ ಕೋರ್ಟ್ ನ ಕಾರ್ಯ ಕಲಾಪಗಳು ಎಂದಿನಂತೆ ನಡೆಯಲಿವೆ ಎಂದು ವಕೀಲರು ತಿಳಿಸಿದ್ದಾರೆ.


ದೇಶಾದ್ಯಂತ ಹೋರಾಟದ ಎಚ್ಚರಿಕೆ
ದೆಹಲಿಯ ತೀಸ್ ಹಜಾರಿ ಕೋರ್ಟ್ ಕಾಂಪ್ಲೆಕ್ಸ್ ನಲ್ಲಿ ನಡೆದ ಘಟನೆಗೆ ಕಾರಣರು ಯಾರು ಎಂಬುದನ್ನು ತಪ್ಪೆ ಮಾಡಬೇಕು. ಮುಂದಿನ ಹತ್ತು ದಿನಗಳಲ್ಲಿ ತಪ್ಪಿತಸ್ಥರನ್ನು ಬಂಧಿಸಬೇಕು. ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡಬೇಕು. ಇಲ್ಲದಿದ್ದರೆ ದೆಹಲಿ ಮಾತ್ರವಲ್ಲ ದೇಶಾದ್ಯಂತ ವಕೀಲರು ಪ್ರತಿಭಟನೆ ನಡೆಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಕೋರ್ಟ್ ಗಳಲ್ಲಿ ಕರ್ತವ್ಯಕ್ಕೆ ಹಾಜರ್ ಆಗುತ್ತಾರೆ ವಕೀಲರು
ಕಳೆದ ಸೋಮವಾರದಿಂದ ದೆಹಲಿಯಲ್ಲಿ ಕಾರ್ಯಕಲಾಪಗಳೆಲ್ಲ ಬಂದ್ ಆಗಿದ್ದವು. ಪೊಲೀಸರ ವಿರುದ್ಧ ವಕೀಲರೇ ಬೀದಿಗೆ ಇಳಿದು ಪ್ರತಿಭಟನೆ ನಡೆಸಿದರು. ಐದು ದಿನಗಳ ನಂತರ ಪ್ರತಿಭಟನೆಯನ್ನು ವಾಪಸ್ ಪಡೆಯಲಾಗಿದೆ. ಇನ್ನೆರೆಡು ದಿನಗಳಲ್ಲಿ ಅಂದರೆ ಸೋಮವಾರದಿಂದ ಕೋರ್ಟ್ ಕಾರ್ಯ ಕಲಾಪಗಳು ಎಂದಿನಂತೆ ಆರಂಭವಾಗಲಿವೆ. ಆದರೆ, ಅದು ಕೂಡಾ ಹತ್ತು ದಿನಗಳ ಮಟ್ಟಿಗೆ ಮಾತ್ರ. ಅಷ್ಟರಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸದಿದ್ದರೆ, ದೇಶಾದ್ಯಂತ ಪ್ರತಿಭಟನೆ ನಡೆಸಲು ವಕೀಲರ ಸಂಘ ನಿರ್ಧರಿಸಿದೆ.

ಆರಕ್ಷಕರ ಮೇಲೆ ದಾಳಿ ನಡೆಸಿದ್ದರಂತೆ ವಕೀಲರು
ದೆಹಲಿಯಲ್ಲಿ ವಕೀಲರು ಅಷ್ಟೇ ಅಲ್ಲ. ದೆಹಲಿ ಪೊಲೀಸರು ಕೂಡಾ ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದರು. ಖಾಕಿ ಕಳಚಿಟ್ಟು ಸಾಮಾನ್ಯ ಉಡುಪು ಧರಿಸಿ ಬೀದಿಗಿಳಿದ ಪೊಲೀಸರು, ನಾವೂ ಕೂಡಾ ಮನುಷ್ಯರೇ. ನಮಗೂ ಕೂಡಾ ರಕ್ಷಣೆ ಬೇಕಿದೆ. ರಾಷ್ಟ್ರ ರಾಜಧಾನಿಯಲ್ಲಿ ನಿತ್ಯ ಅಪಾಯವನ್ನು ನಾವು ಮೈ ಮೇಲೆ ಎಳೆದುಕೊಳ್ಳುತ್ತೇವೆ. ಸಾರ್ವಜನಿಕರಿಗೆ ಭದ್ರತೆ ನೀಡುವ ನಮಗೂ ಭದ್ರತೆಯ ಅಗತ್ಯವಿದೆ. ನಾವೇನು ಪಂಚಿಂಗ್ ಬ್ಯಾಗ್ ಗಳಲ್ಲ ಎಂದು ಪೊಲೀಸರೇ ಪ್ರತಿಭಟನೆಗೆ ಇಳಿದಿದ್ದರು. ದೆಹಲಿ ಪೊಲೀಸ್ ಆಯುಕ್ತರ ಪ್ರಧಾನ ಕಚೇರಿ ಎದುರು ಪೊಲೀಸರು ಪ್ರತಿಭಟನೆ ನಡೆಸಿದ್ದರು.

ಘಟನೆ ಕುರಿತು ತನಿಖೆ, ಆರೋಪಿ ಬಂಧನಕ್ಕೆ ಎಸ್ಐಟಿ ರಚನೆ
ದೆಹಲಿಯ ತೀಸ್ ಹಜಾರಿ ಕೋರ್ಟ್ ಕಾಂಪ್ಲೆಕ್ಸ್ ಆವರಣದಲ್ಲಿ ಪಾರ್ಕಿಂಗ್ ವಿಚಾರಕ್ಕೆ ಗಲಾಟೆ ನಡೆದಿತ್ತು. ಈ ವೇಳೆ ಪೊಲೀಸರ ಮೇಲೆ ವಕೀಲರು ಹಲ್ಲೆ ನಡೆಸಿದ್ದರು ಎನ್ನಲಾಗಿತ್ತು. ನಂತರದಲ್ಲಿ ಇದೇ ಘಟನೆ ಪೊಲೀಸರು ಹಾಗೂ ವಕೀಲರ ನಡುವ ಭಾರಿ ಘರ್ಷಣೆಗೆ ಕಾರಣವಾಗಿತ್ತು. ಘರ್ಷಣೆಯಲ್ಲಿ ಎಡಿಷನಲ್ ಡೆಪ್ಯುಟಿ ಕಮಿಷನರ್ ಸೇರಿದಂತೆ 20ಕ್ಕೂ ಹೆಚ್ಚು ಪೊಲೀಸರಿಗೆ ಗಂಭೀರ ಗಾಯಗಳಾಗಿದ್ದವು. ಎಂಟು ಮಂದಿ ವಕೀಲರು ಕೂಡಾ ಗಂಭೀರವಾಗಿ ಗಾಯಗೊಂಡಿದ್ದರು. ಈ ಸಂಬಂಧ ತನಿಖೆಗೆ ಈಗಾಗ್ಲೆ ವಿಶೇಷ ತನಿಖಾ ತಂಡವನ್ನು ರಚನೆ ಮಾಡಲಾಗಿದೆ.












Click it and Unblock the Notifications