ಆಪ್ ಪಕ್ಷಕ್ಕೆ ಸಂಕಷ್ಟ: ದೇಣಿಗೆ ನೀಡುವವರೂ ಇಲ್ಲ
ನವದೆಹಲಿ, ಜೂನ್ 12: ಮೊದಲು, ದಿಲ್ಲಿ ವಿಧಾನಸಭೆ ಚುನಾವಣೆ ಗೆದ್ದು ರಾಷ್ಟ್ರದ ರಾಜಧಾನಿಯನ್ನು ಆಳುವ ಉದ್ದೇಶ, ನಂತರ ಲೋಕಸಭಾ ಚುನಾವಣೆಯಲ್ಲಿ ಜಯ ಸಾಧಿಸಿ ಇಡೀ ದೇಶವನ್ನೇ ಆಳುವ ಗುರಿ. ಆದರೆ ಆ ಎರಡೂ ಗುರಿ ಸಾಧನೆಯಲ್ಲಿ ಹೀನಾಯ ಸೋಲು. ಇದೀಗ ಇದ್ದಬದ್ಧ ಜನರೂ ದೂರ ಸರಿಯುತ್ತಿದ್ದಾರೆ. ಅಷ್ಟೇ ಅಲ್ಲ. ಭಾರಿ ಭಾರಿ ಪ್ರಮಾಣದಲ್ಲಿ ಹರಿದುಬರುತ್ತಿದ್ದ ಚಂದಾ ಹಣವೂ ಇದೀಗ ಪಕ್ಷದಿಂದ ದೂರವಾಗುತ್ತಿದೆ.
ಹೌದು ಚುನಾವಣೆ ಸಂದರ್ಭದಲ್ಲಿ ಭಾರಿ ಆಶಾವಾದದೊಂದಿಗೆ ಹಣ ನೀಡುತ್ತಿದ್ದ ಜನ ಇದೀಗ ಪಕ್ಷದ ವೈಫಲ್ಯ ಕಂಡು ನಿರಾಶರಾಗಿದ್ದಾರೆ. ಆನ್ ಲೈನ್ ಮೂಲಕವೇ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ಕೋಟ್ಯಂತರ ರೂ ಹರಿದುಬಂದಿತ್ತು. ಆದರೆ ಈಗ ಹಾಗಿಲ್ಲ. ಇದರಿಂದ 18 ತಿಂಗಳ ಕೂಸು ಆಮ್ ಆದ್ಮಿ ಕೃಶವಾಗತೊಡಗಿದೆ. ಮುಖ್ಯವಾಗಿ ಮೇ 16ರಂದು ಪಕ್ಷದ ಸಾಧನೆ ನಿರಾಶಾದಾಯಕವಾದಾಗ ಆಪ್ ಖಜಾನೆಗೆ ಕೇವಲ 22 ಲಕ್ಷ ರೂ ಹರಿದುಬಂದಿತ್ತು. (ಮಗುವಿಗೆ ಭೀಕರ ಕಾಯಿಲೆ, ಹೆಲ್ಪ್ ಪ್ಲೀಸ್ )
ವಿಷಯ ಅದಲ್ಲ. ದೆಹಲಿಯಲ್ಲಿ AAP ಪಕ್ಷದ ಕಚೇರಿ ಹನುಮಾನ್ ರಸ್ತೆಯಲ್ಲಿದೆ. ಆದರೆ ಎರಡಂತಸ್ತಿನ ಈ ಮನೆಯ ನೆರೆಹೊರೆಯವರು ಪೊಲೀಸ್ ಠಾಣೆಗೆ ದೂರು ನೀಡಿ 'ಪಕ್ಷದ ಕಾರ್ಯಕರ್ತರ ಕಾಟ ಜಾಸ್ತಿಯಾಗಿದೆ. ಮೊದಲು ಇವರನ್ನು ಮನೆ ಖಾಲಿ ಮಾಡಿಸಿಕೊಡಿ' ಎಂದು ಮೊರೆಯಿಟ್ಟಿದ್ದಾರೆ. ಇದಕ್ಕೆ ಸ್ಪಂದಿಸಿರುವ ಪೊಲೀಸರು ತಕ್ಷಣ ಆ ಪಕ್ಷವನ್ನು ಖಾಲಿ ಮಾಡಿಸಿದ್ದಾರೆ.

