ಕೊರೊನಾವೈರಸ್ ನಿಯಂತ್ರಿಸಲು ಕನ್ವರ್ ಯಾತ್ರೆ ರದ್ದುಗೊಳಿಸಿದ ದೆಹಲಿ ಸರ್ಕಾರ
ನವದೆಹಲಿ, ಜುಲೈ 18: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ನಿಯಂತ್ರಿಸುವ ಉದ್ದೇಶದಿಂದ ರಾಷ್ಟ್ರ ರಾಜಧಾನಿಯಲ್ಲಿ ಕನ್ವರ್ ಯಾತ್ರೆಗೆ ಈ ವರ್ಷ ನಿರ್ಬಂಧ ವಿಧಿಸಲು ದೆಹಲಿ ವಿಪತ್ತು ನಿರ್ವಹಣೆ ಪ್ರಾಧಿಕಾರ ನಿರ್ಧರಿಸಿದೆ.
"ಜುಲೈ 25ರಿಂದ ಆರಂಭಗೊಳ್ಳಲಿರುವ ಕನ್ವರ್ ಯಾತ್ರೆ 2021ಕ್ಕೆ ಸಂಬಂಧಿಸಿದಂತೆ ನವದೆಹಲಿಯಲ್ಲಿ ಯಾವುದೇ ರೀತಿ ಆಚರಣೆಗಳು, ಸಂಪ್ರದಾಯ ಹಾಗೂ ಸಾರ್ವಜನಿಕವಾಗಿ ಜನರನ್ನು ಸೇರಿಸುವುದಕ್ಕೆ ಅವಕಾಶ ಇರುವುದಿಲ್ಲ," ಎಂದು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ಉತ್ತರ ಪ್ರದೇಶದಲ್ಲಿ ಕನ್ವರ್ ಯಾತ್ರೆ ರದ್ದುಗೊಳಿಸಿದ ದಿನವೇ ನವದೆಹಲಿಯಲ್ಲೂ ಕನ್ವರ್ ಯಾತ್ರೆಗೆ ನಿರ್ಬಂಧ ವಿಧಿಸಲಾಗುತ್ತಿದೆ. ಕಳೆದ ವಾರವೇ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೊರೊನಾವೈರಸ್ ಸೋಂಕಿನಿಂದ ರಕ್ಷಿಸಿಕೊಳ್ಳುವುದಕ್ಕೆ ಎಂಥಾ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೂ ಸಿದ್ಧ ಎಂದು ಹೇಳಿದ್ದರು.

ಮೂರು ರಾಜ್ಯಗಳಲ್ಲಿ ಭಕ್ತರ ಕಾಲ್ನಡಿಗೆ:
ಸಾಮಾನ್ಯವಾಗಿ ಆಗಸ್ಟ್ ಮೊದಲ ವಾರದಿಂದ ಆರಂಭಗೊಳ್ಳಲಿರುವ ಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯ ಕನ್ವರಿಯರು ಮತ್ತು ಶಿವನ ಭಕ್ತರು ಉತ್ತರ ಪ್ರದೇಶ, ಹರಿಯಾಣ, ದೆಹಲಿಯ ಮೂಲಕ ಕಾಲ್ನಡಿಗೆಯಲ್ಲಿ ಉತ್ತರಾಖಂಡದ ಹರಿದ್ವಾರಕ್ಕೆ ತೆರಳಿ ಪವಿತ್ರ ಗಂಗಾ ಜಲವನ್ನು ಸಂಗ್ರಹಿಸಿದ ಅದನ್ನು ಶಿವನ ಪಾದಕ್ಕೆ ಅರ್ಪಿಸುತ್ತಾರೆ.
ಸಾಮಾನ್ಯವಾಗಿ ಜುಲೈ ಕೊನೆಯ ವಾರದ ಶ್ರಾವಣ ಮಾಸದ ಪ್ರಾರಂಭದಲ್ಲಿ 15 ದಿನಗಳವರೆಗೂ ಈ ಯಾತ್ರೆ ನಡೆಸಲಾಗುತ್ತದೆ. ಕನ್ವರ್ ಯಾತ್ರೆ ವೇಳೆಯಲ್ಲಿ ಗಂಗಾ ನದಿ ನೀರನ್ನು ಶಿವನ ದೇವಾಲಯಗಳಲ್ಲಿ ಅರ್ಪಿಸಲು ನೆರೆಯ ರಾಜ್ಯಗಳಾದ ಉತ್ತರ ಪ್ರದೇಶ, ಹರಿಯಾಣ, ಪಂಜಾಬ್, ದೆಹಲಿ ಮತ್ತು ಹಿಮಾಚಲ ಪ್ರದೇಶದ ಕೋಟ್ಯಾಂತರ ಭಕ್ತರು ಅಥವಾ ಕನ್ವರಿಯರು ಪವಿತ್ರ ನಗರವಾದ ಹರಿದ್ವಾರದಲ್ಲಿ ಒಟ್ಟುಗೂಡುತ್ತಾರೆ. ಕೋವಿಡ್ನ ಮೊದಲ ಅಲೆಯ ಕಾರಣದಿಂದಾಗಿ ಕಳೆದ ವರ್ಷವೂ ಯಾತ್ರೆ ರದ್ದುಗೊಳಿಸಲಾಗಿತ್ತು. ಈ ವರ್ಷ, ಜುಲೈ 2 ರಂದು ಉತ್ತರಾಖಂಡ ಸರ್ಕಾರವು ಕನ್ವರ್ ಯಾತ್ರೆಯನ್ನು ರದ್ದುಗೊಳಿಸಿದೆ.












Click it and Unblock the Notifications