ಕೊರೊನಾ ಭೀತಿ: ಇರಾನ್ ನಿಂದ 120 ಭಾರತೀಯರು ಇಂದು ತಾಯ್ನಾಡಿಗೆ ವಾಪಸ್
ನವದೆಹಲಿ, ಮಾರ್ಚ್ 13: ಕೊರೊನಾ ಪೀಡಿತ ಇರಾನ್ ನಿಂದ 120 ಭಾರತೀಯರನ್ನು ಹೊತ್ತ ಏರ್ ಇಂಡಿಯಾ ವಿಮಾನ ಇಂದು ರಾಜಸ್ಥಾನದ ಜೈಸಲ್ಮೇರ್ ಗೆ ಬಂದಿಳಿಯಲಿದೆ.
ಚೀನಾ ಮತ್ತು ಇಟಲಿ ಬಳಿಕ ಕೊರೊನಾ ವೈರಸ್ ಸೋಂಕು ಹೆಚ್ಚು ಹಬ್ಬಿರುವುದು ಇರಾನ್ ನಲ್ಲಿ. ಇಲ್ಲಿಯವರೆಗೂ ಇರಾನ್ ನಲ್ಲಿ ಒಟ್ಟು 10,075 ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಈಗಾಗಲೇ 429 ಮಂದಿ ಕೋವಿಡ್-19 ನಿಂದ ಮೃತಪಟ್ಟಿದ್ದಾರೆ.
ಕೊರೊನಾ ಕಂಟಕ: ಇರಾನ್ನಲ್ಲಿ ಸಿಲುಕಿದ್ದ ಭಾರತೀಯರು ವಾಪಸ್
ಕೊರೊನಾ ಭೀತಿಯಿಂದ ಇರಾನ್ ನಲ್ಲಿ ಸಿಲುಕಿದ್ದ 120 ಭಾರತೀಯರನ್ನು ಒಳಗೊಂಡಂತೆ ಒಟ್ಟು 150 ಮಂದಿಯನ್ನು ಏರ್ ಇಂಡಿಯಾ ಇಂದು ಭಾರತಕ್ಕೆ ವಾಪಸ್ ಕರೆತರುತ್ತಿದೆ.
ಸೇನಾ ಕೇಂದ್ರದಲ್ಲಿ ಪ್ರತ್ಯೇಕ ವ್ಯವಸ್ಥೆ
ಇರಾನ್ ನಿಂದ ಮರಳಿರುವ 120 ಮಂದಿ ಭಾರತೀಯರನ್ನು ಜೈಸಲ್ಮೇರ್ ನ ಸೇನಾ ಕೇಂದ್ರಗಳಲ್ಲಿ ಪ್ರತ್ಯೇಕವಾಗಿ ಇರಿಸಲಾಗುತ್ತದೆ ಎಂದು ರಕ್ಷಣಾ ಇಲಾಖೆಯ ವಕ್ತಾರರು ತಿಳಿಸಿದ್ದಾರೆ. ''ಇರಾನ್ ನಿಂದ ಮರಳಿದವರಿಗೆ ಭಾರತೀಯ ಸೇನಾ ಕೇಂದ್ರದಲ್ಲಿ ಪ್ರತ್ಯೇಕವಾಗಿ ಇರಿಸಲು ಸಕಲ ವ್ಯವಸ್ಥೆ ಮಾಡಲಾಗಿದೆ. ವಿಮಾನ ನಿಲ್ದಾಣದಲ್ಲಿ ವೈದ್ಯಕೀಯ ತಪಾಸಣೆ ನಡೆಸಿದ ಬಳಿಕ, ಎಲ್ಲರನ್ನೂ ಪ್ರತ್ಯೇಕವಾಗಿ ಇರಿಸಲಾಗುತ್ತದೆ'' ಎಂದು ರಕ್ಷಣಾ ಇಲಾಖೆಯ ವಕ್ತಾರ ಕರ್ನಲ್ ಸೋಂಬಿತ್ ಘೋಷ್ ಹೇಳಿದ್ದಾರೆ.
ಮತ್ತೊಂದು ಬ್ಯಾಚ್ ಬರಲಿದೆ
ಇನ್ನೆರಡು ಎರಡ್ಮೂರು ದಿನಗಳಲ್ಲಿ ಇನ್ನಷ್ಟು ಭಾರತೀಯರನ್ನು ಕರೆತರುವ ನಿರೀಕ್ಷೆ ಇದೆ. ಇರಾನ್ ನಿಂದ 250 ಭಾರತೀಯರ ಮತ್ತೊಂದು ಬ್ಯಾಚ್ ಮಾರ್ಚ್ 14 ರಂದು ಜೈಸಲ್ಮೇರ್ ಗೆ ಮರಳಲಿದೆ.
ಬೆಂಗಳೂರಿಗರಿಗೆ ಆಘಾತಕಾರಿ ಸುದ್ದಿ: ಗೂಗಲ್ RMZ ಕಂಪನಿಯಲ್ಲಿ ಕೊರೊನಾ!
ಏಳು ಸೇನಾ ಕೇಂದ್ರಗಳು
ಕೊರೊನಾ ಪೀಡಿತ ದೇಶಗಳಿಂದ ಬರುವ ಭಾರತೀಯರಿಗೆ ಚಿಕಿತ್ಸೆ ನೀಡುವ ಸಲುವಾಗಿ ರಕ್ಷಣಾ ಇಲಾಖೆ 7 ಸೇನಾ ಕೇಂದ್ರಗಳನ್ನು ಸ್ಥಾಪಿಸಿದೆ. ಜೈಸಲ್ಮೇರ್, ಸೂರತ್ ಘರ್, ಜಾನ್ಸಿ, ಜೋಧ್ ಪುರ್, ಕೋಲ್ಕತ್ತಾ, ಡಿಯೋಲಾಲಿ ಮತ್ತು ಚೆನ್ನೈನಲ್ಲಿ ಸೇನಾ ಸೇವಾ ಕೇಂದ್ರಗಳನ್ನು ತೆರೆಯಲಾಗಿದೆ.
ಇರಾನ್ ನಲ್ಲಿ ಸಿಲುಕಿದ್ದಾರೆ 6000 ಭಾರತೀಯರು
ಇರಾನ್ ನಲ್ಲಿ 1100 ಯಾತ್ರಿಕರು ಸೇರಿದಂತೆ 6000 ಕ್ಕೂ ಹೆಚ್ಚು ಭಾರತೀಯರು ಸಿಲುಕಿದ್ದಾರೆ. ಎಲ್ಲರನ್ನೂ ವಾಪಸ್ ಭಾರತಕ್ಕೆ ಕರೆತರುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.