ರಾಹುಲ್ ಗಾಂಧಿಯೇ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಎಂದ ಅಶೋಕ್ ಗೆಹ್ಲೋಟ್!
ಸೋಮವಾರ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಾಧಿಕಾರವು ಸೆಪ್ಟೆಂಬರ್ 20ರೊಳಗೆ ಹೊಸ ಮುಖ್ಯಸ್ಥರನ್ನು ಆಯ್ಕೆ ಮಾಡುವುದಕ್ಕೆ ಯೋಜನೆ ಹಾಕಿಕೊಂಡಿದೆ. ದೇಶಾದ್ಯಂತ ಕಾಂಗ್ರೆಸ್ ಕಾರ್ಯಕರ್ತರ ಭಾವನೆಗಳನ್ನು ಪರಿಗಣಿಸಿ ರಾಹುಲ್ ಗಾಂಧಿ ಪಾತ್ರವನ್ನು ಒಪ್ಪಿಕೊಳ್ಳಬೇಕು ಎಂದು ಗೆಹ್ಲೋಟ್ ಹೇಳಿದರು.
"ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷರಾಗದಿದ್ದರೆ ದೇಶದ ಕಾಂಗ್ರೆಸ್ಸಿಗರಿಗೆ ನಿರಾಶೆಯಾಗುತ್ತದೆ. ಪಕ್ಷದಲ್ಲಿಯೇ ಇರುವ ಅನೇಕರು ಅದನ್ನು ಎದುರು ನೋಡುತ್ತಿದ್ದಾರೆ. ಕಾಂಗ್ರೆಸ್ಸಿಗರ ಮನೋಬಯಕೆಯನ್ನು ಅರ್ಥ ಮಾಡಿಕೊಂಡು, ರಾಹುಲ್ ಗಾಂಧಿಯವರೇ ಸ್ವತಃ ಈ ಹುದ್ದೆಯನ್ನು ಸ್ವೀಕರಿಸಬೇಕು ಎಂದು ಅವರು ಹೇಳಿದ್ದಾರೆ.


ರಾಹುಲ್ ಗಾಂಧಿ ಪರವಾಗಿ ಕೈ ನಾಯಕರಲ್ಲಿ ಒಮ್ಮತ
ಎಐಸಿಸಿ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಆಯ್ಕೆಗೆ ಒಮ್ಮತದ ಅಭಿಪ್ರಾಯವಿದೆ. ಆದ್ದರಿಂದ, ಅವರು ಅದನ್ನು ಒಪ್ಪಿಕೊಳ್ಳಬೇಕು ಎಂದು ನಾನು ಭಾವಿಸುತ್ತೇನೆ. ಇದು ಗಾಂಧಿ ಅಥವಾ ಗಾಂಧಿಯೇತರ ಕುಟುಂಬದ ಬಗ್ಗೆ ಅಲ್ಲ. ಇದು ಸಂಘಟನೆಯ ಕೆಲಸವಾಗಿದ್ದು, ಯಾರೂ ಪ್ರಧಾನಿಯಾಗುತ್ತಿಲ್ಲ,'' ಎಂದು ಅಶೋಕ್ ಗೆಹ್ಲೋಟ್ ಹೇಳಿದರು.