ಹಾಗಾಗಿ ಪಕ್ಷಕ್ಕೆ ಈಗ ವಾಸಿಸಲು ನೆಲೆಯೇ ಇಲ್ಲದಂತಾಗಿದೆ. ಅಂದಹಾಗೆ ತಿಂಗಳಿಗೆ 1 ರೂಪಾಯಿ ಗೌರವ ಬಾಡಿಗೆ ರೂಪದಲ್ಲಿ ಎನ್ಆರ್ ಐ ಒಬ್ಬರು ಆಪ್ ಪಕ್ಷಕ್ಕೆ ಈ ಮನೆಯನ್ನು ಬಾಡಿಗೆಗೆ ನೀಡಿದ್ದರು. ಈ ಮಧ್ಯೆ, ತನ್ನದು ರಾಜ್ಯ ಮಟ್ಟದ ಪಕ್ಷ. ಹಾಗಾಗಿ ಪಕ್ಷ ಕಚೇರಿಗೆ ಸರಕಾರಿ ಜಮೀನು ನೀಡಿ ಎಂದು ಆಪ್ ಪಕ್ಷ ಸಲ್ಲಿಸಿರುವ ಮನವಿಗೆ ದಿಲ್ಲಿ ಸರಕಾರ ಇನ್ನೂ ಸ್ಪಂದಿಸಿಲ್ಲ.
ಮತ್ತೆ ದೇಣಿಗೆ ವಿಷಯಕ್ಕೆ ಬರುವುದಾದರೆ, ಜೂನ್ 8ರಂದು ಕೇಜ್ರಿವಾಲ್ ಮತ್ತು ಯೋಗೇಂದ್ರ ಯಾದವ್ ನಡುವಣ ಭಿನ್ನಾಭಿಪ್ರಾಯ ಮಾಧ್ಯಮಗಳಲ್ಲಿ ಬಹಿರಂಗವಾಗುತ್ತಿದ ಬಳಿಕ ಪಕ್ಷಕ್ಕೆ ಚಂದಾ ನೀಡಲು ಜನ ಹಿಂಜರಿಯುತ್ತಿದ್ದಾರೆ. ಅಂದು ಪಕ್ಷಕ್ಕೆ ಕೇವಲ 8,293 ರೂ ಚಂದಾ ಬಂದಿದೆ. (ಕೆನ್ನೆಗೇಟು ಬಿದ್ದಷ್ಟೂ ಆಮ್ ಆದ್ಮಿ ದೇಣಿಗೆ ಹೆಚ್ತಿದೆ!)
ಮೇ 21ರಂದು ಕೇಜ್ರಿವಾಲ್ ಗಡ್ಕರಿ ವಿಷಯದಲ್ಲಿ ಜೈಲು ಕಂಡಾಗ ಪಕ್ಷದ ಖಜಾನೆಗೆ 7.42 ಲಕ್ಷ ರೂ ದಾನ ಬಂದಿದೆ. ಮೇ 23ರಂದು ಕೇಜ್ರಿವಾಲ್ ಮತ್ತೊಮ್ಮೆ ಜಾಮೀನು ಬೇಡವೆಂದಾಗ ಪಕ್ಷಕ್ಕೆ ಕೇವಲ 28,000 ರೂ ಚಂದಾ ಬಂದಿದೆ.
ಏಪ್ರಿಲ್ 4ರಂದು ದಕ್ಷಿಣ ದಿಲ್ಲಿಯ ದಕ್ಷಿಣಾಪುರಿಯಲ್ಲಿ ಕೇಜ್ರಿವಾಲ್ ಅವರು ಕೆನ್ನೆಗೆ ಏಟು ತಿಂದಾಗ ಅಯ್ಯೋ ಪಾಪ ಎಂದ ಜನ 1.46 ಕೋಟಿ ರೂ ದಾನ ನೀಡಿದ್ದರು. ಅದರ ಹಿಂದಿನ ದಿನ ಕೇವಲ 47.94 ಲಕ್ಷ ರೂ ನೀಡಿದ್ದರು.












Click it and Unblock the Notifications