ನ್ಯಾಯಾಂಗ ನಿಂದನೆ: ಸುಪ್ರೀಂಕೋರ್ಟ್ ಕ್ಷಮೆ ಕೋರಲು ಪ್ರಶಾಂತ್ ಭೂಷಣ್ ನಕಾರ
ನವದೆಹಲಿ, ಆಗಸ್ಟ್ 24: ನ್ಯಾಯಾಂಗ ನಿಂದನೆ ಆರೋಪ ಎದುರಿಸುತ್ತಿರುವ ಹಿರಿಯ ವಕೀಲ, ತಮ್ಮ ಹೇಳಿಕೆಗೆ ಸುಪ್ರೀಂಕೋರ್ಟ್ ಕ್ಷಮೆ ಕೋರಲು ಮತ್ತೆ ನಿರಾಕರಿಸಿದ್ದಾರೆ.
ಕ್ಷಮೆಗೆ ನಿರಾಕರಿಸಿ ಅವರು ಸೋಮವಾರ ಹೊಸ ಹೇಳಿಕೆ ನೀಡಿದ್ದಾರೆ. ಸುಪ್ರೀಂಕೋರ್ಟ್ ಹಾಗೂ ಮುಖ್ಯ ನ್ಯಾಯಮೂರ್ತಿ ಅವರನ್ನು ಟೀಕಿಸುವ ಮೂಲಕ ತಮ್ಮನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಿರುವ ಟ್ವೀಟ್ಗಳನ್ನು ಹಿಂದಕ್ಕೆ ಪಡೆಯುವುದು ತಮ್ಮದೇ ಆತ್ಮಸಾಕ್ಷಿಗೆ ಮಾಡುವ ನಿಂದನೆ ಎಂಬ ಅರ್ಥ ನೀಡುತ್ತದೆ ಎಂದು ಅವರು ಹೇಳಿದ್ದಾರೆ.
'ನನ್ನ ಹೇಳಿಕೆಗಳಿಗೆ ಅಪ್ರಾಮಾಣಿಕವಾಗಿ ಕ್ಷಮೆ ಕೇಳುವುದು ನನ್ನ ಆತ್ಮಸಾಕ್ಷಿಗೆ ಮತ್ತು ನಾನು ಹೊಂದಿರುವ ಅತ್ಯುನ್ನತ ಗೌರವಯುತ ಸಂಸ್ಥೆಗೆ ಮಾಡುವ ನಿಂದನೆ ಮಾಡಿದಂತೆಯೇ ಆಗುತ್ತದೆ' ಎಂದು ಪ್ರಶಾಂತ್ ಭೂಷಣ್ ಹೇಳಿಕೆ ನೀಡಿದ್ದಾರೆ.
ಇದಕ್ಕೂ ಮುನ್ನ ನಡೆದ ವಿಚಾರಣೆಯಲ್ಲಿ ಅವರು ತಾವು ಕ್ಷಮೆ ಕೋರುವುದಿಲ್ಲ ಎಂದು ತಿಳಿಸಿದ್ದರು. ಮಹಾತ್ಮ ಗಾಂಧಿ ಅವರನ್ನು ಉಲ್ಲೇಖಿಸಿದ ಪ್ರಶಾಂತ್, ನಾನು ಅನುಕಂಪವನ್ನು ಕೋರುವುದಿಲ್ಲ. ಹೃದಯ ವೈಶಾಲ್ಯ ತೋರಿ ಎಂದು ಬೇಡುವುದಿಲ್ಲ. ಕಾನೂನಾತ್ಮಕವಾಗಿ ನ್ಯಾಯಾಲಯ ನನಗೆ ಯಾವ ಶಿಕ್ಷೆ ನೀಡುತ್ತದೆಯೋ ಅದನ್ನು ಖುಷಿಯಿಂದ ಅನುಭವಿಸಲು ಸಿದ್ಧನಿದ್ದೇನೆ ಎಂದು ತಿಳಿಸಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಅವಕಾಶವಿದೆ
ತಾವು ನ್ಯಾಯಾಲಯಕ್ಕೆ ಸಂಬಂಧಿಸಿದ ವ್ಯಕ್ತಿಯಲ್ಲ. ಆದರೆ ಕಾನೂನು ಹೋರಾಟಗಾರನಾಗಿ ಸಾರ್ವಜನಿಕ ಹಿತಾಸಕ್ತಿಯ ಅನೇಕ ಪ್ರಕರಣಗಳಲ್ಲಿ ವೈಯಕ್ತಿಕ ಮತ್ತು ವೃತ್ತಿಗೆ ಪೂರಕವಾಗಿ ಹೋರಾಟ ನಡೆಸಿದ್ದಾಗಿ ಅವರು ಹೇಳಿದ್ದಾರೆ. ಯಾವುದೋ ಅನ್ಯಮನಸ್ಕತೆಯಿಂದ ಟ್ವೀಟ್ಗಳನ್ನು ಮಾಡಿದ್ದಲ್ಲ. ಯಾವುದೇ ಪ್ರಜಾಪ್ರಭುತ್ವದಲ್ಲಿ ತಮ್ಮ ಅಭಿವ್ಯಕ್ತಗಳಿಗೆ ಅವಕಾಶವಿದೆ ಎಂದಿದ್ದಾರೆ.

