ಶತ್ರು ದೇಶದಿಂದ ವಾಪಸ್ ಬಂದ ಅಭಿಯನ್ನು ಎಂಥ ಪರೀಕ್ಷೆಗೆ ಒಳಪಡಿಸಲಾಗುತ್ತದೆ?
Recommended Video

ನವದೆಹಲಿ, ಮಾರ್ಚ್ 01 : ವಾಘಾ-ಅಟ್ಟಾರಿ ಬಾರ್ಡರ್ ನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಸಹಸ್ರಾರು ಜನ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಸ್ವಾಗತಿಸಲು ಭಾರತದ ಧ್ವಜವನ್ನು ಹಿಡಿದು ತಯಾರಾಗಿದ್ದಾರೆ.
ಪಾಕಿಸ್ತಾನದಿಂದ ಬಂಧಿತರಾಗಿದ್ದ ಭಾರತೀಯ ವಾಯು ಸೇನೆಯ ಪೈಲಟ್ ಅಭಿನಂದನ್ ಅವರನ್ನು ಬಿಡುಗಡೆ ಮಾಡುವುದಾಗಿ ಗುರುವಾರವೇ ಪ್ರಕಟಿಸಿದ್ದ ಪಾಕಿಸ್ತಾನ, ಶುಕ್ರವಾರ ಸಂಜೆ ಅವರನ್ನು ಭಾರತಕ್ಕೆ ಹಸ್ತಾಂತರಿಸಲಿದೆ.
ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದಲ್ಲದೆ, ಪಾಕಿಸ್ತಾನಿ ಸೈನಿಕರಿಗೆ ಸಿಕ್ಕಿಬಿದ್ದಿದ್ದರೂ, ವಿಚಾರಣೆಯ ಸಮಯದಲ್ಲಿ ಅತ್ಯಂತ ಜಾಗರೂಕತೆಯಿಂದ, ಜಾಣ್ಮೆಯಿಂದ ಮತ್ತು ಧೈರ್ಯದಿಂದ ಉತ್ತರಿಸಿದ್ದ ಅವರು ಎಲ್ಲ ಪ್ರಶಂಸೆಗೆ ಪಾತ್ರರಾಗಿದ್ದರು.

ಕೆಲವೊಂದು ಫಾರ್ಮ್ಯಾಲಿಟಿ ಪಾಲಿಸಬೇಕು
ಅವರನ್ನು ಸ್ವಾಗತಿಸಲು ಸಾರ್ವಜನಿಕರು ಮಾತ್ರವಲ್ಲ ಭಾರತೀಯ ವಾಯು ಸೇನೆಯ ಅಧಿಕಾರಿಗಳು ಕೂಡ ಬರಲಿದ್ದಾರೆ. ಅಭಿನಂದನ್ ಅವರು 'ಹೀರೋ'ನೇ ಆಗಿದ್ದರೂ, ಕೆಲವೊಂದು ಫಾರ್ಮ್ಯಾಲಿಟಿಯನ್ನು ಪಾಲಿಸಲೇಬೇಕಾಗಿದೆ. ಅದನ್ನು ಸೇನಾ ಅಧಿಕಾರಿಗಳು ನಿರ್ಧರಿಸಲಿದ್ದಾರೆ.

ದೈಹಿಕ ಮಾನಸಿಕ ಪರೀಕ್ಷೆ
* ಅಭಿನಂದನ್ ಅವರು ಭಾರತದ ಗಡಿಯೊಳಗೆ ಬರುತ್ತಿದ್ದಂತೆ, ಅವರನ್ನು ನೇರವಾಗಿ ಇಂಡಿಯನ್ ಏರ್ಫೋರ್ಸ್ ಇಂಟೆಲಿಜೆನ್ಸ್ ಯುನಿಟ್ ಗೆ ಕರೆದುಕೊಂಡು ಹೋಗಲಿದ್ದಾರೆ.
* ಅವರ ದೈಹಿಕ ಮತ್ತು ಮಾನಸಿಕ ಸ್ಥಿತಿಗತಿಯನ್ನು ತಿಳಿಯಲು ಹಲವಾರು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ.

ದೇಹದ ಸಂಪೂರ್ಣ ಸ್ಕ್ಯಾನ್
* ಪಾಕಿಸ್ತಾನಿ ಸೇನೆ ಅಭಿನಂದನ್ ಅವರ ದೇಹದಲ್ಲಿ ಯಾವುದಾದರೂ ಸಾಧನಗಳನ್ನು (ಚಿಪ್ ಇತ್ಯಾದಿ) ಅಳವಡಿಸಿದೆಯೇ ಎಂದು ತಿಳಿಯಲು ಅವರ ದೇಹವನ್ನು ಸಂಪೂರ್ಣವಾಗಿ ಸ್ಕ್ಯಾನ್ ಮಾಡಲಾಗುತ್ತದೆ. ಇದರ ಸಾಧ್ಯತೆ ಇಲ್ಲದಿದ್ದರೂ, ತಳ್ಳಿಹಾಕುವಂತಿಲ್ಲ.

