ಬಂಧನದಿಂದ ತಾತ್ಕಾಲಿಕ ನೆಮ್ಮದಿ ಪಡೆದ ರಾಬರ್ಟ್ ವಾದ್ರಾ
ನವದೆಹಲಿ, ಫೆಬ್ರವರಿ 02: ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಗಾಂಧಿ ಕುಟುಂಬದ ಅಳಿಯ ರಾಬರ್ಟ್ ವಾದ್ರಾ ಅವರನ್ನು ಫೆಬ್ರವರಿ 16 ರವರೆಗೆ ಬಂಧಿಸುವಂತಿಲ್ಲ ಎಂದು ದೆಹಲಿಯ ಪಟಿಯಾಲಾ ನ್ಯಾಯಾಲಯವು ಆದೇಶ ನೀಡಿದೆ.
ಕಳೆದ ಡಿಸೆಂಬರ್ 7 ರಂದು ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ಅವರ ಮೇಲೆ ಐಟಿ ಮತ್ತು ಇಡಿ ದಾಳಿ ನಡೆದಿತ್ತು. ತನಿಖೆ ನಂತರ ಇಡಿಯು ವಾದ್ರಾ ವಿರುದ್ಧ ಅಕ್ರಮ ಹಣ ವರ್ಗಾವಣೆ ಕೇಸು ದಾಖಲಿಸಿತ್ತು. ಇದು ವಾದ್ರಾ ಅವರಿಗೆ ಬಂಧನ ಭೀತಿ ತಂದಿತ್ತು. ಹಾಗಾಗಿ ವಾದ್ರಾ ಅವರು ನಿರೀಕ್ಷಣಾ ಜಾಮೀನಿಗೆ ಮನವಿ ಮಾಡಿದ್ದರು.
ರಾಬರ್ಟ್ ವಾದ್ರಾ ಮೇಲೆ ಐಟಿ ದಾಳಿ, ಕಾಂಗ್ರೆಸ್ನಿಂದ ವಿರೋಧ
ವಾದ್ರಾ ಅವರ ಮನವಿಯನ್ನು ಪುರಸ್ಕರಿಸಿರುವ ನ್ಯಾಯಾಲಯವು ವಾದ್ರಾ ಅವರಿಗೆ ಫೆಬ್ರವರಿ 16 ರವ ರೆಗೆ ನಿರೀಕ್ಷಣಾ ಜಾಮೀನು ನೀಡಿದೆ. ಈ ನಡುವೆ ವಾದ್ರಾ ಅವರು ಅಗತ್ಯ ದಾಖಲೆಗಳನ್ನು ಇಡಿಗೆ ಸಲ್ಲಿಸಬಹುದಾಗಿದೆ.
ಲಂಡನ್ ಮೂಲದ ಸಂಸ್ಥೆಗೆ 17.77 ಕೋಟಿ ಅಕ್ರಮ ವರ್ಗಾವಣೆ ಮಾಡಿದ್ದಾರೆ ಎಂದು ರಾಬರ್ಟ್ ವಾದ್ರಾ ವಿರುದ್ಧ ಇಡಿ ಪ್ರಕರಣ ದಾಖಲಿಸಿದೆ. ಇದೇ ಪ್ರಕರಣದಲ್ಲಿ ವಾದ್ರಾ ಆಪ್ತ ಮನೋಜ್ ಅರೋರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.
ಸೋನಿಯಾ ಅಳಿಯನ ಆಪ್ತರಿಗೆ 'ಇಡಿ' ಆಘಾತ, ಬೆಂಗಳೂರಲ್ಲೂ ದಾಳಿ
ವಾದ್ರಾ ಮೇಲೆ ಇಡಿ ದಾಳಿ ನಡೆಸಿದ್ದನ್ನು ತೀವ್ರವಾಗಿ ಕಾಂಗ್ರೆಸ್ ಖಂಡಿಸಿತ್ತು. ವಾದ್ರಾ ಸಹ ಕಾಂಗ್ರೆಸ್ಗೆ ಮಸಿ ಬಳಿಯಲೆಂದು ನನ್ನ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂದು ಹೇಳಿದ್ದರು.
ಭೂ ಹಗರಣ: ರಾಬರ್ಟ್ ವದ್ರಾಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್
ರಾಬರ್ಟ್ ವಾದ್ರಾ ಪತ್ನಿ, ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಇತ್ತೀಚೆಗಷ್ಟೆ ಸಕ್ರಿಯ ರಾಜಕೀಯಕ್ಕೆ ಬಂದಿದ್ದು, ಅವರು ಎಐಸಿಸಿಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.