ಮಗನ ಸಾವು ತಾಳದೆ ದಂಪತಿಗಳಿಬ್ಬರ ಆತ್ಮಹತ್ಯೆ
ನವದೆಹಲಿ, ಸೆಪ್ಟೆಂಬರ್ 12 : ಏಳು ವರ್ಷದ ಪ್ರೀತಿಯ ಮಗನ ಸಾವನ್ನು ತಾಳಲಾರದೆ ದಂಪತಿಗಳಿಬ್ಬರು ನಾಲ್ಕನೇ ಮಹಡಿಯಿಂದ ಹಾರಿ ಪ್ರಾಣ ಕಳೆದುಕೊಂಡ ಹೃದಯವಿದ್ರಾವಕ ಘಟನೆ ದೇಶದ ರಾಜಧಾನಿಯಲ್ಲಿ ನಡೆದಿದೆ. ಏಳು ವರ್ಷದ ಬಾಲಕನ ಪ್ರಾಣ ತೆಗೆದಿದ್ದು ಡೆಂಗ್ಯೂ.
ಈ ದಾರುಣ ದುರಂತಕ್ಕೆ ಮತ್ತೊಂದು ಕಾರಣವೆಂದರೆ, ಸಕಾಲದಲ್ಲಿ ಮಗನನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಲು ಸಾಧ್ಯವಾಗದೆ ಇದ್ದದ್ದು. "ಮಗನನ್ನು ಸೂಕ್ತ ಸಮಯದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಲಿಲ್ಲ. ನಮ್ಮ ಸಾವಿಗೆ ಯಾರೂ ಕಾರಣರಲ್ಲ. ಇದು ನಮ್ಮ ನಿರ್ಧಾರ" ಎಂಬ ಮರಣಪತ್ರ ಬರೆದಿಟ್ಟು ಲಕ್ಷ್ಮಿಚಂದ್ರ ಮತ್ತು ಬಬೀತಾ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬಾಲಕನ ಪಾಲಕರು ಕಾರಣ ಯಾರೂ ಅಲ್ಲ ಅಂದಿದ್ದರೂ, ಕಾರಣ ಇಲ್ಲಿದೆ ನೋಡಿ. ಡೆಂಗ್ಯೂನಿಂದ ಬಳಲುತ್ತಿದ್ದ ಮಗನನ್ನು ಮೊದಲಿಗೆ ಮೂಲಚಂದ್ ಮೆಡಿಸಿಟಿ ಆಸ್ಪತ್ರೆಗೆ, ನಂತರ ಮ್ಯಾಕ್ಸ್ ಸಾಕೇತ್ ಆಸ್ಪತ್ರೆಗೆ ದಂಪತಿ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ದಾಖಲಿಸಲು ನಿರಾಕರಿಸಿದ ಕಾರಣ, ಬಾತ್ರಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಷ್ಟರಲ್ಲಾಗಲೆ ಬಾಲಕನ ಪ್ರಾಣಪಕ್ಷಿ ಹಾರಿಹೋಗಿತ್ತು. [ಸೊಳ್ಳೆ ಒದ್ದೋಡಿಸುವ ಗಿಡಗಳ ನೆಟ್ಟ ಹಿರಿಯ ನಾಗರಿಕರು]
ಆಸ್ಪತ್ರೆಗೆ ಕರೆತಂದಾಗ ಬಾಲಕನ ಸ್ಥಿತಿ ತೀರ ಚಿಂತಾಜನಕವಾಗಿತ್ತು. ಆತನ ನಾಡಿ ಮಿಡಿತ ನಿಂತಿತ್ತು ಮತ್ತು ರಕ್ತದೊತ್ತಡ ಇರಲಿಲ್ಲ. ನಮ್ಮ ತಜ್ಞ ವೈದ್ಯರು ಬಾಲಕನನ್ನು ನೇರವಾಗಿ ತುರ್ತು ಚಿಕಿತ್ಸಾ ಘಟಕಕ್ಕೆ ಕರೆದುಕೊಂಡು ಹೋಗಿ, ಪ್ರಾಣ ಉಳಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಿದರೆ. ಆದರೆ, ದುರಾದೃಷ್ಟವಶಾತ್ ಯಶಸ್ವಿಯಾಗಲಿಲ್ಲ ಎಂದು ಬಾತ್ರಾ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.
ಬಾಲಕನ ಶವಸಂಸ್ಕಾರ 8ನೇ ತಾರೀಖಿನಂದೇ ನಡೆದಿದೆ. ಆದರೆ, ಮಗನನ್ನು ಕಳೆದುಕೊಂಡ ದುಃಖ ಮೂರು ದಿನವಾದರೂ ಶಮನವಾಗಿಲ್ಲ. ಕಡೆಗೆ ದಂಪತಿಗಳಿಬ್ಬರು ಈ ನಿರ್ಧಾರಕ್ಕೆ ಬಂದಿದ್ದಾರೆ. ಗಂಡ-ಹೆಂಡತಿಯರಿಬ್ಬರು ತಮ್ಮ ಕೈಗಳನ್ನು ದುಪಟ್ಟಾದಿಂದ ಕಟ್ಟಿಕೊಂಡು ನಾಲ್ಕನೇ ಮಹಡಿಯಿಂದ ಹಾರಿ ಪ್ರಾಣ ನೀಗಿಕೊಂಡಿದ್ದಾರೆ.
ಬಾಲಕನ ಅಂತ್ಯ ಸಂಸ್ಕಾರ ಮಾಡುವಾಗ, ಬಾಲಕನ ಕಿವಿಯಲ್ಲಿ, 'ಅಮ್ಮ ನಿನಗಾಗಿ ಕಾಯುತ್ತಿದ್ದಾಳೆ. ಆಕೆ ಮತ್ತೆ ಗರ್ಭವತಿಯಾದಾಗ ನೀನೇ ಆಕೆಯ ಗರ್ಭದಲ್ಲಿ ಜನಿಸು' ಎಂದು ಲಕ್ಷ್ಮಿಚಂದ್ ತನ್ನ ನೆರೆಹೊರೆಯವರಿಗೆ ಹೇಳಿದ್ದ ಎಂದು ಹೇಳುತ್ತಾರೆ. ಈ ನಂಬಿಕೆಗೆ ವ್ಯತಿರಿಕ್ತವಾಗಿ ಅಪ್ಪ-ಅಮ್ಮಂದಿರಿಬ್ಬರೇ ತಮ್ಮ ಮಗನ ಬಳಿ ಹೋಗಿದ್ದಾರೆ! [ಡೆಂಗ್ಯೂದಂತೆಯೇ ಮತ್ತೊಂದು ಹೊಸ ಜ್ವರ ಬಂದಿದೆ ಎಚ್ಚರ!]