ಮಾನಸಿಕ ಪರೀಕ್ಷೆ
* ಅವರನ್ನು ಮಾನಸಿಕ ಪರೀಕ್ಷೆಗೂ ಒಳಪಡಿಸಲಾಗುತ್ತದೆ. ಅವರನ್ನು ವೈರಿಗಳು ಬಂಧಿಸಿದ್ದರಿಂದ ಅವರ ಮೇಲೆ ದೈಹಿಕ ಹಲ್ಲೆಗಳಾಗಿವೆಯಾ, ಮಾನಸಿಕ ಕಿರುಕುಳ ನೀಡಲಾಗಿದೆಯಾ, ಅವರು ಮತ್ತೇನಾದರೂ ರಹಸ್ಯ ಮಾಹಿತಿಯನ್ನು ಬಯಲುಗೊಳಿಸಿದ್ದಾರಾ ಎಂಬುದನ್ನು ಅರಿಯಲಾಗುತ್ತದೆ.

ಬೇಹುಗಾರಿಕೆ ಇಲಾಖೆಯಿಂದ ವಿಚಾರಣೆ
* ನಂತರ ಅವರನ್ನು ಬೇಹುಗಾರಿಕೆ ಇಲಾಖೆ ಮತ್ತು ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (ರಾ) ಅವರು ತೀವ್ರವಾಗಿ ಪ್ರಶ್ನಿಸಲಿದೆ.

ಡಿಬ್ರೀಫಿಂಗ್ ಪಾಲಿಸಲೇಬೇಕಾದ ಪ್ರಕ್ರಿಯೆ
ಇಲ್ಲಿ ಎಲ್ಲ ರೀತಿಯ ಎಚ್ಚರಿಕೆಯ ಕ್ರಮಗಳನ್ನು ಜರುಗಿಸಲಾಗುತ್ತದೆ. ಡಿಬ್ರೀಫಿಂಗ್ ಪಾಲಿಸಲೇಬೇಕಾದ ಪ್ರಕ್ರಿಯೆಯಾಗಿದ್ದು, ಬಂಧಿತ ವ್ಯಕ್ತಿಯಿಂದ ವೈರಿ ಸೈನಿಕರು ಏನಾದರೂ ಮಹತ್ತರ ಮಾಹಿತಿಯನ್ನು ಸಂಗ್ರಹಿಸಿದ್ದಾರಾ ಅಥವಾ ಅವರನ್ನೇ ತಮ್ಮ ಸೇನೆಯಲ್ಲಿ ಸೇರಿಸಿಕೊಂಡು, ಬೇಹುಗಾರನಾಗಿ ಬಿಡಲಾಗಿದೆಯಾ ಎಂಬಿತ್ಯಾದಿ ವಿಷಗಳನ್ನು ತಿಳಿಯಲಾಗುತ್ತದೆ.

ಹಿಂದೆ ಕೂಡ ಇದೇ ಪ್ರೊಸಿಜರ್ ಫಾಲೋ ಮಾಡಲಾಗಿತ್ತು
ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನಿಯರಿಗೆ ಸಿಕ್ಕಿಬಿದ್ದಿದ್ದ ನಚಿಕೇತ್ ಆಗಲಿ, 1965ರ ಯುದ್ಧದಲ್ಲಿ ಪಾಕ್ ಸೈನಿಕರಿಗೆ ಸೆರೆಯಾಗಿದ್ದ ಕೆಸಿ ನಂದ ಕರಿಯಪ್ಪ (ಫೀಲ್ಡ್ ಮಾರ್ಷಲ್ ಕೆಎಂ ಕರಿಯಪ್ಪ ಅವರ ಮಗ) ಅವರಾಗಲಿ ಪಾಕಿಸ್ತಾನಿಯರಿಗೆ ಯಾವುದೇ ರಹಸ್ಯ ಮಾಹಿತಿಯನ್ನು ಬಿಟ್ಟುಕೊಟ್ಟಿರಲಿಲ್ಲ. ಈ ಪ್ರಕರಣದಲ್ಲಿ ಅಭಿನಂದನ್ ಅವರನ್ನು ನೇರವಾಗಿ ಮತ್ತೆ ವಿಂಗ್ ಕಮಾಂಡರ್ ಆಗಿ ಕೆಲಸಕ್ಕೆ ನಿಯೋಜಿಸದೆ, ಅವರು ಕೆಲ ಸಮಯ ಡೆಸ್ಕ್ ಕೆಲಸ ಮಾಡಬೇಕಾದ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.











Click it and Unblock the Notifications