ಗಾಂಧಿ ಕುಟುಂಬದವವರು ಪ್ರಧಾನಮಂತ್ರಿ ಆಗೇ ಇಲ್ಲ
"ಭಾರತದಲ್ಲಿ ಕಳೆದ 32 ವರ್ಷಗಳಲ್ಲಿ ಗಾಂಧಿ ಕುಟುಂಬದ ಯಾವುದೇ ವ್ಯಕ್ತಿ ಪ್ರಧಾನಮಂತ್ರಿಯಾಗಲಿಲ್ಲ, ಕೇಂದ್ರ ಸಚಿವರಾಗಲಿಲ್ಲ, ಮುಖ್ಯಮಂತ್ರಿಯಾಗಲಿಲ್ಲ. ಹಾಗಾದರೆ ಮೋದಿಜಿ ಈ ಕುಟುಂಬಕ್ಕೆ ಏಕೆ ಹೆದರುತ್ತಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 75 ವರ್ಷಗಳಲ್ಲಿ ಏನೂ ಆಗಿಲ್ಲ ಎಂದು ಏಕೆ ಹೇಳಬೇಕು? ದೇಶದಲ್ಲಿ ಎಲ್ಲರೂ ಏಕೆ ಕಾಂಗ್ರೆಸ್ ಮೇಲೆ ದಾಳಿ ಮಾಡುತ್ತಿದ್ದಾರೆ?. ಏಕೆಂದರೆ ಕಾಂಗ್ರೆಸ್ ಪಕ್ಷ ಮತ್ತು ದೇಶದ ಡಿಎನ್ಎ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರ ಒಂದೇ ಆಗಿದೆ. ಕಾಂಗ್ರೆಸ್ ಎಲ್ಲಾ ಧರ್ಮಗಳು ಮತ್ತು ವರ್ಗಗಳನ್ನು ಜೊತೆಯಲ್ಲಿ ಕರೆದೊಯ್ಯುವ ಪಕ್ಷವಾಗಿದೆ," ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

ಕಾಂಗ್ರೆಸ್ಸಿನಿಂದಲೇ ಪ್ರಜಾಪ್ರಭುತ್ವ ಇನ್ನೂ ಜೀವಂತ
ಕಳೆದ 75 ವರ್ಷಗಳಲ್ಲಿ ಕಾಂಗ್ರೆಸ್ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಜೀವಂತವಾಗಿಟ್ಟಿದೆ. ಈ ಕಾರಣದಿಂದಾಗಿ ಇಂದು ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿದ್ದರೆ, ಕೇಜ್ರಿವಾಲ್ ದೆಹಲಿಯ ಮುಖ್ಯಮಂತ್ರಿಯಾಗಿದ್ದಾರೆ. 75 ವರ್ಷಗಳಲ್ಲಿ ಕಾಂಗ್ರೆಸ್ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಜೀವಂತವಾಗಿರಿಸಿದೆ, ಇದು ದೇಶಕ್ಕೆ ಕಾಂಗ್ರೆಸ್ ಕೊಡುಗೆಯಾಗಿದೆ ಎಂದು ಅಶೋಕ್ ಗೆಹ್ಲೋಟ್ ಹೇಳಿದರು.

2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿನದ್ದೇ ಗೆಲುವು
"ರಾಜ್ಯದಲ್ಲಿ ನಡೆಯಲಿರುವ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ. 2024ರ ಲೋಕಸಭೆ ಚುನಾವಣೆಯಲ್ಲೂ ನಾವೇ ಗೆಲ್ಲುತ್ತೇವೆ. ಈ ಬಾರಿ ಪ್ರಧಾನಿ ಮೋದಿಗೆ ಇದು ಸುಲಭದ ಆಟವಲ್ಲ. ಬಿಹಾರದಲ್ಲಿ ಬಿಜೆಪಿಗೆ ನಿತೀಶ್ ಕುಮಾರ್ ಹೊಡೆತ ನೀಡಿದ ರೀತಿಯು ಕೇಂದ್ರ ಸರ್ಕಾರವನ್ನು ಮೂಲೆಗುಂಪು ಮಾಡಿದೆ. ಹಣದುಬ್ಬರ ಮತ್ತು ನಿರುದ್ಯೋಗ ಸಮಸ್ಯೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ನೇತೃತ್ವದ ಪ್ರತಿಭಟನೆಗಳಿಂದ ಮೋದಿ ಸರ್ಕಾರವೇ ಶೇಕ್ ಆಗಿದೆ ಎಂದು ಗೆಹ್ಲೋಟ್ ಹೇಳಿದ್ದಾರೆ.












Click it and Unblock the Notifications