1 ರೂ. ದಂಡ: ವಕೀಲ ಪ್ರಶಾಂತ್ ಭೂಷಣ್ ಪ್ರತಿಕ್ರಿಯೆ ಏನು?
ನವದೆಹಲಿ, ಆಗಸ್ಟ್ 31: ಮುಖ್ಯ ನ್ಯಾಯಮೂರ್ತಿ ಎಸ್ಎ ಬೊಬ್ಡೆ ಮತ್ತು ಸುಪ್ರೀಂಕೋರ್ಟ್ ಅನ್ನು ಟೀಕಿಸುವ ಟ್ವೀಟ್ ಮಾಡಿದ್ದಕ್ಕಾಗಿ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಹೇಳಲಾಗಿದ್ದ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರಿಗೆ ಸುಪ್ರೀಂಕೋರ್ಟ್ 1 ರೂ. ದಂಡ ವಿಧಿಸಿದೆ. ಸೆ. 15ರ ಒಳಗೆ ದಂಡ ಪಾವತಿ ಮಾಡದೆ ಹೋದರೆ ಮೂರು ತಿಂಗಳು ಜೈಲು ಮತ್ತು ಮೂರು ವರ್ಷ ಸುಪ್ರೀಂಕೋರ್ಟ್ನ ವಕೀಲಿಕೆಯಿಂದ ನಿಷೇಧಿಸುವುದಾಗಿ ಎಚ್ಚರಿಕೆ ನೀಡಿದೆ.
ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕ ಪ್ರಶಾಂತ್ ಭೂಷಣ್, ಒಂದು ರೂ ನಾಣ್ಯ ಹಿಡಿದು ನಗುತ್ತಿರುವ ಫೋಟೊ ವೈರಲ್ ಆಗಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಈ ಆದೇಶವನ್ನು ಪಾಲಿಸಿ ಗೌರವಯುತವಾಗಿ ದಂಡವನ್ನು ಪಾವತಿ ಮಾಡುತ್ತೇನೆ ಎಂದಿದ್ದಾರೆ.
ಸುಪ್ರೀಂಕೋರ್ಟ್ ದುರ್ಬಲ ಮತ್ತು ದಮನಿತರ ಭರವಸೆಯ ಕೊನೆಯ ಕೋಟೆ ಎಂದೇ ನಂಬಿದ್ದೇನೆ ಎಂದ ಪ್ರಶಾಂತ್ ಭೂಷಣ್, ನ್ಯಾಯಾಂಗಕ್ಕೆ ಗಾಸಿಗೊಳಿಸುವ ಉದ್ದೇಶ ಇರಲಿಲ್ಲ ಆದರೆ ತನ್ನ ದಾಖಲೆಗಳ ದಾರಿತಪ್ಪುತ್ತಿರುವುದರ ಬಗ್ಗೆ ತಮ್ಮ ಆಕ್ರೋಶವನ್ನು ಹೊರಹಾಕಲು ಬಯಸಿದ್ದಾಗಿ ಹೇಳಿದ್ದಾರೆ.

ಸುಪ್ರೀಂಕೋರ್ಟ್ನ ಆದೇಶದ ಪರಾಮರ್ಶನೆಗೂ ಅರ್ಜಿ ಸಲ್ಲಿಸುವ ಬಗ್ಗೆ ಅವರು ಸುಳಿವು ನೀಡಿದ್ದಾರೆ. ನ್ಯಾಯಾಂಗದ ಬಗ್ಗೆ ಅಪಾರ ಗೌರವವಿದೆ. ತಮ್ಮ ಟ್ವೀಟ್ಗಳು ನ್ಯಾಯಾಂಗ ಅಥವಾ ಸುಪ್ರೀಂಕೋರ್ಟ್ಗೆ ಅಗೌರವ ಸಲ್ಲಿಸುವ ಉದ್ದೇಶ ಹೊಂದಿರಲಿಲ್ಲ ಎಂದಿದ್ದಾರೆ.
'ನನ್ನ ವಕೀಲ ಮತ್ತು ಹಿರಿಯ ಸಹೋದ್ಯೋಗಿ ರಾಜೀವ್ ಧವನ್ ಅವರು ನ್ಯಾಯಾಂಗ ನಿಂದನೆಯ ತೀರ್ಪು ಹೊರಬಿದ್ದ ಕೂಡಲೇ ಒಂದು ರೂ ನೀಡಿದರು. ಅದನ್ನು ನಾನು ಖುಷಿಯಿಂದ ಸ್ವೀಕರಿಸಿದ್ದೇನೆ' ಎಂದು ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿದ್ದಾರೆ.
ಈ ಪ್ರಕರಣವು ಅಭಿವ್ಯಕ್ತಿ ಸ್ವಾತಂತ್ರ್ಯದ ವಿಚಾರದಲ್ಲಿ ಐತಿಹಾಸಿಕ ಸಂದರ್ಭವಾಗುತ್ತಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ಹೇಳಿದ್ದಾರೆ.












Click it and Unblock the Notifications