6 ವರ್ಷದಲ್ಲಿ ನಾವು ಎದುರಿಸಿದ ದೊಡ್ಡ ಬಿಕ್ಕಟ್ಟು ಕೊರೊನಾ ವೈರಸ್-ರಾಜನಾಥ್ ಸಿಂಗ್
ದೆಹಲಿ, ಮೇ 30: ಪ್ರಧಾನಿ ನರೇಂದ್ರ ಮೋದಿಯ ಆರು ವರ್ಷದ ಆಡಳಿತದಲ್ಲಿ ಕೊರೊನಾ ವೈರಸ್ ನಾವು ಎದುರಿಸಿದ ಬಹುದೊಡ್ಡ ಬಿಕ್ಕಟ್ಟು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಮೇ 30ಕ್ಕೆ ನರೇಂದ್ರ ಮೋದಿ ಎರಡನೇ ಬಾರಿ ದೇಶದ ಪ್ರಧಾನಿ ಆಗಿ ಒಂದು ವರ್ಷ ಕಳೆದಿದೆ. ಈ ಸಂದರ್ಭದಲ್ಲಿ ಮಾತನಾಡಿದ ರಾಜನಾಥ್ ಸಿಂಗ್ ''ಕಳೆದ ಆರು ವರ್ಷದಲ್ಲಿ ನಾವು ಎದುರಿಸಿದ ದೊಡ್ಡ ಸಮಸ್ಯೆ ಕೊರೊನಾ ವೈರಸ್. ಇಂತಹ ಸನ್ನಿವೇಶದಲ್ಲಿ ಮೋದಿ ಪ್ರಧಾನಿ ಆಗಿರುವುದು ನಮ್ಮ ಅದೃಷ್ಟ'' ಎಂದು ಆಜ್ ತಕ್ಗೆ ನೀಡಿದ ಸಂದರ್ಶನದಲ್ಲಿ ರಕ್ಷಣಾ ಸಚಿವರು ಹೇಳಿದ್ದಾರೆ.
''ಇಂದು ನಾವು ಕೊರೊನಾ ವೈರಸ್ ಎಂಬ ಸವಾಲನ್ನು ಎದುರಿಸಲು ಸಮರ್ಥ ನಾಯಕನನ್ನು ಹೊಂದಿದ್ದೇವೆ. ಇದು ಭಾರತದ ಅದೃಷ್ಟ. ಪ್ರಧಾನಿ ಮೋದಿಯವರ ಉತ್ತಮ ಚಿಂತನೆ ಮತ್ತು ಸಮಯೋಚಿತ ನಿರ್ಧಾರಗಳು ಇಲ್ಲದಿದ್ದರೆ, ನಮ್ಮ ಪರಿಸ್ಥಿತಿ ಬಹಳ ಕೆಟ್ಟದಾಗಿರತ್ತಿತ್ತು" ಎಂದು ಮೋದಿಯ ಆಡಳಿತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೊವಿಡ್ ಸೋಂಕು ಹಿನ್ನೆಲೆ ಲಾಕ್ಡೌನ್ ಜಾರಿ ಮಾಡಿದ ಬಗ್ಗೆ ಸರ್ಕಾರ ಪೂರ್ವ ಯೋಜನೆ ಮಾಡಿಲ್ಲ ಎಂದು ವಿಪಕ್ಷಗಳು ವಿರೋಧಿಸಿದ್ದವು. ಈ ಬಗ್ಗೆ ಪ್ರತಿಕ್ರಿಯಿಸಿದ ರಾಜನಾಥ್ ಸಿಂಗ್ 'ಸೂಕ್ತ ಸಮಯದಲ್ಲಿ ಅಂತಹ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅದು ಧೈರ್ಯಶಾಲಿ ನಿರ್ಧಾರ'' ಎಂದಿದ್ದಾರೆ.
ಕಳೆದ ಒಂದು ವರ್ಷದಲ್ಲಿ ರಕ್ಷಣಾ ಸಚಿವಾಲಯದ ಸಾಧನೆಗಳ ಬಗ್ಗೆ ಮಾತನಾಡಿದ ರಾಜನಾಥ್ ಸಿಂಗ್, ''ಮೋದಿ ಸರ್ಕಾರ 2.0 ಅಧಿಕಾರದಲ್ಲಿ ಭಾರತೀಯ ಸೈನ್ಯದಲ್ಲಿ ಸಿಡಿಎಸ್ ಹುದ್ದೆ ರಚಿಸಿದ್ದು ಪ್ರಮುಖ ಸಾಧನೆ'' ಎಂದಿದ್ದಾರೆ.












Click it and Unblock the Notifications