ದೆಹಲಿ ಚುನಾವಣೆ: 70 ಕ್ಷೇತ್ರಕ್ಕೆ 1400 ಬಿಜೆಪಿ ಟಿಕೆಟ್ ಆಕಾಂಕ್ಷಿಗಳು
ನವದೆಹಲಿ, ಜನವರಿ 12: ಬಿಜೆಪಿಯ ಕೇಂದ್ರ ಹಾಗೂ ರಾಜ್ಯ ಪರಿವೀಕ್ಷಕರು ದೆಹಲಿಯಲ್ಲಿದ್ದು, 14 ಜಿಲ್ಲಾ ಘಟಕಗಳಿಂದ ಮಾಹಿತಿ ಪಡೆದು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಸುತ್ತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ 70 ಕ್ಷೇತ್ರಕ್ಕೆ 1400ಕ್ಕೂ ಅಧಿಕ ಮಂದಿ ಟಿಕೆಟ್ ಅಕಾಂಕ್ಷಿಗಳನ್ನು ಸಂಭಾವ್ಯ ಪಟ್ಟಿಯಲ್ಲಿ ಸೇರಿಸಲಾಗಿದೆ.
ಐದೈದು ವಿಧಾನಸಭಾ ವಿಭಾಗಗಳನ್ನು ಆಯ್ದುಕೊಂಡು ಸೂಕ್ತ ಅಭ್ಯರ್ಥಿಗಳನ್ನು 70 ಕ್ಷೇತ್ರಗಳಲ್ಲಿ ಕಣಕ್ಕಿಳಿಸಲು ಬಿಜೆಪಿ ಸಿದ್ಧತೆ ನಡೆಸಿದೆ ಎಂದು ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ ಹೇಳಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮನೋಜ್ ತಿವಾರಿ ಅವರು ಟಿಕೆಟ್ ಹಂಚಿಕೆ, ಅಭ್ಯರ್ಥಿಗಳ ಪಟ್ಟಿ ಕುರಿತಂತೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.
ದೆಹಲಿ ಸಿಎಂ ಸ್ಥಾನಕ್ಕೆ 7 ಬಿಜೆಪಿ ಮುಖಂಡರನ್ನು ಆರಿಸಿದ ಕೇಜ್ರಿವಾಲ್
ಸುಮಾರು 13000 ಬೂತ್ ಮಟ್ಟದ ಕಾರ್ಯಕರ್ತರನ್ನು ಉದ್ದೇಶಿಸಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮಾತನಾಡಿ, ಈ ಬಾರಿ ಸ್ವಯಂ ನಾಮಾಂಕಿತ ಮಾಡಿಕೊಳ್ಳುವ ಅವಕಾಶ ಅಭ್ಯರ್ಥಿಗಳಿಗೆ ಸಿಗಲಿದೆ ಎಂದಿದ್ದರು. ಸುಮಾರು 45 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವನ್ನು ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ ವ್ಯಕ್ತಪಡಿಸಿದ್ದಾರೆ.
ಹೆಚ್ಚಾಗಿದೆ ಟಿಕೆಟ್ ಆಕಾಂಕ್ಷಿಗಳ ಪಟ್ಟಿ
ಪ್ರತಿ ಕ್ಷೇತ್ರಕ್ಕೆ 15 ರಿಂದ 25ರ ಸರಾಸರಿಯಂತೆ ಟಿಕೆಟ್ ಆಕಾಂಕ್ಷಿಗಳು ಹೆಸರು ನೀಡಿದ್ದಾರೆ. ಸುಮಾರು 1400 ಹೆಸರುಗಳು ಪಟ್ಟಿಯಲ್ಲಿವೆ. ಈ ಪಟ್ಟಿಯನ್ನು ಪರೀಶಿಲನೆ ಮಾಡಿ, ಸಂಭಾವ್ಯ ಪಟ್ಟಿ ತಯಾರಿಸಲಾಗುತ್ತದೆ. 50ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ 3500ಕ್ಕೂ ಕಾರ್ಯಕರ್ತರು ಗೆಲ್ಲಬಲ್ಲ ಅಭ್ಯರ್ಥಿಯ ಹೆಸರನ್ನು ಸೂಚಿಸಿದ್ದಾರೆ.
ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ಯಾರು?
ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿಯಿಂದ ಭೋಜ್ ಪುರಿ ನಟ, ದೆಹಲಿ ಎನ್ ಸಿ ಆರ್ ಪ್ರದೇಶಕ್ಕೆ ಸೇರುವ ಪೂರ್ವಾಂಚಲದ ಮನೋಜ್ ತಿವಾರಿ ಹೆಸರು ಬಲವಾಗಿ ಕೇಳಿ ಬಂದಿದೆ. ದೆಹಲಿ ಬಿಜೆಪಿ ಅಧ್ಯಕ್ಷರಾಗಿ ಕಳೆದ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.ಈ ನಡುವೆ ಸಿಎಂ ಕೇಜ್ರಿವಾಲ್ ಅವರು ಬಿಜೆಪಿ ಸಂಭಾವ್ಯ ಪಟ್ಟಿ ಹೇಗಿರಬಹುದು ಎಂದು ಲೇವಡಿ ಮಾಡಿ 7 ಜನರನ್ನು ಹೆಸರಿಸಿದ್ದಾರೆ. ಗೌತಮ್ ಗಂಭೀರ್, ಮನೋಜ್ ತಿವಾರಿ, ವಿಜಯ್ ಗೋಯೆಲ್, ಹರ್ದೀಪ್ ಸಿಂಗ್ ಪುರಿ, ಹರ್ಷ್ ವರ್ಧನ್, ವಿಜೇಂದ್ರ ಗುಪ್ತ ಹಾಗೂ ಪರ್ವೇಶ್ ಸಿಂಗ್ ಅವರು ದೆಹೆಲಿ ಸಿಎಂ ಆಗಲು ಸೂಕ್ತ ಎಂದಿದ್ದನ್ನು ಇಲ್ಲಿ ಸ್ಮರಿಸಬಹುದು.
2015ರಲ್ಲಿ ದೆಹಲಿ ವಿಧಾನಸಭೆ ಚುನಾವಣೆ
2015ರಲ್ಲಿ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ 70 ಸ್ಥಾನಗಳ ಪೈಕಿ 67 ಸ್ಥಾನಗಳನ್ನು ಆಮ್ ಆದ್ಮಿ ಪಕ್ಷ ಗೆದ್ದುಕೊಂಡಿತ್ತು. ಬಿಜೆಪಿ ಮೂರು ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಆದರೆ 2017ರಲ್ಲಿ ಮುನ್ಸಿಪಾಲ್ ಕಾರ್ಪೊರೇಷನ್ ಚುನಾವಣೆ, 2019ರ ಲೋಕಸಭೆ ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಮತ್ತೆ ಲಯಕ್ಕೆ ಮರಳಿದೆ. ಈ ಬಾರಿ ಬಿಜೆಪಿ ಮಿತ್ರ ಪಕ್ಷ ಜೆಜೆಪಿ ಪಕ್ಷ ಕೂಡಾ ಕಣಕ್ಕಿಳಿಯಲಿದೆ.ಆಮ್ ಆದ್ಮಿ ಪಕ್ಷ ಹಾಗೂ ಕಾಂಗ್ರೆಸ್ ನಡುವೆ ಮೈತ್ರಿ ಮುರಿದಿರುವುದರಿಂದ ಮತದಾರರನ್ನು ಸೆಳೆಯುವುದು ಬಿಜೆಪಿಗೆ ಸುಲಭವಾಗಲಿದೆ.
2020ರಲ್ಲಿ ಮೊದಲ ಪರೀಕ್ಷೆ
ದೆಹಲಿಯಲ್ಲಿ ಫೆಬ್ರವರಿ 08ರಂದು ಮತದಾನ ನಡೆಯಲಿದ್ದು, ಫೆಬ್ರವರಿ 11ರಂದು ಫಲಿತಾಂಶ ಹೊರಬರಲಿದೆ. ಜನವರಿ 14ರಿಂದ ಚುನಾವಣಾ ಆಯೋಗ ಅಧಿಸೂಚನೆ ಜಾರಿಯಾಗಲಿದೆ. ಜನವರಿ 24ರೊಳಗೆ ಅಭ್ಯರ್ಥಿಗಳು ತಮ್ಮ ನಾಮಪತ್ರ ಹಿಂಪಡೆಯಬಹುದು.
1998ರಿಂದ ದೆಹಲಿಯಲ್ಲಿ ಅಧಿಕಾರಕ್ಕೇರಲು ಸಾಹಸ ಪಟ್ಟು ಫಲ ಕಾಣದಿರುವ ಬಿಜೆಪಿಗೆ ಈ ಬಾರಿ ಅಧಿಕಾರಿ ಗದ್ದುಗೇರಲು ಭಾರಿ ತಂತ್ರಗಾರಿಕೆ ನಡೆಸಿದೆ.