ಸಂಸದೀಯ ಸಮಿತಿ ಸಭೆಯಲ್ಲಿ ಬಿಜೆಪಿ ಸಂಸದರ ಹೈಡ್ರಾಮಾ
ನವದೆಹಲಿ, ಜೂನ್ 24: ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಕುರಿತು ಚರ್ಚೆ ನಡುವೆ ಸಂಸದೀಯ ಸಮಿತಿ ಸಭೆಯಲ್ಲಿ ಹೈಡ್ರಾಮಾ ನಡೆಯಿತು. ಲಸಿಕೆ ವಿತರಣೆ ನೀತಿ ಬಗ್ಗೆ ಚರ್ಚಿಸುವುದಕ್ಕೆ ಇದು ಸೂಕ್ತ ಸಮಯವಲ್ಲ ಎಂದು ಪ್ರತಿಪಾದಿಸಿದ ಕೆಲವು ಸಂಸದರು ಸಭೆಯಿಂದಲೇ ಹೊರ ನಡೆದಿದ್ದಾರೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೊರೊನಾವೈರಸ್ ಲಸಿಕೆ ಅಭಿವೃದ್ಧಿಗೆ ಕಾರ್ಯಸೂಚಿ ಮತ್ತು ರೂಪಾಂತರ ತಳಿಗಳ ಬಗ್ಗೆ ಕುರಿತು ಚರ್ಚಿಸಲಾಯಿತು. ವಿಜ್ಞಾನ ಮತ್ತು ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿಯ ಮುಂದೆ ಸರ್ಕಾರದ ವೈಜ್ಞಾನಿಕ ಸಲಹೆಗಾರ ಕೆ.ವಿಜಯ ರಾಘವನ್, ಐಸಿಎಂಆರ್ ಡಿಜಿ ವಿಕೆ ಭಾರ್ಗವ ಮತ್ತು ಜೈವಿಕ ತಂತ್ರಜ್ಞಾನ ವಿಭಾಗದ ಕಾರ್ಯದರ್ಶಿ ರೇಣು ಸ್ವರೂಪ್ ಇದ್ದರು.
ಕೊರೊನಾವೈರಸ್ ಲಸಿಕೆ ವಿತರಣೆ ಮತ್ತು ನೀತಿ ಬಗ್ಗೆ ವಿರೋಧ ಪಕ್ಷದ ಸಂಸದರು ಪ್ರಶ್ನೆ ಮಾಡಿದರು. ಅದರ ಜೊತೆ ಎರಡು ಡೋಸ್ ಲಸಿಕೆ ನಡುವಿನ ಅಂತರದ ಬಗ್ಗೆ ಪ್ರಶ್ನೆ ಎತ್ತುತ್ತಿದ್ದಂತೆ ಬಿಜೆಪಿ ಸಂಸದರು ತೀವ್ರ ವಿರೋಧ ವ್ಯಕ್ತಪಡಿಸಿದರು. ಇಂದಿನ ಸಭೆಯನ್ನು ಮುಂದೂಡಿ ಎಂದು ಆಗ್ರಹಿಸಿ ಸಭೆಯಿಂದ ಹೊರ ನಡೆದರು.

ಲಸಿಕೆ ವಿತರಣೆ ಬಗ್ಗೆ ಪ್ರಸ್ತಾಪಕ್ಕೆ ಸೂಕ್ತ ಸಮಯವಲ್ಲ:
ದೇಶಾದ್ಯಂತ ಕೊರೊನಾವೈರಸ್ ಲಸಿಕೆ ವಿತರಣೆಯು ವೇಗವಾಗಿ ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ಲಸಿಕೆ ವಿತರಣೆ ಪ್ರಕ್ರಿಯೆಗೆ ಅಡ್ಡಿ ಉಂಟು ಮಾಡುವಂತಹ ವಿಷಯಗಳ ಚರ್ಚೆ ಸೂಕ್ತವಲ್ಲ ಎಂದು ಬಿಜೆಪಿ ಸಂಸದರು ಪ್ರತಿಪಾದಿಸಿದ್ದಾರೆ. ಈ ವೇಳೆ ಸಮಿತಿ ಅಧ್ಯಕ್ಷ ಜೈರಾಮ್ ರಮೇಶ್ ಸಭೆಯ ಉದ್ದೇಶವೇನು ಎಂಬುದನ್ನು ಗುರುತಿಸಿ ಉಲ್ಲೇಖಿಸಿದರು.
ಬಿಜೆಪಿ ಸಂಸದರು ಸಭೆ ಮುಂದೂಡಿಕೆ ಬಗ್ಗೆ ಬೇಡಿಕೆಗೆ ಅಂಟಿಕೊಂಡ ಹಿನ್ನೆಲೆ ಅದರ ಮೇಲೆ ಮತ ಚಲಾಯಿಸಲು ಬಯಸಿದರು. ಈ ವೇಳೆ ಸ್ಥಾಯಿ ಸಮಿತಿ ಸಭೆಗಳನ್ನು ಒಮ್ಮತದ ಮೂಲಕ ನಡೆಸಲಾಗುತ್ತದೆ ಎಂದು ರಮೇಶ್ ಪ್ರಸ್ತಾಪವನ್ನು ನಿರಾಕರಿಸಿದರು. ಮೂಲಗಳ ಪ್ರಕಾರ, ಅಧ್ಯಕ್ಷರಾಗಿ ಅವರ ಕೊನೆಯ ಸಭೆಯಾಗಿದ್ದರೂ ಮತದಾನ ಇರುವುದಿಲ್ಲ ಎಂದು ರಮೇಶ್ ಅಭಿಪ್ರಾಯಪಟ್ಟಿದ್ದರು. ವಿರೋಧಪಕ್ಷದ ಸಂಸದರಾಗಿ ಜನರಿಗೆ ಉತ್ತರಿಸಬೇಕಾದ ಹಿನ್ನೆಲೆ ಪ್ರಶ್ನಿಸುವ ಹಕ್ಕು ಕೂಡ ಹೊಂದಿದ್ದಾರೆ ಎಂದು ಪ್ರತಿಪಾದಿಸಿದರು.












Click it and Unblock the Notifications