ಲಕ್ಷ್ಮಣ ರೇಖೆ ದಾಟಬೇಡಿ
ಒಳ್ಳೆಯ ಕೆಲಸಗಳನ್ನು ಮಾಡುವುದು ಸ್ವಾಗತಾರ್ಹ. ಅದನ್ನು ಪ್ರಶಂಸಿಸುತ್ತೇವೆ. ಆದರೆ ಸಮತೋಲನ ಎಲ್ಲಿದೆ? ನಿಮ್ಮ ಹೇಳಿಕೆಗಳಲ್ಲಿ ಸಮತೋಲನ ಸಾಧಿಸದೆ ಹೋದರೆ ನೀವು ಸಂಸ್ಥೆಯನ್ನು ನಾಶಪಡಿಸುತ್ತೀರಿ. ನಾವು ಅಷ್ಟು ಸುಲಭವಾಗಿ ನ್ಯಾಯಾಂಗ ನಿಂದನೆಗೆ ಶಿಕ್ಷೆ ವಿಧಿಸುವುದಿಲ್ಲ. ಎಲ್ಲದಕ್ಕೂ ಲಕ್ಷ್ಮಣ ರೇಖೆ ಎನ್ನುವುದು ಇರುತ್ತದೆ. ನೀವೇಕೆ ಆ ಗೆರೆ ದಾಟುತ್ತೀರಿ ಎಂದು ನ್ಯಾಯಮೂರ್ತಿ ಅರುಣ್ ಮಿಶ್ರಾ ಪ್ರಶ್ನಿಸಿದ್ದಾರೆ.

ಶಿಕ್ಷೆ ನೀಡಬೇಡಿ-ಎಜಿ
ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆದುಕೊಳ್ಳಲು ಭೂಷಣ್ ಅವರಿಗೆ ಮತ್ತಷ್ಟು ಸಮಯ ನೀಡಬಹುದೇ ಎಂದು ನ್ಯಾಯಪೀಠ ಕೇಳಿತು. ಅದಕ್ಕೆ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರಿಗೆ ಸಮಯ ನೀಡಬೇಕು ಎಂದರು. ಸಾರ್ವಜನಿಕ ಒಳಿತಿಗಾಗಿ ಅವರು ಸಾಕಷ್ಟು ಕೆಲಸ ಮಾಡಿದ್ದಾರೆ. ನೀವು ಅವರನ್ನು ನ್ಯಾಯಾಂಗ ನಿಂದನೆಗೆ ತಪ್ಪಿತಸ್ಥ ಎಂದು ಹೇಳಿದ್ದೀರಿ. ಆದರೆ ಶಿಕ್ಷಿಸಬೇಡಿ ಎಂದು ಅಟಾರ್ನಿ ಜನರಲ್ ಮನವಿ ಮಾಡಿದರು.

ಎರಡು ದಿನಗಳ ಕಾಲಾವಕಾಶ
ಸಂಬಂಧಿತ ವ್ಯಕ್ತಿಯು ತಮ್ಮ ಹೇಳಿಕೆಗೆ ಪಶ್ಚಾತ್ತಾಪದ ಪ್ರಜ್ಞೆಯನ್ನು ತೋರಿಸಿದಾಗ ಮಾತ್ರವೇ ನ್ಯಾಯಾಲಯ ಅವರ ಮೇಲೆ ಹೆಚ್ಚಿನ ಅನುಕಂಪ ತೋರಿಸಲು ಸಾಧ್ಯ ಎಂದು ನ್ಯಾಯಪೀಠ, ಎರಡು ದಿನಗಳ ಸಮಯ ನೀಡಿ ತಮ್ಮ ಹೇಳಿಕೆಯನ್ನು ಮರುಪರಿಶೀಲಿಸಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಿತು.












Click it and Unblock the Notifications